
ಇಂದು(ಜೂ.11) ನರೇಂದ್ರ ಮೋದಿ ಸಂಪುಟದಲ್ಲಿ ಕರ್ನಾಟಕದ ಜೋಶಿ, ಶೋಭಾ, ಎಚ್ಡಿಕೆ, ಸೋಮಣ್ಣ ಸೇರಿ ನಾಲ್ವರು ಇಂದು(ಮಂಗಳವಾರ) ಅಧಿಕಾರ ವಹಿಸಿಕೊಂಡರು.

ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವರಾಗಿ ಕರ್ನಾಟಕದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದರು. ಜೊತೆಗೆ ‘ಸತತವಾಗಿ 3ನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಭಾರತೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಸರಕಾರದ ಸಂಪುಟದಲ್ಲಿ ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ನನಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಹಂಚಿಕೆ ಮಾಡಿದ್ದು, ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದರು.

ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯಖಾತೆ ಸಚಿವೆಯಾಗಿ ನೇಮಕವಾದ ಶೋಭಾ ಕರಂದ್ಲಾಜೆ ಅವರು ಇಂದು ದೆಹಲಿಯ ಕಛೇರಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಮಾನ್ಸುಖ್ ಮಾಂಡವಿಯ ಅವರ ಸಮ್ಮುಖದಲ್ಲಿ ಅಧಿಕಾರದ ಜವಾಬ್ದಾರಿ ಸ್ವೀಕರಿಸಿದರು. ಕೇಂದ್ರದ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕಾ ರಾಜ್ಯಖಾತೆ ಸಚಿವೆಯಾಗಿ ಅವರನ್ನು ನೇಮಕವಾದ ಮಾಡಲಾಗಿದ್ದು, ಇಂದು ದೆಹಲಿಯ ಕಛೇರಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಜಿತನ್ ರಾಂ ಮಾಂಝಿ ಅವರ ಸಮ್ಮುಖದಲ್ಲಿ ಅಧಿಕಾರದ ಜವಾಬ್ದಾರಿ ಸ್ವೀಕರಿಸಿದ್ದಾರೆ.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವನಾಗಿ ಪ್ರಹ್ಲಾದ್ ಜೋಶಿ ಅವರು ಅಧಿಕಾರ ವಹಿಸಿಕೊಂಡರು. ಈ ವೇಳೆ ಮಾತನಾಡಿ, ‘ 2047 ರ ವೇಳೆಗೆ ಭಾರತದ ಇಂಧನ ಸ್ವಾತಂತ್ರ್ಯ ಸಾಧಿಸುವುದು ನಮ್ಮ ಸಂಕಲ್ಪವಾಗಿದೆ. ನವೀಕರಿಸಬಹುದಾದ ಇಂಧನದಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ದೃಷ್ಟಿಯೊಂದಿಗೆ ನಾವು ಮುಂದುವರಿಯುತ್ತೇವೆ ಎಂದರು.

ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾಗಿ ನೇಮಕವಾದ ವಿ.ಸೋಮಣ್ಣ ಅವರು ಇಂದು(ಜೂ.11) ದೆಹಲಿಯ ರೈಲ್ವೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಅಧಿಕಾರದ ಜವಾಬ್ದಾರಿ ವಹಿಸಿಕೊಂಡರು. ಈ ಸಂದರ್ಭದಲ್ಲಿ, ಮಾಜಿ ಸಂಸದರಾದ ಶ್ರೀ ಜಿ.ಎಸ್ ಬಸವರಾಜು ಅವರು, ಶ್ರೀ ಉಮೇಶ್ ಜಾದವ್ ಅವರು, ಬಾಗಲಕೋಟೆಯ ಸಂಸದರಾದ ಶ್ರೀ ಪಿ.ಸಿ ಗದ್ದಿಗೌಡ ಅವರು ಹಾಗೂ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.