CT Ravi: ಪಾಕಿಸ್ತಾನಕ್ಕೆ ಹೋಗ್ತೀವಿ ಅನ್ನೋರ್​ನ ಫ್ರೀಯಾಗಿ ಕಳಿಸ್ತೀವಿ; ಕ್ಲಬ್​ಹೌಸ್​ನಲ್ಲಿ ಪಾಕ್​ ಪರ ಘೋಷಣೆಗೆ ಸಿಟಿ ರವಿ ಆಕ್ಷೇಪ

ಚಾಮರಾಜಪೇಟೆ ಮೈದಾನದಲ್ಲಿ ಗಣಪತಿ ಕೂರಿಸಲು ಬಿಡುವುದಿಲ್ಲ ಎಂದರೆ ನಮಾಜ್ ಮಾಡಲು ಹೇಗೆ ಅವಕಾಶ ಕೊಡುತ್ತೀರಿ ಎನ್ನುವ ಪ್ರಶ್ನೆ ಬರುತ್ತದೆ ಎಂದು ಸಿಟಿ ರವಿ ಹೇಳಿದರು.

CT Ravi: ಪಾಕಿಸ್ತಾನಕ್ಕೆ ಹೋಗ್ತೀವಿ ಅನ್ನೋರ್​ನ ಫ್ರೀಯಾಗಿ ಕಳಿಸ್ತೀವಿ; ಕ್ಲಬ್​ಹೌಸ್​ನಲ್ಲಿ ಪಾಕ್​ ಪರ ಘೋಷಣೆಗೆ ಸಿಟಿ ರವಿ ಆಕ್ಷೇಪ
ಬಿಜೆಪಿ ಶಾಸಕ ಸಿಟಿ ರವಿ
Edited By:

Updated on: Aug 17, 2022 | 3:20 PM

ಬೆಂಗಳೂರು: ಕ್ಲಬ್​ಹೌಸ್‌ನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿಚಾರವನ್ನು ಸಣ್ಣದು ಎಂದು ಲಘುವಾಗಿ ಪರಿಗಣಿಸಲು ಆಗುವುದಿಲ್ಲ. ಪಾಕಿಸ್ತಾನಕ್ಕೆ ಹೋಗಲು ಬಯಸುವವರಿಗೆ ಉಚಿತವಾಗಿ ವೀಸಾ ಕೊಡಬೇಕು. ಅಲ್ಲಿಗೆ ಹೋಗಬೇಕು ಎಂದುಕೊಂಡವರು ಭಾರತದಲ್ಲಿ ಉಳಿಯಲು ಯೋಗ್ಯರಲ್ಲ. ಹೋದರೆ ಹೋಗಲಿ ಎಂದು ಅವರನ್ನು ಮೊದಲು ಕಳಿಸಿಬಿಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ (CT Ravi) ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ ಮೈದಾನವು ಕಂದಾಯ ಇಲಾಖೆಗೆ ಸೇರಿದೆ. ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೇ ನಿರ್ಣಯ ತೆಗೆದುಕೊಳ್ಳಬೇಕು. ಬ್ರಿಟೀಷರ ಕಾಲದಲ್ಲೇ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಯಿತು. ಇಲ್ಲಿ ಯಾಕೆ ಕೂರಿಸಬಾರದು ಅಂತ ಹಕ್ಕಿನ ವಿಚಾರ ಬರುತ್ತದೆ. ಬೇಕು ಅಥವಾ ಬೇಡ ಎನ್ನುವುದನ್ನು ಕಂದಾಯ ಇಲಾಖೆ ಹೇಳಬೇಕು. ನಾನು ಹೇಳ್ತೀನಿ ಕೂರಿಸಬೇಕು ಅಂತ. ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕಾದ್ದು ಕಂದಾಯ ಇಲಾಖೆ ಎಂದು ಅವರು ತಿಳಿಸಿದರು.

