ಶಂಕಿತ ಉಗ್ರರಿಂದ ಪೊಲೀಸರು ವಶಪಡಿಸಿದ್ದು ಆಟದ ಸಾಮಗ್ರಿಯೇ; ಪರಮೇಶ್ವರಗೆ ಸಿಟಿ ರವಿ ಪ್ರಶ್ನೆ

| Updated By: ಗಣಪತಿ ಶರ್ಮ

Updated on: Jul 21, 2023 | 6:20 PM

ಬಂಧಿತರಿಂದ ಗನ್, ಬುಲೆಟ್, ವಾಕಿಟಾಕಿ, ಸ್ಯಾಟಲೈಟ್ ಫೋನ್ ವಶಕ್ಕೆ ಪಡೆಯಲಾಗಿದೆ. ಇದನ್ನೆಲ್ಲ ನೋಡಿದ ಮೇಲೆ ಅವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದ್ದಾರೆ.

ಶಂಕಿತ ಉಗ್ರರಿಂದ ಪೊಲೀಸರು ವಶಪಡಿಸಿದ್ದು ಆಟದ ಸಾಮಗ್ರಿಯೇ; ಪರಮೇಶ್ವರಗೆ ಸಿಟಿ ರವಿ ಪ್ರಶ್ನೆ
ಸಿಟಿ ರವಿ
Follow us on

ನವದೆಹಲಿ, ಜುಲೈ 21: ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಐವರು ಶಂಕಿತರನ್ನು ಉಗ್ರರು (Suspected Terrorists) ಎಂದು ಈಗಲೇ ಹೇಳಲಾಗದು ಎಂಬ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ (G Parameshwara) ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಅವರು, ಬಂಧಿತ ಶಂಕಿತ ಉಗ್ರರಿಂದ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವುದು ಆಟದ ಸಾಮಗ್ರಿಯೇ? ಹೌದಾಗಿದ್ದರೆ ಆಡುವ ಮಕ್ಕಳು ಎನ್ನಬಹುದಿತ್ತು. ಬಂಧಿತರಿಂದ ಗನ್, ಬುಲೆಟ್, ವಾಕಿಟಾಕಿ, ಸ್ಯಾಟಲೈಟ್ ಫೋನ್ ವಶಕ್ಕೆ ಪಡೆಯಲಾಗಿದೆ. ಇದನ್ನೆಲ್ಲ ನೋಡಿದ ಮೇಲೆ ಅವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದ್ದಾರೆ.

ಮುಂಜಾಗರೂಕತಾ ಕ್ರಮ ವಹಿಸಿ ಶಂಕಿತರನ್ನು ಬಂಧಿಸಿದ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದೇವೆ. ಕೇವಲ ಆರೋಪಿಗಳ ಬಂಧನ ಮಾತ್ರವಲ್ಲದೇ, ಪ್ರಮುಖ ವಸ್ತುಗಳನ್ನು ಅವರಿಂದ ವಶಕ್ಕೆ ಪಡೆಯಲಾಗಿದೆ. ಇದೊಂದು ಅಂತರಾಷ್ಟ್ರೀಯ ಪ್ರಕರಣ ಇರಬಹುದು. ಪರಾರಿಯಾಗಿರುವ ಆರೋಪಿ ಐಎಸ್‌ಐಎಸ್ ಜೊತೆಗೆ ಸಂಪರ್ಕ ಹೊಂದಿದ್ದಾನೆ. ಈ ಕಾರಣಕ್ಕೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು. ಆರೋಪಿಗಳು ಯಾರು, ಅವರ ಉದ್ದೇಶ ಏನು ಎಂಬುದು ಗೊತ್ತಾಗಬೇಕು. ಬಂಧಿತರ ಜಾಲ ಕರ್ನಾಟಕ ಮಾತ್ರವಲ್ಲದೇ ದೇಶದ್ಯಾಂತ ಇರಬಹುದು. ಹೀಗಾಗಿ ನಮ್ಮ ಪೊಲೀಸರಿಂದ ಮಾತ್ರ ತನಿಖೆ ಸಾಧ್ಯವಿಲ್ಲ ಎಂದು ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಪಕ್ಷ ನಾಯಕ ಆಯ್ಕೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಕಾಂಗ್ರೆಸ್ ಬಂದಿತ್ತು. ನಮಗೆ ಆ ಪರಿಸ್ಥಿತಿ ಬಂದಿಲ್ಲ. ವಿಪಕ್ಷ ನಾಯಕನಿಲ್ಲದೇ ನಮ್ಮ ನಾಯಕರಿಂದ ಒಗ್ಗಟ್ಟು ಪ್ರದರ್ಶನವಾಗಿದೆ. ವಿಧಾನಸಭೆಯಲ್ಲಿ ಬಿಜೆಪಿ ನಾಯಕರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇದೆಲ್ಲಾ ಕಾಂಗ್ರೆಸ್ ನಾಯಕರ ಬಿಪಿ ಹೆಚ್ಚಳವಾಗುವಂತೆ ಮಾಡಿದೆ. ನಮ್ಮ ನಾಯಕರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ ಎಂದು ಸಿಟಿ ರವಿ ಸಮರ್ಥಿಸಿಕೊಂಡರು.

ಇದನ್ನೂ ಓದಿ: ಬಂಧಿತರನ್ನು ಈಗಲೇ ಉಗ್ರರು ಎನ್ನಲಾಗದು: ಗೃಹ ಸಚಿವ ಪರಮೇಶ್ವರ್ ಹೀಗೆಂದಿದ್ದು ಯಾಕೆ?

ಕಾಂಗ್ರೆಸ್ ನಾಯಕರ ಸೂಚನೆಯಂತೆ ಸ್ಪೀಕರ್ ಯುಟಿ ಖಾದರ್ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸುಳ್ಳೇ ಸಿದ್ದರಾಮಯ್ಯ; ಸಿಟಿ ರವಿ

ತನಿಖೆಗಳು ಗಾಂಧಿ ಹತ್ಯೆಗೂ ಆರ್​​ಎಸ್​​ಎಸ್​​​ಗೂ ಸಂಬಂಧವಿಲ್ಲ ಎಂದಿವೆ. ತನಿಖೆ ನಡೆಸಿದ ಮೂರು ತಂಡಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿವೆ. ಸಂಬಂಧವಿಲ್ಲ ಎಂದು ಹೇಳಿವೆ. ಯಾವ ಚಾರ್ಜ್​ಶೀಟ್​ನಲ್ಲೂ ಆರ್‌ಎಸ್‌ಎಸ್ ಹೆಸರಿಲ್ಲ. ಸದನದಲ್ಲಿ ಸುಳ್ಳು ಸುದ್ದಿ ಹರಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಬೇಕು. ಸುಳ್ಳು ಸಿದ್ದರಾಮಯ್ಯ ಬೇರೆ ಬೇರೆಯಲ್ಲ, ಸುಳ್ಳೇ ಸಿದ್ದರಾಮಯ್ಯ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 4:45 pm, Fri, 21 July 23