ಸೊರಬದಲ್ಲಿ ಮತ್ತೆ ಶುರುವಾಯ್ತು ಸಹೋದರರ ಸವಾಲ್. ಒಡಹುಟ್ಟಿದ ಮಧು ಬಗ್ಗೆ ಕುಮಾರ್ ಬಂಗಾರಪ್ಪ ಎಂತಾ ಮಾತಂದ್ರು ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2022 | 4:39 PM

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ವರ್ಸಸ್ ಮಧು ಬಂಗಾರಪ್ಪ ನಡುವೆ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ.

ಸೊರಬದಲ್ಲಿ ಮತ್ತೆ ಶುರುವಾಯ್ತು ಸಹೋದರರ ಸವಾಲ್. ಒಡಹುಟ್ಟಿದ ಮಧು ಬಗ್ಗೆ ಕುಮಾರ್ ಬಂಗಾರಪ್ಪ ಎಂತಾ ಮಾತಂದ್ರು ನೋಡಿ
Madhu Bangarappa And Kumar Bangarappa
Follow us on

ಶಿವಮೊಗ್ಗ: ಮೊದಲಿನಿಂದಲು ಬಂಗಾರಪ್ಪ ಕುಟುಂಬದ ಹಿಡಿತದಲ್ಲಿರುವ ಸೊರಬ ಕ್ಷೇತ್ರದಲ್ಲಿ (Soraba Assembly Constituency( ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಸೋಹದರರ ಸವಾಲ್ ಶುರುವಾಗಿದೆ.

ಕ್ಷೇತ್ರದಲ್ಲಿ ಏಳು ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಂಸದರಾಗಿ ‘ಸೋಲಿಲ್ಲದ ಸರದಾರ’ನೆಂದೇ ಗುರುತಿಸಿಕೊಂಡಿದ್ದ ಎಸ್‌.ಬಂಗಾರಪ್ಪ ಅವರ ರಾಜಕೀಯ ವಾರಸುದಾರಿಕೆಗೆ ಮತ್ತೊಮ್ಮೆ ಸೋದರರ ಸವಾಲ್‌ ನಡೆಯಲಿದೆ ನಿಚ್ಚಳವಾಗಿದೆ. ಬಂಗಾರಪ್ಪನವರ ಪುತ್ರರಾದ ಕುಮಾರ್​ ಬಂಗಾರಪ್ಪ(Kumar Bangarappa) ಹಾಗೂ ಮಧು ಬಂಗಾರಪ್ಪ(Madhu Bangarappa) ಅವರು ಮತ್ತೆ ಸ್ಪರ್ಧೆಗೆ ಅಣಿಯಾದಂತಿದೆ. ಇದಕ್ಕೆ ಪೂರಕವೆಂಬಂತೆ ಕುಮಾರ್ ಬಂಗಾರಪ್ಪ ಸೋಹದರ ಮಧು ಬಂಗಾರಪ್ಪ ವಿರುದ್ಧ ರಾಜಕೀಯವಾಗಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಕೆಲ ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಬಿಜೆಪಿ ಅಸ್ತ್ರ, ಕೈ ಅಲೆಯನ್ನು ತಡೆದ SC, ST ಮೀಸಲಾತಿ ಹೆಚ್ಚ

ಶಿವಮೊಗ್ಗದಲ್ಲಿ ಇಂದು(ಅಕ್ಟೋಬರ್.10) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಅಧಿಕಾರಾವಧಿಯಲ್ಲಿ ಸೊರಬ ತಾಲೂಕಿನಲ್ಲಿ ಬಗರ್ ಹುಕುಂನಲ್ಲಿ ಭ್ರಷ್ಟಾಚಾರ ನಡೆದಿದೆ. ಬಿಜೆಪಿ, ಸಮಾಜವಾದಿ, ಜೆಡಿಎಸ್ ಇದೀಗ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. 101% ಮಧು ಬಂಗಾರಪ್ಪ ಕಾಂಗ್ರೆಸ್ ನಲ್ಲಿ ಉಳಿಯಲ್ಲ. ಮುಂದಿನ ಚುನಾವಣೆಗೆ ಮತ್ತೆ ಯಾವ ಪಕ್ಷ ಹುಡುಕುತ್ತಾರೋ? ಎಂದು ಟಾಂಗ್ ಕೊಟ್ಟರು.

