ಯಾವ ಸಭೆಯಲ್ಲೂ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರದ ಸಿಎಂ ಇಬ್ರಾಹಿಂ: ಶಾಸಕ ಎ ಮಂಜು ಬಿಚ್ಚಿಟ್ರು ಹೊಸ ರಹಸ್ಯ

ಯಾವ ಮೀಟಿಂಗ್‌ನಲ್ಲೂ ಹೊಂದಾಣಿಕೆ ಆಗಬಾರದು ಎಂದು ಸಿಎಂ ಇಬ್ರಾಹಿಂ ಹೇಳಿಲ್ಲ. ಏನು ಹೇಳದಿದ್ದಾಗ ಒಪ್ಪಿಗೆ ಇದೆ ಅಂತ ಅಲ್ವಾ ಅರ್ಥ? ಅವರು ಸಭೆಯಲ್ಲೇ ಚರ್ಚೆ ಮಾಡಬೇಕಿತ್ತು. ಅವರು ಗೊತ್ತೆ ಇಲ್ಲಾ, ಹೇಳೇ ಇಲ್ಲಾ ಅನ್ನೋದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ ಎಂದು ಮಂಜು ಹೇಳಿದ್ದಾರೆ.

ಯಾವ ಸಭೆಯಲ್ಲೂ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರದ ಸಿಎಂ ಇಬ್ರಾಹಿಂ: ಶಾಸಕ ಎ ಮಂಜು ಬಿಚ್ಚಿಟ್ರು ಹೊಸ ರಹಸ್ಯ
ಎ ಮಂಜು
Follow us
| Updated By: ಗಣಪತಿ ಶರ್ಮ

Updated on: Oct 20, 2023 | 3:12 PM

ಹಾಸನ, ಅಕ್ಟೋಬರ್ 20: ಜೆಡಿಎಸ್​​ (JDS) ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆಯಾಗಿರುವ ಸಿಎಂ ಇಬ್ರಾಹಿಂ (CM Ibrahim) ಬಗ್ಗೆ ಪಕ್ಷದ ಶಾಸಕ ಎ ಮಂಜು (A Manju) ರಹಸ್ಯ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಬಿಜೆಪಿ ಜತೆ ಮೈತ್ರಿ ವಿಚಾರವಾಗಿ ಜೆಡಿಎಸ್​​​ ಸಭೆಗಳಲ್ಲಿ ಚರ್ಚೆಯಾದಾಗ ಇಬ್ರಾಹಿಂ ಮೌನವಾಗಿದ್ದರು. ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸಿರಲಿಲ್ಲ. ಮೌನವಾಗಿದ್ದು ಈಗ ತಮ್ಮ ಬಳಿ ಚರ್ಚಿಸಿರಲಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ ಎಂದು ಎ ಮಂಜು ಹೇಳಿದ್ದಾರೆ.

ಒರಿಜಿನಲ್ ಜೆಡಿಎಸ್ ನಮ್ದು ಎಂಬ ಸಿಎಂ ಇಬ್ರಾಹಿಂ ಹೇಳಿಕೆ ಹಾಗೂ ಜೆಡಿಎಸ್‌ನಿಂದ ಅವರನ್ನು ಉಚ್ಛಾಟನೆ ಮಾಡಿ ನೂತನ ಅಧ್ಯಕ್ಷರ ಆಯ್ಕೆ ಮಾಡಿದ ವಿಚಾರವಾಗಿ ಹಾಸನದಲ್ಲಿ ಮಂಜು ಪ್ರತಿಕ್ರಿಯೆ ನೀಡಿದ್ದಾರೆ. ಹಲವಾರು ಮೀಟಿಂಗ್‌ಗಳು ಆಗಿವೆ, ಎಲ್ಲಾ ಮೀಟಿಂಗ್‌ಗಳು ಅವರ ಅಧ್ಯಕ್ಷತೆಯಲ್ಲೇ ಆಗಿವೆ. ಅವರು ಎಲ್ಲಾ ಮೀಟಿಂಗ್‌ಗಳಲ್ಲೂ ಇದ್ದರು. ಚರ್ಚೆ ಮಾಡಿದಾಗ ನಾನು ಕೂಡ ಅವರೊಟ್ಟಿಗೆ ಭಾಗಿಯಾಗಿದ್ದೆ. ಯಾವ ಮೀಟಿಂಗ್‌ನಲ್ಲೂ ಹೊಂದಾಣಿಕೆ ಆಗಬಾರದು ಎಂದು ಅವರು ಹೇಳಿಲ್ಲ. ಏನು ಹೇಳದಿದ್ದಾಗ ಒಪ್ಪಿಗೆ ಇದೆ ಅಂತ ಅಲ್ವಾ ಅರ್ಥ? ಅವರು ಸಭೆಯಲ್ಲೇ ಚರ್ಚೆ ಮಾಡಬೇಕಿತ್ತು. ಅವರು ಗೊತ್ತೆ ಇಲ್ಲಾ, ಹೇಳೇ ಇಲ್ಲಾ ಅನ್ನೋದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ ಎಂದು ಮಂಜು ಹೇಳಿದ್ದಾರೆ.

