ಕೇಂದ್ರದ ವಿರುದ್ಧ ಪ್ರತಿಭಟನೆ: ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ಎತ್ತಿ; ಕಾಂಗ್ರೆಸ್​ ವಿರುದ್ಧ ಅಶೋಕ್​ ಕಿಡಿ

| Updated By: ವಿವೇಕ ಬಿರಾದಾರ

Updated on: Oct 13, 2024 | 1:47 PM

ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್​ ಪ್ರತಿಭಟನೆ ಮಾಡಲು ಮುಂದಾಗಿದೆ. ಕಾಂಗ್ರೆಸ್​ ಪ್ರತಿಭಟನೆಗೆ ಬಿಜೆಪಿ ನಾಯಕ, ವಿರೋಧ ಪಕ್ಷದ ನಾಯಕ್ಷ ಆರ್​ ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕೇಂದ್ರದ ವಿರುದ್ಧ ಪ್ರತಿಭಟನೆ: ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ಎತ್ತಿ; ಕಾಂಗ್ರೆಸ್​ ವಿರುದ್ಧ ಅಶೋಕ್​ ಕಿಡಿ
ಆರ್​ ಅಶೋಕ್​
Follow us on

ಬೆಂಗಳೂರು, ಅಕ್ಟೋಬರ್​ 13: ಕೇಂದ್ರ ಸರ್ಕಾರದ (Union Government) ತೆರಿಗೆ (Tax) ಹಂಚಿಕೆ ತಾರತಮ್ಯ ಖಂಡಿಸಿ ಕಾಂಗ್ರೆಸ್ (Congress)​ ಹೋರಾಟ ಮಾಡಲು ಮುಂದಾಗಿರುವುದಕ್ಕೆ ವಿರೋಧ ಪಕ್ಷದ ನಾಯಕ‌ ಆರ್​. ಅಶೋಕ್ (R Ashok) ಕಿಡಿ ಕಾರಿದರು. ರಾಜ್ಯದ 224 ಕ್ಷೇತ್ರಗಳೂ ಅಭಿವೃದ್ಧಿ ಆಗಬೇಕು. ನೀವು ಎಲ್ಲ ಕ್ಷೇತ್ರಗಳಿಗೂ ಹಣ ಕೊಟ್ಟಿದ್ದೀರಾ? ಮಂಗಳೂರು, ಬೀದರ್, ಬೆಂಗಳೂರಿಗೆ ಹಣ ಬಿಡುಗಡೆ ಮಾಡಿಲ್ಲ. ನಿಮಗೆ ಬೇಕಾದವರಿಗೆ ನೀವು ಅನುದಾನವನ್ನು ಕೊಟ್ಟಿದ್ದೀರಿ. ಈ ವಿಚಾರವಾಗಿ ನಾವೂ ಹೋರಾ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಪಾರದರ್ಶಕವಾಗಿದ್ದೇವೆ. ನಿಮ್ಮನೆಯ ದೋಸೆಯಲ್ಲಿ ತೂತು ಇದ್ದು, ಊರೆಲ್ಲ ತೂತು ಅಂತೀರಿ. ನೀವು ಎಲ್ಲ ಕ್ಷೇತ್ರಗಳಿಗೂ ಅನುದಾನವನ್ನು ಕೊಟ್ಟಿದ್ದೀರಾ? ನೀವು ತಾರತಮ್ಯ ಮಾಡಿಲ್ವಾ? ತಾರತಮ್ಯ ಮಾಡಿಲ್ಲ ಅಂತ ಹೇಳಿ. ತಾರತಮ್ಯ ಮಾಡಿಲ್ಲ ಅಂದ್ರೆ, ನಾವು ದೆಹಲಿಗೆ ಹೋಗಿ ಅನುದಾನ ಕೇಳಲು ತಯಾರಿದ್ದೇವೆ. ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಎತ್ತಿ. ಆಮೇಲೆ ಬೇರೆಯವರ ತಟ್ಟೆಯಲ್ಲಿರುವ ನೊಣವನ್ನು ಎತ್ತಿ ಎಂದು ವಾಗ್ದಾಳಿ ಮಾಡಿದರು.

ಕೇಂದ್ರ ಸರ್ಕಾರ ಈವರೆಗೆ ಕೊಟ್ಟ ಹಣವನ್ನೆಲ್ಲ ಲೂಟಿ ಮಾಡಿದ್ದೀರಿ. ಮುಡಾ, ವಾಲ್ಮೀಕಿ ನಿಗಮ ಸೇರಿದಂತೆ ಕೆಲ ನಿಗಮಗಳಲ್ಲಿನ ಹಣ ಲೂಟಿ ಮಾಡಿದ್ದೀರಿ. ಮೊದಲು ನಿಮಗೆ ಕೊಟ್ಟ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಚಾಟಿ ಬೀಸಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ ವಿರುದ್ಧ ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ: ಡಿಕೆ ಶಿವಕುಮಾರ್​

ಮೊದಲಿಗಿಂತ ಈಗ ಕೇಂದ್ರ ಸರ್ಕಾರ ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಿದೆ. ಈವರೆಗೆ ಕರ್ನಾಟಕಕ್ಕೆ ಎಷ್ಟು ಹಣ ಬಂದಿದೆ ಎಂದು ಕಾಂಗ್ರೆಸ್​ನವರು ಹೇಳಲಿ. ಕೊಟ್ಟ ಹಣವನ್ನೆಲ್ಲ ನುಂಗಿ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ಕೇಳುವುದಕ್ಕೆ ಯಾವ ನೈತಿಕತೆ ಇದೆ. ಎಷ್ಟು ಹಣ ಬಿಡುಗಡೆ ಮಾಡಿದ್ದಾರೆಂದು ಸ್ಪಷ್ಟ ಮಾಹಿತಿ ಕೊಡಿ ಎಂದು ಒತ್ತಾಯಿಸಿದರು.

ಮುಡಾ, ವಾಲ್ಮೀಕಿ ನಿಗಮ ಪ್ರಕರಣಗಳ ತನಿಖೆಯನ್ನು ಇಡಿ, ಸಿಬಿಐ ನಡೆಸುತ್ತಿವೆ. ಈ ವಿಚಾರವನ್ನು ಡೈವರ್ಟ್ ಮಾಡುವುದಕ್ಕೆ ಹೀಗೆ ಮಾಡುತ್ತಿದ್ದಾರೆ. ಜಿಎಸ್​ಟಿ ಸಭೆಗೆ ಹೋದಾಗ ಯಾಕೆ ಅನುದಾನ ಬಗ್ಗೆ ಬಾಯಿ ಬಿಡಲ್ಲ. ಕಾಂಗ್ರೆಸ್​ನವರು ಬಿಜೆಪಿ ಸಂಸದರನ್ನು ಮಾತ್ರ ಪ್ರಶ್ನೆ ಮಾಡುತ್ತಾರೆ. ಕರ್ನಾಟಕದಿಂದ ಆಯ್ಕೆಯಾದ ಕಾಂಗ್ರೆಸ್​ ಸಂಸದರು ಏನು ಮಾಡುತ್ತಾರೆ. ಕಳೆದ 10 ವರ್ಷದಿಂದ ಮೋದಿ ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂದು ದಾಖಲೆ ಬಿಡುಗೆ ಮಾಡಿ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ತೆರಿಗೆ ಹಂಚಿಕೆ ಅಂತ ಮಾಡಿದರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