‘ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು’ ಸಿನಿಮಾವನ್ನು ಮಾಧವಾನಂದ ವೈ. ಅವರು ‘ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀ ಸ. ಸ. ಪ್ರಭೂಜೀ ಮಹಾರಾಜರ ಮಾರ್ಗದರ್ಶನದಲ್ಲಿ ರಾಜಾ ರವಿಶಂಕರ್ ಅವರು ನಿರ್ದೇಶನದ ಮಾಡುತ್ತಿದ್ದಾರೆ.
ಈ ಸಿನಿಮಾದ ಹಾಡುಗಳು ಸಿದ್ಧವಾಗಿವೆ. ಸಿನಿಮಾ ತಂಡದ ಸದಸ್ಯರು ಧರ್ಮಸ್ಥಳಕ್ಕೆ ತೆರಳಿ ಶ್ರೀಮಂಜನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಂದ ಲಿರಿಕಲ್ ವಿಡಿಯೋದ ಪೋಸ್ಟರ್ ಬಿಡುಗಡೆ ಮಾಡಿಸಲಾಯಿತು. ಎ.ಟಿ. ರವೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ.
‘ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು’ ಸಿನಿಮಾ ಯಶಸ್ವಿ ಆಗಲಿ ಎಂದು ವೀರೇಂದ್ರ ಹೆಗ್ಗಡೆ ಅವರು ಹಾರೈಸಿದರು. ಅಲ್ಲದೇ, ಇಂಚಗೇರಿ ಆಧ್ಯಾತ್ಮ ಸಂಪ್ರದಾಯ ಹಾಗೂ ಸಿನಿಮಾದ ಬಗ್ಗೆ ಅನೇಕ ವಿಷಯಗಳನ್ನು ಅವರು ಚರ್ಚಿಸಿದರು. ಸಿ. ನಾರಾಯಣ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಖ್ಯಾತ ಗಾಯಕ ರವೀಂದ್ರ ಸೊರಗಾವಿ ಅವರು ಹಾಡಿದ ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ ಭಕ್ತಿ ಪ್ರಧಾನ ಗೀತೆಯನ್ನು ಪ್ರಶಂಸಿಸಿದರು. ಚಿತ್ರದ ಹಾಡುಗಳು ಮತ್ತು ಸಿನಿಮಾ ಭರ್ಜರಿ ಯಶಸ್ಸು ಕಾಣಲಿ ಎಂದು ವೀರೇಂದ್ರ ಹೆಗ್ಗಡೆ ಅವರು ಹಾರೈಸಿದರು.
ರವಿ ನಾರಾಯಣ್ ಅವರು ಶ್ರೀಸಂಗಮೇಶ್ವರರ ಪಾತ್ರ ಮಾಡುತ್ತಿದ್ದಾರೆ. ರಾಮಕೃಷ್ಣ, ವಿನಯಾ ಪ್ರಸಾದ್, ವಿಜಯಕಾಶಿ, ಸಂದೀಪ್ ಮಲಾನಿ, ತುಷಾರ್ ಮಲಗೊಂಡ, ಭವ್ಯಶ್ರೀ ರೈ, ನಾರಾಯಣ ಸ್ವಾಮಿ ಮುಂತಾದವರು ನಟಿಸಿದ್ದಾರೆ. ಡಿ. ರವಿ ಅವರ ಸಂಕಲನ, ಕುಮಾರ್ ನೊಣವಿನಕೆರೆ ಅವರ ಪ್ರಸಾದನ ಈ ಸಿನಿಮಾಗಿದೆ.