ತಂದೆ ಬಂಗಾರಪ್ಪನವರ ಸಮಾಧಿಯನ್ನು 10 ವರ್ಷಗಳಿಂದ ಮಾಡುತ್ತಿದ್ದಾರೆ. ಸ್ವತಃ ಸಿಎಂ ಆಗಿದ್ದ ಯಡಿಯೂರಪ್ಪ ಸಮಾಧಿಯ ಸ್ಮಾರಕಕ್ಕೆ ಅನುದಾನ ಕೂಡ ಕೊಟ್ಟಿದ್ದರು. ಆದರೂ ತಂದೆಯವರ ಸಮಾಧಿ ಮಾಡಲು ಯೋಗ್ಯತೆ ಇಲ್ಲ ಎಂದು ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಸಿಗರಿಗೆ ರಸ್ತೆ ಸೇತುವೆ ಮಾಡಿದರೆ ಸಂತೋಷ ಆಗೋಲ್ಲ. ಪೆಟ್ರೋಲ್ ಬೆಲೆ ಇಳಿಕೆಯಾದರೂ ಸಂತೋಷ ಆಗೋಲ್ಲ..ಉಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದ್ರು ಸಂತೋಷ ಆಗಲ್ಲ ಎಂದು ಪ್ರಧಾನಿ ಹೇಳಿದ್ದು ಸತ್ಯ ಮಧು ಬಂಗಾರಪ್ಪ ಗ್ಯಾಂಗ್​ ಸ್ಟಾರ್ಸ್​ ಇದ್ದ ಹಾಗೆ ಎಂದು ಛೇಡಿಸಿದರು.

ಎಲ್ಲರಿಗೂ ಮೂರು ನಾಮ ಹಾಕಿ ಸಿನಿಮಾ ತೆಗೆಯಲು ಹೋಗಿದ್ದರು. ಈ ಸಿನಿಮಾ ತೆಗೆಯಲು ಹಣ ಎಲ್ಲಿಂದ ಬಂತು ಎಂದು ದಾಖಲಾತಿ ನೀಡಲಿ, ಇವರ ಸಿನಿಮಾದ ಡಬ್ಬಗಳು ಎಲ್ಲಿ ಹೋದವು ಎನ್ನುವುದನ್ನು ಲೆಕ್ಕ ಕೊಡಲಿ. ಸಮಾಜವಾದಿ, ಜೆಡಿಎಸ್ ಪಕ್ಷದ ಪಾರ್ಟಿ ಫಂಡ್ ಗಳಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. 2013ರಿಂದ 2018 ರವರೆಗೆ ಸೊರಬ ತಾಲೂಕಿನಲ್ಲಿ ಎಷ್ಟು ರಸ್ತೆ ಎಷ್ಟು ನೀರಾವರಿ ಯೋಜನೆ ತಂದಿದ್ದಾರೆ ಮಧು ಲೆಕ್ಕ ಕೊಡಲಿ ಎಂದು ಕುಮಾರ್ ಬಂಗಾರಪ್ಪ ಸವಾಲ್ ಹಾಕಿದರು.

ಭಾರತ್ ತೋಡೋ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಭಾಗವಹಿಸಿ ರಾಹುಲ್ ಗಾಂಧಿ ಎರಡು ಬಾರಿ ಕೈ ಹಿಡಿದರೆ ದೊಡ್ಡ ಲೀಡರ್ ಅಂದುಕೊಂಡಿದ್ದಾರೆ. ಚಂದ್ರಗುತ್ತಿ ಪಲ್ಲಕ್ಕಿ ಅಲ್ಲಾಡಿಸಿ ರೌಡಿಸಂ ಮಾಡಿದರೆ ಸೊರಬ ತಾಲೂಕಿನಲ್ಲಿ ಅದೆಲ್ಲಾ ನಡೆಯೋಲ್ಲ. ಆರ್ ಎಸ್ ಎಸ್ ಹಿರಿಯ ದತ್ತಾತ್ರೇಯ ಹೊಸಬಾಳೆ ಹೆಸರನ್ನು ಮಧು ಬಂಗಾರಪ್ಪ ಬಳಸಿರುವುದು ಶೋಭೆ ತರೋಲ್ಲ ಎಂದು ಕಿಡಿಕಾರಿದರು.

ಇನ್ನು ಇದೇ ವೇಳೆ ಸೊರಬ ಬಿಜೆಪಿ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಅಧ್ಯಕ್ಷ ಗಮನಕ್ಕೆ ತರಲಾಗಿದೆ. ಬಿಜೆಪಿ ಕಟ್ಟಿದ ಹಿರಿಯ ಪದ್ಮನಾಭ ಆ ರೀತಿ ಹೇಳಿಕೆ ಕೊಟ್ಟಿದ್ದು ಸರಿಯಲ್ಲ ಎನ್ನುವುದು ನನ್ನ ಭಾವನೆ. ಕೆಲವೊಮ್ಮೆ ಅನ್ನ ಸರಿಯಾಗಿ ಬೇಯಲ್ಲ ಎಂದು ಪರೋಕ್ಷವಾಗಿ ತಿವಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Mon, 10 October 22