
ಬಾಗಲಕೋಟೆ, ಅಕ್ಟೋಬರ್ 13: ರಾಜ್ಯದಲ್ಲಿ RSS ಚಟುವಟಿಕೆ ನಿಷೇಧ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದಾರೆ. ಆ ಬಗ್ಗೆ ಪರಿಶೀಲಿಸಿ ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಅದೇ ರೀತಿ ಕ್ರಮ ಕೈಗೊಳ್ಳಿ ಅಂತಾ ಸಿಎಸ್ ಗೆ ಸೂಚಿಸಿರೋದಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ RSS ಚಟುವಟಿಕೆ ನಿಷೇಧಿಸುವಂತೆ ಸಿಎಂಗೆ ತಾವು ಪತ್ರ ಬರೆದಿರುವ ವಿಚಾರವನ್ನ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆರೆಸ್ಸೆಸ್ ವಿರೋಧಿ. ರಾಷ್ಟ್ರೀಯ ಸವಯಂ ಸೇವಕ ಸಂಘ ರಿಜಿಸ್ಟರ್ ಆಗಿರುವ ಕಾಪಿ ತೋರಿಸಿ ಎಂದು ಅವಾಲು ಹಾಕಿರುವುದಲ್ಲದೆ, RSS ತೆಗೆದರೆ ಬಿಜೆಪಿನೇ ಇರಲ್ಲ ಎಂದಿದ್ದಾರೆ. ಆರೆಸ್ಸೆಸ್ ಚಟುವಟಿಕೆಗಳನ್ನ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ ಅಂತಲೂ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಶಾಸಕರ ಒಡೆತನದ ಶಾಲೆಯಲ್ಲಿ ಆರ್ಎಸ್ಎಸ್ ಬೈಠಕ್, ಪಥಸಂಚಲನ!
ಮತ್ತೊಂದೆಡೆ RSS ವಿಚಾರಕ್ಕೆ ಕೈ ಹಾಕಿರೋ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ಕೆಂಡ ಕಾರುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ತಾಕತ್ ಇದ್ದರೆ ಆರೆಸ್ಸೆಸ್ ನಿಷೇಧ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ.
ಈ ಹಿಂದೆಯೂ RSS ನಿಷೇಧ ಮಾಡಿ ಬಳಿಕ ವಾಪಸ್ ತೆಗೆದುಕೊಂಡಿದ್ದರು. ಕಲುಷಿತ ಮನಸ್ಸುಗಳ ಮಧ್ಯೆಯೂ RSS ಶತಮಾನೋತ್ಸವ ಆಚರಿಸಿರುವ ಕಾರಣಕ್ಕೆ ಇವರಿಗೆ ಉರಿ ಆರಂಭವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಿಯಾಂಕ್ ರೀತಿಯ ನಡತೆ ಇಲ್ಲ. RSS ವಿರುದ್ಧ ಎಂದೂ ಖರ್ಗೆಯವರು ಮಾತಾಡಿರಲಿಲ್ಲ. ಆದರೆ ಪ್ರಿಯಾಂಕ್ ಖರ್ಗೆಗೆ ಯಾಕೆ ಈ ಹುಚ್ಚುತನ? ಎಂದು ಪ್ರಶ್ನಿಸಿರುವ ಛಲವಾದಿ ನಾರಾಯಣಸ್ವಾಮಿ,ಇದು ಮಲ್ಲಿಕಾರ್ಜುನ ಖರ್ಗೆಯವರಿಗೂ ಅವಮಾನ ಎಂದಿದ್ದಾರೆ. ಬಾಂಬ್ ಹಾಕುವವರು, ಜನರ ಪ್ರಾಣ ತೆಗೆದವರನ್ನು ಪೋಷಣೆ ಮಾಡುವ ಮನಸ್ಥಿತಿ ಕಾಂಗ್ರೆಸ್ ನವರದ್ದು. ಆದರೆ RSS ಸ್ವಯಂ ಸೇವಕರು ದೇಶ ರಕ್ಷಣೆಗಾಗಿ ತ್ಯಾಗ ಮಾಡುತ್ತಿದ್ದಾರೆ. ನಿಮ್ಮ ಚಪಲ, ಪ್ರಚಾರಕ್ಕಾಗಿ RSS ಬಗ್ಗೆ ಕೇವಲವಾಗಿ ಮಾತಾಡಬೇಡಿ. ಮಾತೆತ್ತಿದರೆ ಅಮೆರಿಕ, ಚೀನಾದ ಅಭಿವೃದ್ಧಿ ಬಗ್ಗೆ ಮಾತಾಡುವ ಇವರಿಗೆ, ತಮ್ಮ ಇಲಾಖೆಯ ಕೆಲಸವನ್ನು ಮಾಡುವ ಯೋಗ್ಯತೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.