ನಾನು ಸಭೆಯಲ್ಲಿದ್ದೆ, ಅವರು ಸಭೆಯಲ್ಲಿದ್ದರು. ಅವರೇ ಭಾಷಣ ಮಾಡಿದ್ದರು. ಈಗ ಅವರು ಬಿಜೆಪಿ ಜತೆ ಹೋಗುವುದು ತಪ್ಪು ಎಂದು ಹೇಳುವುದು ಒಳ್ಳೆಯದಲ್ಲ. ನಾನೇ ಮೊದಲು ವಿರೋಧಿಸಿದ್ದೆ, ನಾನೇ ಅಡ್ಜಸ್ಟ್ ಆಗಿದ್ದೀನಿ, ಇದಕ್ಕಿಂತ ಉದಾಹರಣೆ ಏನು ಬೇಕು. ಇವತ್ತು ರಾಜಕೀಯದಲ್ಲಿ ಶತ್ರು ಕೂಡ ಇಲ್ಲಾ, ಮಿತ್ರನೂ ಇಲ್ಲಾ. ಈಗ ನಮ್ ಕಣ್ಣ ಮುಂದೆ ಕಾಣ್ತಿರುವುದು ಪಾರ್ಟಿ ಅಷ್ಟೆ. ವೈಯಕ್ತಿಕ ಹಿತಾಸಕ್ತಿಗಿಂತ ದೇಶ ಮುಖ್ಯ. ಆ ದೃಷ್ಟಿಯಲ್ಲಿ ಒಂದಾಗಬೇಕು ಎಂದು ಇಬ್ಬರು ಕೂಡ ಒಪ್ಪಿಕೊಂಡಿರುವುದು ಸ್ವಾಗತಾರ್ಹ ಎಂದು ಮಂಜು ಹೇಳಿದ್ದಾರೆ.

ಇದನ್ನೂ ಓದಿ: ಜೆಡಿಎಸ್​​​ ಬೇಗುದಿ ಶಮನಕ್ಕೆ ಗೌಡರ ತಂತ್ರ: ಮೈತ್ರಿಯ ಸಾಧಕ ಬಾಧಕ ಲೆಕ್ಕಾಚಾರ ಹಾಕುತ್ತಿರುವ ಬಿಜೆಪಿ

ಮಗನಿಗಾಗಿ ನಮ್ಮ ಮನೆ ಹಾಳು ಮಾಡಿದರು ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರು ಮಗನನ್ನು ಅದೇ ಪಾರ್ಟಿಯಲ್ಲಿ ಎಂಎಲ್‌ಎ ಸ್ಥಾನಕ್ಕೆ ನಿಲ್ಲಿಸಿರಲಿಲ್ವಾ? ಈಗ ಹೇಗೆ ಆ ರೀತಿ ಮಾತನಾಡುತ್ತಾರೆ? ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ವಿಮಾನಯಾನ ಖಾತೆ ಸಚಿವರಾಗಿದ್ದರು. ಆಗ ಯಾರ ಮನೆ ಉದ್ಧಾರ ಆಯ್ತು? ತೊಂದರೆಯಾದಾಗ ವೈಯುಕ್ತಿಕ ವಿಚಾರ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಅವರ ಹತ್ರನೇ ಹೌಸ್‌ಫುಲ್, ನನ್ನನ್ನು ಯಾಕೆ ಕರೆಯುತ್ತಾರೆ? ಅಲ್ಲಿಂದ ಹೋಗುವವರನ್ನು ತಡೆ ಹಿಡಿಯಲು ಈ ರೀತಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