ಕಳೆದ ಏಪ್ರಿಲ್ 3 ರ ಸಾಯಂಕಾಲ 6 ಗಂಟೆ ಸುಮಾರಿಗೆ ತೆರೆದ ಕೊಳವೆ ಬಾವಿಯಲ್ಲಿ ತಲೆ ಕೆಳಗಾಗಿ ಬಿದಿದ್ದು, ಜೀವನ್ಮರಣದ ನಡುವೆ ಹೋರಾಡಿ, 20 ಗಂಟೆಗಳ ಸತತ ರಕ್ಷಣಾ ಕಾರ್ಯಾಚರಣೆ ಬಳಿಕ 2 ವರ್ಷದ ಮಗು ಸಾತ್ವಿಕ್ ಬದುಕಿ ಬಂದಿದ್ದ. ಇದೀಗ ಮಗುವನ್ನು ಸುರಕ್ಷಿತವಾಗಿ ಹೊರತಂದ ವಿವಿಧ ರಕ್ಷಣಾ ತಂಡಗಳಿಗೆ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸಲಾಗಿದೆ.
ಲಚ್ಯಾಣ ಕೊಳವೆ ಬಾವಿ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆ ವಿಜಯಪುರ ಪ್ರವಾಸಿ ಮಂದಿರದಲ್ಲಿ ಮೂರು ರಕ್ಷಣಾ ತಂಡಗಳ ಮುಖ್ಯಸ್ಥರಿಗೆ ಸನ್ಮಾನ ಮಾಡಲಾಗಿದೆ.
ಅಗ್ನಿಶಾಮಕ ದಳ, NDRF, SDRF ತಂಡಗಳಿಗೆ ಜಿಲ್ಲಾಧಿಕಾರಿ ಟಿ ಭೂಬಾಲನ್, ಎಸ್ಪಿ ಹೃಷಿಕೇಶ್ ಸೋನಾವಣೆ, ಸಿಇಓ ರಿಶಿ ಆನಂದ ಅವರಿಂದ ಅಭಿನಂದನೆ ಸಲ್ಲಿಸಲಾಗಿದೆ.
ಬೋರ್ವೆಲ್ಗೆ ಪರ್ಯಾಯವಾಗಿ 20 ಅಡಿ ಗುಂಡಿ ತೆಗೆಯೋ ಕೆಲಸ ನಡೆದಿತ್ತು. 5 ರಿಂದ 6 ಅಡಿ ತೆರೆಯುವಾಗ ಯಾವುದೇ ಸಮಸ್ಯೆ ಬಂದಿಲ್ಲ. ಆ ಬಳಿಕ ಬಂಡೆಕಲ್ಲು ಸಿಕ್ಕಿತ್ತು. ಕೈಯಿಂದಲೇ ಕಲ್ಲನ್ನ ಒಡೆದು ಮಗುವನ್ನ ತಲುಪಲು ಯತ್ನಿಸಿದರು. ಹೀಗೆ ನಾಜೂಕಾಗಿ ಆಪರೇಷನ್ ನಡೆದಿತ್ತು. ಮಧ್ಯಾಹ್ನ 11 ಗಂಟೆ ಹೊತ್ತಲ್ಲಿ ಮಗುವಿನ ಅಳುವಿನ ಶಬ್ದ ಕೇಳಿತ್ತು.
ಒಳಗಡೆ ಸಿಲುಕಿದ್ದ ಮಗು ಅಳುವುದನ್ನ ಕೇಳಿಸಿಕೊಂಡ ರಕ್ಷಣಾ ಸಿಬ್ಬಂದಿಯ ತೋಳಗಳಲ್ಲಿ ಮತ್ತಷ್ಟು ಶಕ್ತಿ ಬಂದಿತ್ತು. 20 ಅಡಿ ಗುಂಡಿ ತೋಡಿದ ಬಳಿಕ ಅಡ್ಡಲಾಗಿ 6 ಅಡಿ ಸುರಂಗ ಕೊರೆಯಲಾಗಿತ್ತು. ಹೀಗೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಸಾತ್ವಿಕ್ ಜೀವಂತವಾಗಿ ಹೊರಗೆ ಬಂದಿದ್ದ.