AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​​ಎಸ್​ಎಸ್​​ನವರು ಯಾವಾಗೆಲ್ಲಾ ಸಭೆ ಸೇರುತ್ತಾರೋ, ಆವಾಗೆಲ್ಲಾ ಗಲಭೆಗಳಾಗಿವೆ: ಪ್ರಿಯಾಂಕ್​ ಖರ್ಗೆ

Priyank Kharge Sparks on RSS: ಆರ್​​ಎಸ್​ಎಸ್​ ಕುರಿತಾಗಿ ಬಿಕೆ ಹರಿಪ್ರಸಾದ್​​ ನೀಡಿರುವ ಹೇಳಿಕೆ ಸದ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಇದಕ್ಕೆ ಧ್ವನಿ ಗೂಡಿಸಿದ್ದು, ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ. ‘‘ಈ ಬಗ್ಗೆ ಇಂಟೆಲಿಜೆನ್ಸ್ ಕಡೆಯಿಂದ ನಮಗೂ ಕೆಲ ಮಾಹಿತಿ ಬಂದಿದೆ, ಸೂಕ್ತ ಸಮಯದಲ್ಲಿ ಹೇಳುತ್ತೇನೆ’’ ಎಂದಿದ್ದಾರೆ.

ಆರ್​​ಎಸ್​ಎಸ್​​ನವರು ಯಾವಾಗೆಲ್ಲಾ ಸಭೆ ಸೇರುತ್ತಾರೋ, ಆವಾಗೆಲ್ಲಾ ಗಲಭೆಗಳಾಗಿವೆ: ಪ್ರಿಯಾಂಕ್​ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆImage Credit source: tv9 kannada
Sunil MH
| Edited By: |

Updated on:Jul 11, 2026 | 4:41 PM

Share

ಮುಖ್ಯಾಂಶಗಳು

  • ಆರ್​​​ಎಸ್​​ಎಸ್​​ ಸಭೆ ಬಳಿಕೆ ಕೊಲೆ ಆಗಿದೆ ಎಂಬ ಹರಿಪ್ರಸಾದ್​ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ
  • ಇಂಟೆಲಿಜೆನ್ಸ್ ಕಡೆಯಿಂದ ಮಾಹಿತಿ ಬಂದಿದೆ ಎಂದ ಗೃಹ ಸಚಿವ
  • ಶಾಂತಿ‌ ಕದಡುವ ಕೆಲಸ ಮಾಡಿದರೆ ಗೃಹ ಇಲಾಖೆ ಸುಮ್ಮನೆ ಕೂರಲ್ಲ

ಬೆಂಗಳೂರು, ಜುಲೈ 11: ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ನ (RSS) ಮಹತ್ವದ ಸಭೆ ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್​ ನಾಯಕರು ಸಂಘಪರಿವಾರದ ವಿರುದ್ಧ ಮುಗಿಬಿದ್ದಿದ್ದಾರೆ. ಈ ಹಿಂದೆ ಇವರ ಸಭೆ ಆದಾಗ ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಯಾಗಿತ್ತು, ಈ ಸಭೆ ಬಳಿಕ ಏನಾಗುತ್ತೆ ಅಂತಾ ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದರು. ಇದೀಗ ಅವರ ಹೇಳಿಕೆಗೆ ಗೃಹಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಸಮರ್ಥನೆ ನೀಡಿದ್ದು, ‘‘ಇವರು ಈ ರೀತಿ ಸಭೆ ಸೇರುತ್ತಾರೋ ಆವಾಗೆಲ್ಲಾ ಗಲಭೆಗಳಾಗಿವೆ’’ ಎಂದಿದ್ದಾರೆ.

