NWKRTC ಕೈ ಸುಡುತ್ತಿರುವ ಚಿಗರಿ ಬಸ್ಗಳು: ಸಂಸ್ಥೆಗೆ ಪ್ರತಿ ತಿಂಗಳು ಎರಡೂವರೆ ಕೋಟಿ ನಷ್ಟ!
Chigari BRTS Buses: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಸಂಚರಿಸುವ 'ಚಿಗರಿ' ಬಿಆರ್ಟಿಎಸ್ ಎಸಿ ಬಸ್ಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಆರ್ಥಿಕವಾಗಿ ಭಾರಿ ಹೊರೆಯಾಗಿ ಪರಿಣಮಿಸಿವೆ. ಸಂಸ್ಥೆಗೆ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದು, ಈ ಬಗ್ಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆಯಾದರೂ, ಈವರೆಗೂ ಯಾವುದೇ ಕ್ರಮ ಆಗಿಲ್ಲ ಎನ್ನಲಾಗಿದೆ.

ಮುಖ್ಯಾಂಶಗಳು
- ಭಾರಿ ನಷ್ಟಕ್ಕೆ ಕಾರಣವಾದ ಚಿಗರಿ ಬಸ್ಗಳ ಓಡಾಟ
- NWRTCಗೆ ಪ್ರತಿ ತಿಂಗಳು 2.5 ಕೋಟಿ ರೂ. ನಷ್ಟ
- ಕಿಲೋ ಮೀಟರ್ಗೆ 80 ರೂ. ವೆಚ್ಚ, 50 ರೂ. ಆದಾಯ!
ಹುಬ್ಬಳ್ಳಿ, ಆಗಸ್ಟ್ 04: ದಕ್ಷಿಣ ಭಾರತದಲ್ಲಿಯೇ ಮೊದಲ ಯೋಜನೆ ಅನ್ನೋ ಖ್ಯಾತಿಯನ್ನು ಪಡೆದಿರುವ ಬಿಆರ್ಟಿಎಸ್ ಅಡಿ ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಚಿಗರಿ ಬಸ್ಗಳಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣ ಮಾಡುತ್ತಾರೆ. ಹುಬ್ಬಳ್ಳಿ ರೈಲ್ವೇ ನಿಲ್ದಾಣದಿಂದ ಧಾರವಾಡ ಹೊಸ ಬಸ್ ನಿಲ್ದಾಣದ ವರಗೆ ಸಂಪರ್ಕ ಕಲ್ಲಿಸುವ ಈ ಬಸ್ಗೆ ಬರೋಬ್ಬರಿ 22.5 ಕಿ.ಮೀ. ಪ್ರತ್ಯೇಕ ರಸ್ತೆ ಕೂಡ ಕಲ್ಪಿಸಲಾಗಿದೆ. ಆದರೆ ಇದೇ BRTS ಚಿಗರಿ ಬಸ್ಗಳಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು ಎರಡೂವರೆ ಕೋಟಿ ಲಾಸ್ ಆಗುತ್ತಿದೆಯಂತೆ. ಆದಾಯ ಮತ್ತು ಖರ್ಚಿಗೂ ಹೆಚ್ಚಿನ ವ್ಯತ್ಯಾಸವಾಗುತ್ತಿರುವದರಿಂದ ಸಂಸ್ಥೆಗೆ ಪ್ರತಿ ತಿಂಗಳು ಹೆಚ್ಚುವರಿ ಹೊರೆ ಬೀಳುತ್ತಿದೆ ಎನ್ನಲಾಗಿದೆ.
ಒಂದು ಕಿಲೋ ಮೀಟರ್ಗೆ 80 ರೂಪಾಯಿ ಖರ್ಚಾದ್ರೆ, ಆದಾಯ ಸರಿಸುಮಾರು ಐವತ್ತು ರೂಪಾಯಿ ಬರ್ತಿದೆಯಂತೆ. ಅಂದ್ರೆ ಕಿಲೋ ಮೀಟರ್ಗೆ ಸರಿಸುಮಾರು 30 ರೂಪಾಯಿ ಲಾಸ್ ಆಗುತ್ತಿದೆ. ಹೀಗಾಗಿ ನಷ್ಟವಾಗುತ್ತಿರುವ ಹಣವನ್ನು ನಗರಾಭಿವೃದ್ದಿ ಇಲಾಖೆ ಭರಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅನೇಕ ಬಾರಿ ಮನವಿ ಮಾಡಿಕೊಂಡಿದೆಯಂತೆ. 2018ರಿಂದ ಇಲ್ಲಿಯವರಗೆ ನಗರಾಭಿವೃದ್ಧಿಇಲಾಖೆ NWKRTCಗೆ 150 ಕೋಟಿಗೂ ಹೆಚ್ಚಿನ ಹಿಂಬಾಕಿ ಹಣ ಬಾಕಿ ನೀಡಬೇಕಿದೆ. ಈ ಬಗ್ಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆಯಾದರೂ, ಈವರೆಗೂ ಯಾವುದೇ ಕ್ರಮ ಆಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: KSRTC, BMTC ಸೇರಿದಂತೆ 4 ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್: ಎಷ್ಟು, ಯಾವಾಗಿನಿಂದ?
2018ರಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಅಂದಿನಿಂದ ಪ್ರತಿನಿತ್ಯ ನೂರು ಚಿಗರಿ ಹೆಸರಿನ ಎಸಿ ಬಸ್ಗಳು ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ಮಾಡುತ್ತಿವೆ. ಇನ್ನು ರಸ್ತೆ ಸೇರಿದಂತೆ ಕೆಲ ನಿರ್ವಹಣೆಯನ್ನು BRTS ಮಾಡಿದ್ರೆ, ಬಸ್ಗಳನ್ನು ಓಡಿಸೋದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ. ಲಾಸ್ ಜೊತೆಗೆಗೆ ಬಸ್ನಲ್ಲಿ ಇತ್ತೀಚೆಗೆ ತಾಂತ್ರಿಕ ಸಮಸ್ಯೆಗಳೂ ಹೆಚ್ಚಿದ್ದು, ಎಲ್ಲೆಂದರಲ್ಲಿ ಕೆಟ್ಟುನಿಲ್ಲುತ್ತಿವೆ. ಅಪಘಾತಗಳೂ ಹೆಚ್ಚಿರುವ ಕಾರಣ ಜನ ಸಾಮಾನ್ಯರಿಂದಲೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



