ವಿಜಯನಗರ ಜಿಲ್ಲೆಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ವಿಮಾನಯಾನ ಮಾಡಿಸಿದ್ದಾರೆ. ಶಿವಮೊಗ್ಗ ಏರ್ಪೋರ್ಟ್ ಗೋವಾ ಗೋವಾಕ್ಕೆ ವಿಮಾನ ಪ್ರಯಾಣದ ಉಡುಗೊರೆ ನೀಡಿದ್ದಾರೆ. ಕೃಷಿ ಕಾರ್ಮಿಕರ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಈ ರೈತನ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ರೈತ ವಿಶ್ವನಾಥ್, ತಮ್ಮ ಜಮೀನಿಗೆ ಖಾಯಂ ಆಗಿ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳಾ ಕಾರ್ಮಿಕರಿಗೆ ಏನಾದರೂ ಒಂದು ಜೀವನಪೂರ್ತಿ ಮರೆಯಲಾಗದ ಉಡುಗೊರೆ ಕೊಡಬೇಕು ಎಂದುಕೊಂಡಿದ್ದರು. ಅದರಂತೆ ಎಂದೂ ವಿಮಾನ ಹತ್ತದ ಮಹಿಳಾ ಕಾರ್ಮಿಕರಿಗೆ ವಿಮಾನಯಾನ ಮಾಡಿಸಿದ್ದಾರೆ. ಈ ಮೂಲಕ ಅವರು ಜೀವನ ಪರ್ಯ೦ತ ನೆನಪಿನಲ್ಲಿಡುವಂತೆ ಮಾಡಿದ್ದಾರೆ.
ವಿಶ್ವನಾಥ್ ಅವರ ತೋಟದಲ್ಲಿ ಕೆಲಸ ಮಾಡುವಾಗ ಯಾವುದಾದರೂ ವಿಮಾನ ಬುರ್ರೆಂದು ಶಬ್ದ ಮಾಡಿಕೊಂಡು ಮೇಲೆ ಹೋಗುತ್ತಿದ್ದರೆ, ಎಲ್ಲರೂ ಕೆಲಸ ಬಿಟ್ಟು ಕೆಲ ಕ್ಷಣ ಆಕಾಶದತ್ತ ಕಣ್ಣು ಹಾಯಿಸಿ ವಿಮಾನ ಹೋಗುವುದನ್ನು ನೋಡಿ ಖುಷಿ ಪಡುತ್ತಿದ್ದರು. ಆಗ ರೈತ ವಿಶ್ವನಾಥ್ ಅವರಿಗೆ ಹೊಳೆದಿದ್ದೇ ಎಲ್ಲ ಕಾರ್ಮಿಕರಿಗೆ ವಿಮಾನದಲ್ಲಿ ಪ್ರಯಾಣ ಮಾಡಿಸಿ ಅವರ ಆಸೆ ಈಡೇರಿಸಬೇಕೆಂದು ಎಂದು ತೀರ್ಮಾನಿಸಿದ್ದರು.
ತಾನು ಯೋಜನೆ ರೂಪಿಸಿದಂತೆ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಬರುತ್ತಿದ್ದ 10 ಮಹಿಳಾ ಕಾರ್ಮಿಕರಿಗೆ ಹಾಗೂ ತಮ್ಮನ್ನು ಸೇರಿದಂತೆ 11 ಜನರಿಗೆ ವಿಮಾನದಲ್ಲಿ ಗೋವಾಗೆ ಹೋಗಲು ಟಿಕೆಟ್ ಬುಕಿಂಗ್ ಮಾಡಿದ್ದಾರೆ. ನಂತರ, ಎಲ್ಲ ಕಾರ್ಮಿಕರನ್ನು ತನ್ನೊಂದಿಗೆ ಹತ್ತಿದ ವಿಮಾನ ನಿಲ್ದಾಣವಾದ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದಾರೆ.
