
ಹಿರಿಯ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಸಲುವಾಗಿಯೇ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿರಡಿ ಶ್ರೀ ಸಾಯಿ ಬಾಬಾ ದೇವಸ್ಥಾನದ ಎದುರು ಸುಮಲತಾ ಅಂಬರೀಷ್ ಅವರು ಫೋಟೋ ತೆಗೆಸಿಕೊಂಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳಿಗೆ ದರ್ಶನ್ ವಿಚಾರ ನೆನಪಾಗಿದೆ. ಫೋಟೋಗಳು ವೈರಲ್ ಆಗಿವೆ.
ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪಡೆದ ಪ್ರಸಾದದ ಫೋಟೋವನ್ನು ಕೂಡ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುಮಲತಾ ಅಂಬರೀಷ್ ಅವರು ಹಂಚಿಕೊಂಡಿದ್ದಾರೆ. ಕೆಲಸದ ನಡುವೆ ಬಿಡುವು ಮಾಡಿಕೊಂಡು ಅವರು ದೇವರ ದರ್ಶನ ಪಡೆದಿದ್ದಾರೆ.
ಅಂಬರೀಷ್ ಕುಟುಂಬದ ಜೊತೆ ದರ್ಶನ್ ಅವರಿಗೆ ವಿಶೇಷ ನಂಟು ಇದೆ. ಅಂಬರೀಷ್ ಅವರಿಗೆ ದರ್ಶನ್ ತುಂಬ ಗೌರವ ನೀಡುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ದರ್ಶನ್ ಅವರು ಅಂಬಿ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿದ್ದುಂಟು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಸೇರುವಂತಾಯಿತು. ಆಗಸ್ಟ್ 14ರವರೆಗೂ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯಕ್ಕಂತೂ ಜಾಮೀನು ಸಿಗುವ ಲಕ್ಷಣ ಕಾಣುತ್ತಿಲ್ಲ.
ಈ ಕೇಸ್ ಬಗ್ಗೆ ಸುಮಲತಾ ಅಂಬರೀಷ್ ಅವರು ಮೌನವಾಗಿದ್ದರು. ಸಾಕಷ್ಟು ದಿನಗಳು ಕಳೆದ ಬಳಿಕ ಅವರು ಮೌನ ಮುರಿದಿದ್ದರು. ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಅವರು ಸುದೀರ್ಘ ಪತ್ರವನ್ನು ಹಂಚಿಕೊಂಡಿದ್ದರು.
ಕೊಲೆ ಆರೋಪದಲ್ಲಿ ದರ್ಶನ್ಗೆ ಸಂಕಷ್ಟ ಹೆಚ್ಚಾಗುತ್ತಲೇ ಇದೆ. ಬೆಂಗಳೂರು ಪೊಲೀಸರು ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಅನೇಕ ಸಾಕ್ಷಿಗಳನ್ನು ಕಲೆಹಾಕಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ಸಾಕ್ಷಿಗಳು ಸಿಗುತ್ತಿವೆ.