ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್: ಸಿದ್ದರಾಮಯ್ಯ ಸಂಪುಟ ಡಿಕೆಶಿ ಪಾದದಡಿಯಲ್ಲಿದೆ ಎಂದ ಕುಮಾರಸ್ವಾಮಿ

ಸಂವಿಧಾನದ ವ್ಯವಸ್ಥೆ ಉಳಿಯಬೇಕಾದ್ರೆ ಕಾಂಗ್ರೆಸ್​​ಗೆ ಮತ ನೀಡಿ ಎಂದ ಕಾಂಗ್ರೆಸ್​​ನವರು ಕರ್ನಾಟಕ ಸರ್ಕಾರವನ್ನೇ ಡಿಸಿಎಂ ಡಿಕೆ ಶಿವಕುಮಾರ್ ಪಾದದಡಿಯಲ್ಲಿ ಇಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಹಾಸನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್: ಸಿದ್ದರಾಮಯ್ಯ ಸಂಪುಟ ಡಿಕೆಶಿ ಪಾದದಡಿಯಲ್ಲಿದೆ ಎಂದ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Updated By: Ganapathi Sharma

Updated on: Nov 24, 2023 | 4:02 PM

ಹಾಸನ, ನವೆಂಬರ್ 24: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಸಿಬಿಐ ತನಿಖೆಯನ್ನು ವಾಪಸ್ ಪಡೆಯುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದರ ಬಗ್ಗೆ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಯು ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಸಚಿವ ಸಂಪುಟವು ಡಿಕೆ ಶಿವಕುಮಾರ್‌ ಪಾದದಡಿಯಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಹಾಸನದಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದೇಶದ ಕಾನೂನಿನ ವ್ಯವಸ್ಥೆಯನ್ನು ಅವರ ಪಾದದಡಿಗೆ ತೆಗೆದುಕೊಂಡು ಹೋಗುವ‌ ಕೆಲಸ ಮಾಡಿದ್ದಾರೆ. ಯಾವುದಾದರೂ ಒಂದು ಉತ್ತಮ ಕೆಲಸಕ್ಕೆ ಈ ತೀರ್ಮಾನ ಮಾಡಿದ್ದರೆ ಅಭಿನಂದಿಸಬಹುದಿತ್ತು. ಹಿಂದಿನ ಸರ್ಕಾರಕ್ಕೆ ತನಿಖಾ ಸಂಸ್ಥೆಗಳು ತನಿಖೆ ಮುಂದುವರೆಸಲು ಅನುಮತಿ ಕೋರಿದ್ದರು. ಆ ಸಂದರ್ಭದಲ್ಲಿ ಅವತ್ತಿನ ಸರ್ಕಾರ ತೀರ್ಮಾನ ಕೊಟ್ಟಿತ್ತು. ಇವತ್ತಿನ ಉಪಮುಖ್ಯಮಂತ್ರಿಯವರು ಆ ಸಂದರ್ಭದಲ್ಲಿ ಶಾಸಕರಾಗಿದ್ದರು. ಅವರು ರಾಜ್ಯದ ಜನತೆ ಪರವಾಗಿ ಕೆಲಸ ಮಾಡಿರುವುದಕ್ಕೆ ಬದಲಾಗಿ ಅವರ ವೈಯಕ್ತಿಕ ಸಮಸ್ಯೆ ಬಗೆಹರಿಸಲು ಉಪಯೋಗ ಮಾಡಿರುವುದೇ ಜಾಸ್ತಿ. ಅವರ ಶಾಸಕರ ಲೆಟರ್​​ಗಳನ್ನ ಇಂತಹ ಕೆಲಸಕ್ಕೆ ಉಪಯೋಗಿಸಿದ್ದೇ ಜಾಸ್ತಿ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.

ಮೈನಿಂಗ್, ಗ್ರಾನೈಟ್ ಕೆಲಸ ಮಾಡಲು ಹಾಗೂ ಕಾನೂನು ಉಲ್ಲಂಘಿಸಿ ಮಾಡಿದ ಸಂಪತ್ತು ರಕ್ಷಿಸಲು ಸ್ಥಾನಮಾನ ಉಪಯೋಗಿಸಿಕೊಂಡಿದ್ದಾರೆ. ಯಾವ್ಯಾವ ರೀತಿ ಅವರ ಸ್ಥಾನ ಮಾನ ಉಪಯೋಗಿಸಿದ್ದಾರೆ ವೃತ್ತಿಸಂಬಂಧ ಎಂಬುದನ್ನೆಲ್ಲ ಈಗ ಚರ್ಚೆ ಮಾಡುವುದಿಲ್ಲ. ಅವರ ವಿರುದ್ಧ ಸುಪ್ರೀಂಕೋರ್ಟ್, ಹೈಕೋರ್ಟ್​​ನ ನಲ್ಲಿ ಹಲವು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ತನಿಖೆ ಬಾಕಿ ಇದ್ದಾಗ ಈ ರೀತಿ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ವಕೀಲ ವೃತ್ತಿ ಮಾಡುವವರಿಗೆ ಉಪನ್ಯಾಸ ನೀಡಿದವರು. ಅವರ ಕ್ಯಾಬಿನೆಟ್​​ನಲ್ಲಿ ಇಂತಹ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ತನಿಖೆ ವಾಪಸ್: ಸುಪ್ರೀಂ ತಿಳಿವಳಿಕೆ ಇಲ್ಲದೆ ಹೋಯ್ತೇ ಸಿದ್ದರಾಮಯ್ಯ ಸರ್ಕಾರಕ್ಕೆ?

ಅವರು ಬಹಳ ಮೇಧಾವಿಗಳಿದ್ದಾರೆ. ಇಂತಹ ತೀರ್ಮಾನದಿಂದ ಎಷ್ಟರಮಟ್ಟಿಗೆ ಇವರು ಕಾನೂನು ರಕ್ಷಕರು ಎಂಬುದು ಗೊತ್ತಾಗುತ್ತದೆ. ಈ ಸರ್ಕಾರಕ್ಕೆ ಕನಿಷ್ಠ ತಿಳಿವಳಿಕೆ ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಇವರೆಲ್ಲ ಸಂವಿಧಾನ ಉಳಿಸುವಂತಹವರು! ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿದ್ದೇನೆ. ಸಂವಿಧಾನದ ವ್ಯವಸ್ಥೆ ಉಳಿಯಬೇಕಾದ್ರೆ ಕಾಂಗ್ರೆಸ್​​ಗೆ ಮತ ನೀಡಿ ಅಂತಾ ಚುನಾವಣಾ ವೇಳೆಯಲ್ಲೂ ಹೇಳಿದ್ರು. ಇವತ್ತಿನ ಅವರ ತೀರ್ಮಾನ ಅವರು ಸಂವಿಧಾನ ಎಷ್ಟರ ಮಟ್ಟಿಗೆ ಉಳಿಸುತ್ತಾರೆ ಎನ್ನೋದನ್ನ ತೋರಿಸಿದೆ. ಈ ದೇಶದ ಕಾನೂನಿನ ಬಗ್ಗೆ ಎಷ್ಟು ಗೌರವ ಇದೆ ಎಂದು ಗೊತ್ತಾಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