ಎಲ್ಲ ಮಹಿಳೆಯರೂ ಒಂದೇ ತರಹದ ಸೀರೆ ಧರಿಸಿಕೊಂಡು ಶಿವಮೊಗ್ಗದಿಂದ ಗೋವಾಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ತಾವು ಪ್ರತಿದಿನ ಹೊಲದಲ್ಲಿ ಕೆಲಸ ಮಾಡುವಾಗ ತಲೆ ಎತ್ತಿ ಆಕಾಶದಲ್ಲಿ ನೋಡುತ್ತಿದ್ದ ವಿಮಾನದಲ್ಲಿ ನಾವೇ ಪ್ರಯಾಣ ಮಾಡುತ್ತಿದ್ದೇವೆ ಎಂಬ ಸಂತಸಗೊಳ್ಳುತ್ತಿದ್ದರು . ಇದೀಗ ಅವರೇ ವಿಮಾನದಲ್ಲಿ ಹಾರಾಡಿ ಫುಲ್ ಖುಷ್ ಆಗಿದ್ದಾರೆ.
ಈ ಎಲ್ಲದಕ್ಕೆ ಸಾಕ್ಷಿಯಾದ ಆಧುನಿಕ ರೈತ ವಿಶ್ವನಾಥ್. ಈತನ ಜಮೀನಿನಲ್ಲಿ ಯಾವುದೇ ಕೆಲಸ ಇದ್ದರೂ ಈ ಮಹಿಳೆಯರು ಇಲ್ಲ ಎನ್ನದೇ ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ, ಜಮೀನಿನ ಮಾಲೀಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಕೂಲಿ ಕಾರ್ಮಿಕರ ಆಸೆಯನ್ನು ಈ ರೈತ ಈಡೇರಿಸಿದ್ದಾರೆ.
ನಮ್ಮ ಕರ್ನಾಟಕ ರಾಜ್ಯ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಕೃಷಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುವುದಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಳಲು ಕೇಳಿಬರುತ್ತಿದೆ. ಹೀಗಾಗಿ, ಬಹುತೇಕ ಜಮೀನುದಾರರು, ರೈತರು ಕೃಷಿ ಯಂತ್ರೋಪಕರಣ ಮೊರೆ ಹೋಗಿದ್ದಾರೆ. ಆದರೂ, ಕೆಲವು ಕೆಲಸಗಳನ್ನು ಕಾರ್ಮಿಕರೇ ಮಾಡಬೇಕಾದ್ದರಿಂದ ಇದಕ್ಕೆ ಪರ್ಯಾಯ ಇಲ್ಲದಂತಾಗಿದೆ. ಆದ್ದರಿಂದ ಜಮೀನು ಹೊಂದಿರುವ ರೈತರು ಕೃಷಿ ಕಾರ್ಮಿಕರ ಮನೆಗೆ ಹೋಗಿ ಅವರ ಮನವೊಲಿಸಿ ಜಮೀನಿಗೆ ಕರೆದೊಯ್ದು ಕೆಲಸ ಮಾಡಿಸುತ್ತಾರೆ. ಹೀಗಿರುವಾಗ ವಿಶ್ವನಾಥ್ ಅವರು ತಮ್ಮ ತೋಟಕ್ಕೆ ಬರುವವ ಮಹಿಳಾ ಕೂಲಿಗಾರರನ್ನು ವಿಮಾನ ಹತ್ತಿಸಿದ್ದಾರೆ.
ಇನ್ನು ಮಹಿಳಾ ಕಾರ್ಮಿಕರ ಆಸೆಯಂತೆ ಶಿವಮೊಗ್ಗ ಏರ್ಪೋರ್ಟ್ ಗೋವಾದವರೆಗೂ ವಿಮಾನ ಪ್ರಯಾಣ ಮಾಡಿಸಿದ ವಿಶ್ವನಾತ್ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.