ಇವರು ಈ ರೀತಿ ಸಭೆ ಸೇರಿದಾಗೆಲ್ಲಾ ಗಲಭೆಗಳಾಗಿವೆ: ಪ್ರಿಯಾಂಕ್​ ಖರ್ಗೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಪ್ರಿಯಾಂಕ್​ ಖರ್ಗೆ, ‘‘ಆರ್‌ಎಸ್‌ಎಸ್‌ ಸಮಾವೇಶಗಳಾದ ಮೇಲೆ ಕೊಲೆಗಳಾಗಿರಬಹುದು, ಘಟನೆಗಳಾಗಿರಬಹುದು ಅವೆಲ್ಲಾ ನಡೆದಿರುವುದಕ್ಕೆ ಇತಿಹಾಸ ಇದೆಯಲ್ಲ. ಎಲ್ಲವೂ ಸಾಕ್ಷ್ಯಗಳ ಆಧಾರವೇ ಅಲ್ಲವೇ. ವಾಸ್ತವಾಂಶ ಪರಿಶೀಲಿಸಿದರೆ ಯಾವಾಗ ಇವರು ಈ ರೀತಿ ಸಭೆ ಸೇರುತ್ತಾರೋ ಆವಾಗೆಲ್ಲಾ ಗಲಭೆಗಳಾಗಿವೆ. ಇಂಟೆಲಿಜೆನ್ಸ್ ಕಡೆಯಿಂದ ನಮಗೂ ಕೆಲ ಮಾಹಿತಿ ಬಂದಿದ್ದು, ಸೂಕ್ತ ಸಮಯದಲ್ಲಿ ಹೇಳುತ್ತೇನೆ’’ ಎಂದಿದ್ದಾರೆ.

ಇದನ್ನೂ ಓದಿ: RSS ಸಭೆ ಬಳಿಕ ಏನಾದರೂ ಅನಾಹುತ ಆಗೇ ಆಗಿದೆ: ಈಗೇನಾಗುತ್ತೆ ನೋಡಬೇಕು; ಬಿಕೆ ಹರಿಪ್ರಸಾದ್

‘‘ಇನ್ನು ಯಾರೇ ಆಗಲಿ ರಾಜ್ಯದಲ್ಲಿ ಏನಾದರೂ ಗಲಾಟೆ ಮಾಡುವುದಾಗಲಿ, ಶಾಂತಿ‌ ಕದಡುವುದಾಗಲಿ ಮಾಡಿದರೇ ಗೃಹ ಇಲಾಖೆ ಸುಮ್ಮನೆ ಕೂರಲ್ಲ. ಯಾವುದೇ ಸಮಾಜದ ಸಂಘಟನೆ ಇರಬಹುದು. ಸಮಾಜದಲ್ಲಿ ಶಾಂತಿ ಕದಡಲು ನಾವು ಬಿಡುವುದಿಲ್ಲ. ನಮ್ಮ ಬಳಿ ಕೆಲವು ಮಾಹಿತಿ ಇವೆ, ಇವರೇನಾದರೂ ಬಾಲ‌ ಬಿಚ್ಚಿದರೆ, ಅದು ಯಾವುದೇ ಸಂಘಟನೆ ಇರಬಹುದು ಗೃಹ ಇಲಾಖೆ ಸುಮ್ಮನೆ ಕೂರಲ್ಲ’’ ಎಂದು ಪ್ರಿಯಾಂಕ್​ ಖರ್ಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಬಿಕೆ ಹರಿಪ್ರಸಾದ್​​ ಹೇಳಿದ್ದೇನು?

RSS ಸಭೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನಿನ್ನೆ ಸ್ಫೋಟಕ ಹೇಳಿಕೆ ನೀಡಿದ್ದರು. ‘‘ಹಿಂದೆ ಇವರ ಸಭೆ ಆದಾಗ ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಯಾಗಿತ್ತು, ಈ ಬೆಳಗಾವಿ ಸಭೆ ಬಳಿಕ ಏನಾಗುತ್ತೆ ಅಂತಾ ನೋಡಬೇಕು’’ ಎಂದು ಹೇಳಿದರು. ಬಿ.ಕೆ. ಹರಿಪ್ರಸಾದ್ ಈ ಹೇಳಿಕೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:39 pm, Sat, 11 July 26

Follow Us