ಜೆಡಿಎಸ್ ಅಸಮಾಧಾನ, ಈಶ್ವರಪ್ಪ ಬಂಡಾಯದ ಬಗ್ಗೆ ವಿಜಯೇಂದ್ರ ಹೇಳಿದ್ದಿಷ್ಟು

| Updated By: ಗಣಪತಿ ಶರ್ಮ

Updated on: Mar 19, 2024 | 11:40 AM

ಲೋಕಸಭೆ ಚುನಾವಣೆ ಮೈತ್ರಿ ವಿಚಾರವಾಗಿ ಜೆಡಿಎಸ್ ಅಸಮಧಾನಗೊಂಡಿರುವುದು ಮತ್ತು ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಬಂಡಾಯ ಸ್ಪರ್ಧೆ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈಶ್ವರಪ್ಪ ಬಂಡಾಯ ಶಮನಗೊಳಿಸುವ ಬಗ್ಗೆ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಜೆಡಿಎಸ್ ಅಸಮಾಧಾನ, ಈಶ್ವರಪ್ಪ ಬಂಡಾಯದ ಬಗ್ಗೆ ವಿಜಯೇಂದ್ರ ಹೇಳಿದ್ದಿಷ್ಟು
ಬಿವೈ ವಿಜಯೇಂದ್ರ
Follow us on

ಬೆಂಗಳೂರು, ಮಾರ್ಚ್ 19: ಲೋಕಸಭೆ ಚುನಾವಣೆಗೆ (Lok Sabha Election) ಮೈತ್ರಿ ವಿಚಾರದಲ್ಲಿ ಜೆಡಿಎಸ್​​ಗೆ ಸಮಾಧಾನ ಆಗುವಂಥ ತೀರ್ಮಾನವನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದರು. ಜೆಡಿಎಸ್ ಅಸಮಾಧಾನ ಹಾಗೂ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಂಡಾಯದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಈಗಿನ ಅಸಮಾಧಾನದ ಬಗ್ಗೆ ನಾವು ನೀವು ಮಾತಾಡುವುದು ತಪ್ಪು. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಜೆಡಿಎಸ್ ಮತ್ತು ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಈಗಿನ ಗೊಂದಲಗಳೆಲ್ಲವೂ ಸುಖಾಂತ್ಯ ಕಾಣಲಿದೆ ಎಂದ ವಿಜಯೇಂದ್ರ, ಮಾಜಿ ಸಿಎಂ ಡಿವಿ ಸದಾನಂದ ಗೌಡ ಬಗ್ಗೆ ಸಚಿವ ಎಂಬಿ ಪಾಟೀಲ್ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನಾಯಕರಿಗೆ ಅವರ ನಾಯಕರಿಗಿಂತ ನಮ್ಮ ಪಕ್ಷದ ನಾಯಕರ ಮೇಲೆಯೇ ಪ್ರೀತಿ ಹೆಚ್ಚಾಗಿದೆ. ಕಳೆದೊಂದು ವಾರದ ಎಂಬಿ ಪಾಟೀಲ್ ಹಾಗೂ ಇತರ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಬಿಜೆಪಿ ನಾಯಕರ ಮೇಲೆ ಅವರಿಗೆ ವಿಶ್ವಾಸ ಬಂದಂತಿದೆ. ಸದಾನಂದ ಗೌಡ ಪಕ್ಷ ಬಿಡಲ್ಲ, ಬಿಜೆಪಿಯಲ್ಲೇ ಇರುತ್ತಾರೆ ಎಂದು ವಿಜಯೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿ, ಅವರ ಮನವೊಲಿಕೆ ಪ್ರಯತ್ನ ಕೈಬಿಡಲ್ಲ. ಅವರು ಹಿರಿಯರು, ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿದೆ. ಅವರಿಗೆ ಸತ್ಯ ಅರ್ಥ ಆದ ಮೇಲೆ ಎಲ್ಲವೂ ಸರಿಯಾಗಲಿದೆ. ಇವತ್ತು, ನಾಳೆ ದೆಹಲಿಯಲ್ಲಿ ಸಭೆ ಇದೆ. ಬಾಕಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮವಾಗಲಿದೆ ಎಂದರು.

ಯಾರು ರಾಜ? ಸಿದ್ದರಾಮಯ್ಯ ಹೇಳಿಕೆ ಗಮನಕ್ಕೆ ಬಂದಿಲ್ಲವೆಂದ ಯದುವೀರ್

ಯಾರು ರಾಜ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್ ಹೇಳಿದ್ದಾರೆ. ಸಂವಿಧಾನದಲ್ಲಿ ರಾಜ, ರಾಣಿ ಪಟ್ಟಕ್ಕೆ ವಿಶೇಷ ಮಹತ್ವ ಇಲ್ಲ. ಇಲ್ಲಿ ಎಲ್ಲರೂ ಪ್ರಜೆಗಳೇ, ಇಷ್ಟನ್ನು ಮಾತ್ರ ನಾನು ಹೇಳಬಲ್ಲೆ. ಸುತ್ತೂರು ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಬೇರೆ ಯಾವ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ ಚುನಾವಣಾ ಪ್ರಚಾರ ಎಂದಿನಂತೆ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಭಾಗ್ಯ ಪಡೆಯಲು ಅಕ್ಕನನ್ನೇ ಮದುವೆಯಾದ… ಆಮೇಲೆ ಏನಾಯ್ತು?

ನಾಮಪತ್ರ ಸಲ್ಲಿಕೆ ದಿನಾಂಕ ಬಗ್ಗೆ 2-3 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ. ಪ್ರಧಾನಿ ಮೋದಿ ಪ್ರಚಾರಕ್ಕೆ ಬರುವ ಬಗ್ಗೆ ನನಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಯದುವೀರ್‌ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