- Kannada News Photo gallery Union minister HD Kumaraswamy faces prosecution, slams Congress for accusation against him, Kannada news
ಇದಕ್ಕೆಲ್ಲಾ ನಾನು ಹೆದರುವುದಿಲ್ಲ: ಕಾಂಗ್ರೆಸ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು, ಆಗಸ್ಟ್ 21: ನೋಡೋಣ, ಇದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಎಸ್ಐಟಿ ಅನುಮತಿ ಕೇಳಿದ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ, ತನಿಖೆ ಮುಗಿದಿದ್ದರೆ ಯಾಕೆ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು.
Updated on:Aug 21, 2024 | 2:18 PM

ಗಣಿ ಅಕ್ರಮಗಳ ಪ್ರಕರಣದ ತನಿಖೆ ಶುರುವಾಯ್ತು. 2010 / 12ರಲ್ಲಿ ಸರ್ಕಾರಕ್ಕೆ ಎರಡು ಮೂರು ಟ್ರಂಕ್ಗಳಲ್ಲಿ ತಂದು ವರದಿ ಸಲ್ಲಿಸಿದರು. ಮೂರು ಜನ ಮಾಜಿ ಸಿಎಂಗಳ ಬಗ್ಗೆ ಕೆಲವು ವಿಷಯಗಳನ್ನ ಪ್ರಸ್ತಾಪ ಮಾಡಿದ್ದಾರೆ. ಎಸ್ಎಂ ಕೃಷ್ಣ, ಧರ್ಮಸಿಂಗ್ ಹಾಗೂ ನನ್ನದೂ ಸೇರಿ ಚಾಪ್ಟರ್ಗಳಿವೆ. ಜಂತಕಲ್ ಮತ್ತು ಸಾಯಿ ವೆಂಕಟೇಶ್ವರ ಬಗ್ಗೆ ಯುವಿ ಸಿಂಗ್ ಕೊಟ್ಟಿರುವ ವರದಿಯಲ್ಲಿ, ಎರಡು ಪ್ರಕರಣಗಳಲ್ಲಿ ಯಾವುದೇ ಕ್ರಮಕ್ಕೆ ಶಿಫಾರಸು ಮಾಡುವುದಿಲ್ಲ, ಮುಂದಿನದ್ದು ಸರ್ಕಾರಕ್ಕೆ ಬಿಟ್ಟಿದ್ದು ಎಂದಿತ್ತು. ಅವತ್ತಿನ ಸರ್ಕಾರದ ಮೇಲೆ ದಾಖಲೆಗಳ ಸಮೇತ ಜನತೆ ಮುಂದೆ ಇಟ್ಟೆ ಎಂದು ಅವರು ತಿಳಿಸಿದರು.

2008ರಲ್ಲಿ ಸಿಎಂ ಆದ ಎರಡೇ ತಿಂಗಳಲ್ಲಿ ಗಣಿ ಮಾಲೀಕರಿಂದ 150 ಕೊಟಿ ರೂ. ಸಂಗ್ರಹ ಮಾಡಿದ್ದೇನೆ ಎಂದು ಬೆಂಬಲ ಕೊಟ್ಟ ಮೊತ್ತೊಬ್ಬ ಶಾಸಕರು ಆರೋಪ ಮಾಡಿದ್ದರು. ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ನನ್ನ ಸಿಲುಕಿಸಬೇಕಂತ ಹೊರಟಿತ್ತು. ಶಾಸಕರ ರಕ್ಷಣೆ ಪಡೆದು ನನ್ನ ಮೇಲೆ ಇದ್ದ ಅಪಾದನೆಯನ್ನ ಏಕಾಂಗಿಯಾಗಿ ಹೋರಾಟ ನಡೆಸಲು ಸಿದ್ದನಿದ್ದೇನೆ ಎಂದು ಹೇಳಿದ್ದೆ. ಚರ್ಚೆಯೂ ನಡೆಯಿತು. ಅದಕ್ಕೆ ದೊಡ್ಡ ಇತಿಹಾಸ ಇದೆ ನ್ಯಾಯಾಂಗ ತನಿಖೆಗೆ ಯಾರೂ ಅರ್ಜಿ ಹಾಕಲಿಲ್ಲ. ವಿರೋಧ ಪಕ್ಷದವರೂ ಹಾಕಲಿಲ್ಲ ನಮ್ಮ ಬೆಂಬಲಿತ ಶಾಸಕರು ಹಾಕಲಿಲ್ಲ. ಲೋಕಯುಕ್ತ ತನಿಖೆಗೂ ಆದೇಶ ಆಯ್ತು. ಆ ಆದೇಶ ಮಾಡಿದ್ದು ನಾನೇ ಎಂದು ಕುಮಾರಸ್ವಾಮಿ ಹೇಳಿದರು.

ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ವಿರುದ್ಧ 61 ಕೇಸ್ಗಳು ಇವೆಯಂತೆ. ತನಿಖೆಯಾಗದೆ 50 ಕೇಸ್ ಬಾಕಿ ಉಳಿದಿವೆ. ಅವರು (ಸಿದ್ದರಾಮಯ್ಯ) ನನ್ನದು ತೆರೆದ ಪುಸ್ತಕ, ಹಿಂದುಳಿದ ನಾಯಕ ಎಂದಿದ್ದಾರೆ. ಸರ್ಕಾರ ಬೀಳಿಸುವುದಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಅವರು ಸರಿ ಇದ್ದಿದ್ದರೆ ವಿರೋಧ ಪಕ್ಷದವರು ಏನು ಮಾಡುತ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

2017ರಲ್ಲಿ ನನಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟರು. 2018ರಲ್ಲಿ ನಾನು ಮನಸ್ಸು ಮಾಡಿದ್ರೆ ಕೇಸ್ ಮುಚ್ಚಿ ಹಾಕಿಸಬಹುದಿತ್ತು. ಒಬ್ಬ ಅಧಿಕಾರಿಯ ಮೂಲಕ ಹೆಚ್ಡಿಕೆ ಬಂಧಿಸಬೇಕೆಂದು ಪ್ಲ್ಯಾನ್ ನಡೆದಿದೆ. ವಕೀಲರ ಸೂಚನೆಯಂತೆ ಜಾಮೀನು ಪಡೆದುಕೊಂಡು ಹೋದೆ. ಇದಕ್ಕೇಕೆ ಜಾಮೀನು ಪಡೆದ್ರಿ ಎಂದು ಅಧಿಕಾರಿಗಳು ಹೇಳಿದ್ದರು. 3 ತಿಂಗಳಲ್ಲಿ ತನಿಖೆ ಮುಗಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. 2018ರಲ್ಲಿ ಎಸ್ಐಟಿ ಅಧಿಕಾರಿಗಳು ರಿಪೋರ್ಟ್ ಸಲ್ಲಿಸಿದ್ದಾರೆ. ಇಷ್ಟಾದ್ರೂ ಕಾಂಗ್ರೆಸ್ಸಿಗರ ಜತೆ ಸೇರಿ ಸರ್ಕಾರ ಮಾಡಬೇಕಾಯ್ತು ಎಂದರು.

ಸಿಎಂ ಸಿದ್ದರಾಮಯ್ಯ ಕಾನೂನು ಅಲಹೆಗಾರ ಪೊನ್ನಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಪೊನ್ನಣ್ಣ ಅವರೇ ನೀವೊಬ್ಬರೇ ಅಲ್ಲ ಕಾನೂನು ತಜ್ಞರು. ಮುಖ್ಯಮಂತ್ರಿಗಳ ಮನೆಯಿಂದಲೇ ನನಗೆ ಮಾಹಿತಿ ಕೊಡುತ್ತಾರೆ. ಸರ್ಕಾರದ ಮಟ್ಟದಲ್ಲಿ ಈ ದಾಖಲೆ ಇದೆಯೋ ಇಲ್ವೋ ಗೊತ್ತಿಲ್ಲ. ತನಿಖೆ ನಡೆಸುತ್ತಿರುವ ಎಸ್ಐಟಿ ಬಳಿ ಇದೆಯೋ ಇಲ್ವೋ ಗೊತ್ತಿಲ್ಲ. ನಾನು ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಂಡಿದ್ದೇನೆ ಎಂದರು.

ರಾಜ್ಯಪಾಲರ ಹತ್ತಿರ ಅನುಮತಿ ಕೇಳಿ ಎಂದು ಕೇಳಿದ್ರಾ ಎಂದು ಪ್ರಶ್ನಿಸಿದ ಅವರು, ಸಾಯಿ ವೆಂಕಟೇಶ್ವರ ಕೇಸ್ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ. ಸಾಯಿ ವೆಂಕಟೇಶ್ವರ ಮಿನರಲ್ಸ್ನಲ್ಲಿ ನನ್ನ ಸಹಿ ಬಗ್ಗೆ ತನಿಖೆ ನಡೆಯುತ್ತಿದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಕೋರ್ಟನ್ನೇ ಯಾಮಾರಿಸಿದೆ ಎಂದರು.
Published On - 12:12 pm, Wed, 21 August 24