ಚಾಮರಾಜಪೇಟೆ ಮೈದಾನದಲ್ಲಿ ಗಣಪತಿ ಕೂಡಿಸಲು ಅವಕಾಶ ಕೊಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಅಲ್ಲಿ ಗಣಪತಿ ಕೂರಿಸಲು ಬಿಡುವುದಿಲ್ಲ ಎಂದರೆ ನಮಾಜ್ ಮಾಡಲು ಹೇಗೆ ಅವಕಾಶ ಕೊಡುತ್ತೀರಿ ಎನ್ನುವ ಪ್ರಶ್ನೆ ಬರುತ್ತದೆ. ನಮಾಜ್ ಮಾಡಲು ಬಿಟ್ಟ ಮೇಲೆ, ಗಣಪತಿ ಇಡಲೂ ಬಿಡಬೇಕು. ಗಣಪತಿ ಕೂರಿಸಿದರೆ ಜಾತಿ ಕೆಡುತ್ತಾ? ಜಾತಿ ಕೆಡುತ್ತದೆ ಎನ್ನುವವರು ಸಂವಿಧಾನ ವ್ಯವಸ್ಥೆ ಒಪ್ಪಿಲ್ಲ ಎಂದಾಗುತ್ತದೆ. ಸಂವಿಧಾನ ಒಪ್ಪುವವರು ಗಣಪತಿ ಕೂರಿಸಲು ಒಪ್ಪಬೇಕು ಎಂದು ಸವಾಲು ಹಾಕಿದರು.

ಮುಸ್ಲಿಂ ಪ್ರದೇಶದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಸಿದ್ದರಾಮಯ್ಯ ಮಾನಸಿಕತೆ ದೇಶ ವಿಭಜಕರಿಗೆ ಪುಷ್ಟಿ ನೀಡುತ್ತದೆ. ಮುಸ್ಲಿಂ ಏರಿಯಾ ಅಂದ್ರೆ ಪಾಕಿಸ್ತಾನಕ್ಕೆ ಸೇರಿಸಬೇಕು ಅಂತಾನಾ? ಅವರ ಏರಿಯಾ ಅಂದ್ರೆ ಉಳಿದವರು ಕಾಲಿಡಬಾರದು ಅಂತಾನಾ? ಸಿದ್ದರಾಮಯ್ಯ ಅವರು ತಕ್ಷಣ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಸಿದ್ದರಾಮಯ್ಯ ಅರಿವಿದ್ದು ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಹಿಂದೂ, ಮುಸ್ಲಿಂ ಅನ್ನೋ ಮಾನಸಿಕತೆಯಿಂದಲೇ ದೇಶ ವಿಭಜನೆ ಆಗಿದ್ದು ಎಂದು ತಿಳಿಸಿದರ.

ಇಂಥ ಮಾನಸಿಕತೆಯಿಂದಲೇ ಅನೇಕ ದೇಶಗಳು ವಿಭಜನೆ ಆಗಿವೆ. ದೇಶದ ಸಂವಿಧಾನಕ್ಕೆ ಏನು ಬೆಲೆ ಇದೆ? ಮುಸ್ಲಿಮರು ಇರುವ ಕಡೆ ಒಂದೂ ಫ್ಲೆಕ್ಸ್ ಹಾಕಬಾರದು ಅನ್ನೋದೇ ಸರಿಯಲ್ಲ. ಇವರ ಹೇಳಿಕೆ ದುರದೃಷ್ಟಕರ ಎಂದು ಅವರು ವಿಶ್ಲೇಷಿಸಿದರು. ಸಂಘಟನೆಯನ್ನು ಬಲಗೊಳಿಸುವ ದೃಷ್ಟಿಯಿಂದ ಹಳೇ ಮೈಸೂರು ಭಾಗದಲ್ಲಿ ಸಂಘಟನೆ ಬಗ್ಗೆ ಸಮಾಲೋಚನಾ ಸಭೆ ಆಗಿದೆ. ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ ಆಗಿತ್ತು. ಅದರ ದಿನಾಂಕವ‌ನ್ನು ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದರು.

Published On - 3:20 pm, Wed, 17 August 22