- Kannada News Photo gallery Narendra Modi in Karnataka visits Chikkaballapur Bengaluru inagurated kr puram whitefield metro and bjp maha sangama at Davanagere
Narendra Modi in Karnataka: ಕರ್ನಾಟಕದಲ್ಲಿ ಮೋದಿ ಮೋಡಿ; ಚಿತ್ರಗಳಲ್ಲಿ ನೋಡಿ
ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸತತವಾಗಿ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜ್ಯದ ಕೆಲವು ಕಡೆಗಳಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಚಿಕ್ಕಬಳ್ಳಾಪುರದಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಉದ್ಘಾಟನೆ, ಬೆಂಗಳೂರಿನಲ್ಲಿ ಕೆಆರ್ ಪುರಂ - ವೈಟ್ಫೀಲ್ಡ್ ಮೆಟ್ರೋ ಮಾರ್ಗ ಲೋಕಾರ್ಪಣೆ ಹಾಗೂ ಆ ನಂತರ ದಾವಣಗೆರೆಯಲ್ಲಿ ಬಿಜೆಪಿಯ ಮಹಾ ಸಂಗಮ ಸಮಾವೇಶದಲ್ಲಿ ಭಾಗಿಯಾದರು. ಇಡೀ ದಿನದ ಮೋದಿ ಕಾರ್ಯಕ್ರಮದ ಚಿತ್ರ ಸಹಿತ ವಿವರಣೆ ಇಲ್ಲಿದೆ.
Updated on: Mar 25, 2023 | 7:14 PM

ಬೆಳಿಗ್ಗೆ ಎಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸ್ವಾಗತಿಸಿದರು. ನಂತರ ಮೋದಿ ಸೇನಾ ಹೆಲಿಕಾಪ್ಟರ್ನಲ್ಲಿ ಮುದ್ದೇನಹಳ್ಳಿಗೆ ತೆರಳಿದರು.

ರಾಜ್ಯಪಾಲರ ಸ್ವಾಗತದ ನಂತರ ಮೋದಿ ಅವರು ಎಚ್ಎಎಲ್ ಏರ್ಪೋರ್ಟ್ನಿಂದ ವಾಯುಪಡೆ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಗ್ರಾಮಕ್ಕೆ ತೆರಳಿದರು.

ಮುದ್ದೇನಹಳ್ಳಿಯಲ್ಲಿ ಸರ್ಎಂ ವಿಶ್ವೇಶ್ವರಯ್ಯ ಸಮಾಧಿಗೆ ತೆರಳಿದ ಪ್ರಧಾನಿ ಮೋದಿ ಪುಷ್ಪಾರ್ಚನೆ ಮಾಡಿ ನಮಿಸಿದರು. ಇದೇ ವೇಳೆ ಮೋದಿ ಅವರನ್ನು ನೋಡಲು ಮುದ್ದೇನಹಳ್ಳಿ ಸರ್ಕಲ್ ಬಳಿ ಸಾರ್ವಜನಿಕರು ಜಮಾಯಿಸಿದ್ದರು. ಸಾರ್ವಜನಿಕರತ್ತ ಕೈಬೀಸಿದ ನಂತರ ಮೋದಿ ತೆರಳಿದರು.

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾಗಿದೆ. ಇಂತಹ ಪುಣ್ಯಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ ಎಂದು ಮೋದಿ ಹೇಳಿದರು.

ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ & ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಸತ್ಯಸಾಯಿ ಆಶ್ರಮದಿಂದ ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇವೆ ನಡೆಯುತ್ತಿದೆ. 2014ಕ್ಕಿಂತ ಮೊದಲು 300ಕ್ಕಿಂತ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು ಇಂದು ದೇಶದಲ್ಲಿ 650ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಕರ್ನಾಟಕದಲ್ಲೇ ಸುಮಾರು 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ಇವೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ ಆಗುತ್ತಿದೆ. ಬಡವರ ಅಭಿವೃದ್ಧಿಯೇ ಬಿಜೆಪಿಯ ಪರಮೋಚ್ಛ ಗುರಿಯಾಗಿದೆ ಎಂದರು. ಸಾಯಿಬಾಬಾ ಜೊತೆ ನನಗೆ ನಿಕಟ ಸಂಬಂಧ ಇತ್ತು ಎಂದೂ ಹೇಳಿದರು.

ನಂತರ ಬೆಂಗಳೂರಿನ ಸತ್ಯಸಾಯಿ ಆಶ್ರಮದ ಹೆಲಿಪ್ಯಾಡ್ಗೆ ತೆರಳಿ ಅಲ್ಲಿಂದ ಕಾರಿನ ಮೂಲಕ ಮೆಟ್ರೋ ಸ್ಟೇಷನ್ ವರೆಗೆ ರೋಡ್ ಶೋ ನಡೆಸಿದರು. ವೈಟ್ ಫೀಲ್ಡ್ - ಕೆಆರ್ ಪುರಂ ಮೆಟ್ರೋ ಲೈನ್ ಲೋಕಾರ್ಪಣೆ ಮಾಡಿದ ಬಳಿಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.

ಮೆಟ್ರೋದಲ್ಲಿ ಸಂಚರಿಸುವ ವೇಳೆ ಪ್ರಧಾನಿಯವರು ವಿದ್ಯಾರ್ಥಿಗಳು, ಕಾರ್ಮಿಕರ ಜತೆ ಸಂವಾದ ನಡೆಸಿದರು.

ಕೆ.ಆರ್.ಪುರಂನಿಂದ ವೈಟ್ಫೀಲ್ಡ್ವರೆಗಿನ ನೂತನ ಮೆಟ್ರೋ ಮಾರ್ಗ 4,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 13.71 ಕಿಲೋಮೀಟರ್ ಇರುವ ನೂತನ ನೇರಳ ಮಾರ್ಗ 12 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.

ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿಯ ಮಹಾಸಂಗಮ ಸಮಾವೇಶದ ವೇದಿಕೆ ಬಳಿ ತೆರೆದ ವಾಹನದಲ್ಲಿ ಸಂಚರಿಸಿದ ಮೋದಿ ನಂತರ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಲಕ್ಷಾಂತರ ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ನವರು ಹಲವು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇವುಗಳೆಲ್ಲ ಪೊಳ್ಳು ಭರವಸೆಗಳು. ಅವರಿಗೆ ಯಾವುದೇ ಸಕಾರಾತ್ಮಕವಾದ ಧೋರಣೆಗಳೇ ಇಲ್ಲ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಿ ಸ್ಥಿರ ಸರ್ಕಾರ ರಚನೆಗೆ ನೆರವಾಗಿ ಎಂದು ಮತದಾರರಲ್ಲಿ ಮನವಿ ಮಾಡಿದರು. ನಂತರ ಶಿವಮೊಗ್ಗಕ್ಕೆ ತೆರಳಿ, ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ನಿರ್ಮಿಸಿದರು.



















