AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೋತಿಷಿ ಸಲಹೆಯಂತೆ ಲಕ್ಕಿ ನಂಬರ್​ ಕೊಠಡಿ ಪಡೆದುಕೊಂಡ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಿವಾಸದ ಮೇಲೂ ಕಣ್ಣು

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜ್ಯೋತಿಷಿ ನೀಡಿದ್ದ ಸಲಹೆಯಂತೆ ವಿಧಾನಸಭೆಯಲ್ಲಿ ಲಕ್ಕಿ ನಂಬರ್​ ಕೊಠಡಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಇದೀಗ ಸಿದ್ದರಾಮಯ್ಯನವರು ವಾಸವಿರುವ ನಿವಾಸದ ಮೇಲೂ ಕಣ್ಣಾಕ್ಕಿದ್ದಾರೆ.

ಜ್ಯೋತಿಷಿ ಸಲಹೆಯಂತೆ ಲಕ್ಕಿ ನಂಬರ್​ ಕೊಠಡಿ ಪಡೆದುಕೊಂಡ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಿವಾಸದ ಮೇಲೂ ಕಣ್ಣು
ಡಿಕೆ ಶಿವಕುಮಾರ್-ಸಿದ್ದರಾಮಯ್ಯ
ರಮೇಶ್ ಬಿ. ಜವಳಗೇರಾ
|

Updated on: May 23, 2023 | 2:02 PM

Share

ಬೆಂಗಳೂರು:  ಉಪಮುಖ್ಯಮಂತ್ರಿ  ಡಿಕೆ ಶಿವಕುಮಾರ್ (DK Shivakumar) ಹಾಗೂ ಸಚಿವರಾದ ಡಾ.ಜಿ. ಪರಮೇಶ್ವರ್ ಹಾಗೂ ರಾಮಲಿಂಗರೆಡ್ಡಿ ಅವರಿಗೆ ಕೊಠಡಿ ಹಂಚಿಕೆ ಮಾಡಲಾಗಿದೆ.  ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರವೀಂದ್ರ.ಕೆ ಅವರು ಮೂವರಿಗೂ ವಿಧಾನಸಭೆಯ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದು, ಡಿಕೆ ಶಿವಕುಮಾರ್ ಕೇಳಿದಂತೆ ಅವರಿಗೆ 335, 336, 337, 337A ಸಂಖ್ಯೆಯ ಕೊಠಡಿಯನ್ನು ನೀಡಲಾಗಿದೆ. ಇನ್ನು ಪರಮೇಶ್ವರ್​ಗೆ 327-327ಎ ಸಂಖ್ಯೆಯ ಕೊಠಡಿ ನೀಡಿದ್ದರೆ, ರಾಮಲಿಂಗರೆಡ್ಡಿ ಅವರಿಗೆ 329-329ಎ ಕೊಠಡಿ ನೀಡಲಾಗಿದೆ. ಜ್ಯೋತಿಷಿ ಆರಾಧ್ಯ ಹೇಳಿದ್ದ ಲಕ್ಕಿ ನಂಬರ್ ಕೊಠಡಿ ಸಂಖ್ಯೆಯನ್ನೇ ಪಡೆದುಕೊಳ್ಳುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಆಂತರಿಕವಾಗಿದ್ದ ದೆಹಲಿ ದಂಗಲ್ ಬಹಿರಂಗ: ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದ ಎಂಬಿ ಪಾಟೀಲ್​ ಹೇಳಿಕೆ, ಕೈ ಮನೆಯೊಳಗೆ ಬೂದಿ ಮುಚ್ಚಿದ ಕೆಂಡ

335, 336, 337, ಸಂಖ್ಯೆ ಕೊಠಡಿಯನ್ನು ತೆಗೆದುಕೊಳ್ಳುವಂತೆ ಜ್ಯೋತಿಷಿ ಬಿಬಿ ಆರಾಧ್ಯ ಅವರು ಡಿಕೆ ಶಿವಕುಮಾರ್​ಗೆ ಸಲಹೆ ನೀಡಿದ್ದರು. ಅಲ್ಲದೇ ಸಿದ್ದರಾಮಯ್ಯ ಹಾಲಿ ವಾಸ್ತವ್ಯ ಹೂಡಿರುವ ಶಿವಾನಂದ ಸರ್ಕಲ್ ಬಳಿ ಇರುವ ಸರ್ಕಾರಿ ನಿವಾಸ ಆಯ್ಕೆ ಮಾಡಿಕೊಳ್ಳುವಂತೆಯೂ ಆರಾಧ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಈಗ ವಿಧಾನಸಭೆಯಲ್ಲಿ ಲಕ್ಕಿ ನಂಬರ್ ಕೊಠಡಿ ಸಿಕ್ಕಿದೆ. ಆದ್ರೆ, ನಿವಾಸ ಹಂಚಿಕೆ ಇನ್ನೂ ಆಗಿಲ್ಲ.

ಜ್ಯೋತಿಷಿ ಬಿಬಿ ಆರಾಧ್ಯ ಸಲಹೆಯಂತೆ ಡಿಕೆ ಶಿವಕುಮಾರ್ ಅವರು ಗುರುವಾರ (ಮೇ 25) ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ಡಿಕೆ ತಮ್ಮ ಕೊಠಡಿ ಸಂಖ್ಯೆ 336ರಲ್ಲಿ ಪೂಜೆ ನೆರವೇರಿಸಲಿದ್ದಾರೆ. ಹೀಗಾಗಿ ಕೊಠಡಿಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯ ನಡೆದಿದೆ.

ಇನ್ನು ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಬಿ ಆರಾಧ್ಯ, ಎರಡು ವರ್ಷಗಳ ಬಳಿಕ ಎಂಟು ವರ್ಷಗಳ ಕಾಲ ಡಿಕೆ ಶಿವಕುಮಾರ್ ಸಿಎಂ ಆಗಿರುತ್ತಾರೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದು, ಅವರಿಗೆ ಇದೇ ಸಂಖ್ಯೆ ಕೊಠಡಿ ತೆಗೆದುಕೊಳ್ಳುವಂತೆ ಹೇಳಿದ್ದೆ. ಅಲ್ಲದೇ ಸಿದ್ದರಾಮಯ್ಯನವರ ವಾಸವಿರುವ ನಿವಾಸವನ್ನು ತೆಗೆದುಕೊಳ್ಳುವಂತೆ ಹೇಳಿದ್ದೇನೆ ಎಂದರು.

ಡಿಕೆ ಶಿವಕುಮಾರ್ ಅವರು ಹೆಚ್ಚು ದೈವ ಭಕ್ತರಾಗಿದ್ದು,  ಯಾವುದೇ ಒಂದು ಶುಭ ಕಾರ್ಯ ಮಾಡಬೇಕಾದರೆ ಜ್ಯೋತಿಷಿ, ಸ್ವಾಮೀಜಿಗಳನ್ನು ಕೇಳುತ್ತಾರೆ. ಇದೀಗ ವಿಧಾನಸಭೆಯಲ್ಲಿ ಕೊಠಡಿ ಆಯ್ಕೆ ಮಾಡಿಕೊಳ್ಳುವುದಕ್ಕೂ ಜ್ಯೋತಿಷ್ಯರ ಮೊರೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.