ನನ್ನನ್ನು ಕೊಂದು 6 ತಿಂಗಳಲ್ಲಿ ಬೈ ಎಲೆಕ್ಷನ್ ಮಾಡುವ ಕುತಂತ್ರ: ಸ್ವಪಕ್ಷದ ಕೇಂದ್ರ ಸಚಿವರ ವಿರುದ್ಧವೇ ಪ್ರಭು ಚೌಹಾಣ್ ಗಂಭೀರ ಆರೋಪ

| Updated By: Digi Tech Desk

Updated on: Aug 10, 2023 | 3:53 PM

ಬಿದರ್​ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಯಾಗಿದೆ. ಪ್ರಭು ಚೌಹಾಣ್ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ನಡುವಿನ ವಾಗ್ಯುದ್ಧ ಮುಂದುವರೆದಿದ್ದು, ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ ಎಂದು ಪ್ರಭು ಚೌಹಾಣ್ ಗಂಭೀರ ಅರೋಪ ಮಾಡಿದ್ದಾರೆ.

ನನ್ನನ್ನು ಕೊಂದು 6 ತಿಂಗಳಲ್ಲಿ ಬೈ ಎಲೆಕ್ಷನ್ ಮಾಡುವ ಕುತಂತ್ರ: ಸ್ವಪಕ್ಷದ ಕೇಂದ್ರ ಸಚಿವರ ವಿರುದ್ಧವೇ  ಪ್ರಭು ಚೌಹಾಣ್ ಗಂಭೀರ ಆರೋಪ
ಪ್ರಭು ಚೌಹಾಣ್ , ಭಗವಂತ ಖೂಬಾ
Follow us on

ಬೀದರ್, (ಆಗಸ್ಟ್ 10): ವಿಧಾನಸಭೆ ಚುನಾವಣೆ(Karnataka Assembly Elections 2023) ಮುಗಿದು ಎರಡು ತಿಂಗಳು ಆಯ್ತು. ಆದ್ರೆ, ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ಮಾತ್ರ ಇನ್ನೂ ಮುಗಿದಿಲ್ಲ. ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ(BJP) ಬೂದಿ ಮುಚ್ಚಿದ ಕೆಂಡದಂತಿದೆ. ಆದ್ರೆ, ಇತ್ತ ಬೀದರ್ (bidar)​ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಸ್ಫೋಟಗೊಂಡಿದೆ. ಹೌದು.. ಮಾಜಿ ಸಚಿವ ಪ್ರಭು ಚೌಹಾಣ್(prabhu chavan) ಅವರು ಕೇಂದ್ರ ಸಚಿವ ಭಗವಂತ ಖೂಬಾ(bhagwanth khubha) ವಿರುದ್ಧ ಮತ್ತೆ ಗುಡುಗಿದ್ದಾರೆ. ಬೀದರ್ ಜಿಲ್ಲೆ ಔರಾದ್​ನಲ್ಲಿ ನಿನ್ನೆ(ಆಗಸ್ಟ್ 09) ನಡೆದ ಕಾರ್ಯಕಾರಿಣಿಯಲ್ಲಿ ಮಾತನಾಡಿ ಪ್ರಭು ಚೌಹಾಣ್, ಭಗವಂತ ಖೂಬಾಗೆ ನನ್ನ ಮೇಲೆ ಕೋಪವಿದ್ದರೆ ಗುಂಡಿಕ್ಕಿ ಹತ್ಯೆ ಮಾಡಲಿ. ಆದರೆ ನಮ್ಮ ಪಕ್ಷ, ಕಾರ್ಯಕರ್ತರಿಗೆ ಖೂಬಾ ದ್ರೋಹ ಮಾಡದಿರಲಿ. ಭಗವಂತ ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ವಿಫಲವಾಗಿ ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ ಅವರು ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ . ನನ್ನನ್ನು ಕೊಂದು 6 ತಿಂಗಳಲ್ಲಿ ಉಪ ಚುನಾವಣೆಗೆ ಕುತಂತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ರಸ್ತೆ ಮಧ್ಯೆ ಗುಂಡುಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಭಗವಂತ ಖೂಬಾ ಬೆಂಬಲಿಗರಿಂದಲೇ ನನಗೆ ಗೊತ್ತಾಗಿದೆ ಎಂದರು.

ಈ ಹಿಂದೆಯೂ ವಾಗ್ದಾಳಿ ನಡೆಸಿದ್ದ ಪ್ರಭು ಚೌಹಾಣ್

ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಪ್ರಭು ಚೌಹಾಣ್ ಅವರು ಭಗವಂತ ಖೂಬಾ ವಿರುದ್ಧ ವಾಗ್ದಾಳಿ ನಡೆಸಿದ್ದರು, ಚುನಾವಣೆ ಸೋಲಿಸಲು ಇನ್ನಿಲ್ಲದ ತಂತ್ರಗಳನ್ನು ಮಾಡುತ್ತಿದ್ದಾರೆ. ಒಂದು ಗುಂಪನ್ನು ನನ್ನ ಕ್ಷೇತ್ರ ಕಳುಹಿಸಿದ್ದಾರೆ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದರು.  ಪ್ರಭು ಚೌಹಾಣ್ ಚುನಾವಣೆಯಲ್ಲಿ ಗೆದ್ದ ಬಳಿಕವೂ ಭಗವಂತ ಖೂಬಾ ವಿರುದ್ಧದ ಸಮರವನ್ನು ಮುಂದುವರಿಸಿದ್ದರು.

ಈ ಬಾರಿಯ ಚುನಾವಣೆ ಹಿಂದೆಂದಿಗಿಂತಲೂ ವಿಭಿನ್ನವಾಗಿತ್ತು. ವಿರೋಧ ಪಕ್ಷದವರಿಗಿಂತ ಹೆಚ್ಚಾಗಿ ಪಕ್ಷದೊಳಗಿರುವ ಕೆಲ ನಾಯಕರಿಂದಲೇ ಸಮಸ್ಯೆ ಎದುರಿಸಬೇಕಾಯಿತು. ಶತಾಯಗತಾಯ ನನಗೆ ಸೋಲಿಸಲು ಬಿ ಟೀಮ್ ಹಲವು ಕುತಂತ್ರಗಳನ್ನು ಮಾಡಿತ್ತು. ಆದ್ರೆ, ಕಾರ್ಯಕರ್ತರು ಎಲ್ಲ ಸಂಕಷ್ಟ-ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಐತಿಹಾಸಿಕ ಗೆಲುವು ನೀಡಿದ್ದಾರೆ. ಇದು ಕಾರ್ಯಕರ್ತರು ಹಾಗೂ ಮತದಾರರ ಜಯವಾಗಿದೆ. ಮಹಾಜನತೆಯ ಆಶೀರ್ವಾದ ಸಿಕ್ಕಿದೆ. ಮುಂದಿನ ಲಡಾಯಿಗೆ ಸಿದ್ಧ ಎಂದು ಪ್ರಭು ಚೌಹಾಣ್, ಭಗವಂತ ಖೂಬಾಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:59 pm, Thu, 10 August 23