DK Shivakumar: ನನ್ನ ಮಗಳ ಫೀಸ್ ಬಗ್ಗೆ ಮಾಹಿತಿ ಬೇಕಂತೆ; ಸಿಬಿಐಗೆ ಬುದ್ಧಿ ಹೇಳುತ್ತೇನೆ ಎಂದ ಡಿಕೆ ಶಿವಕುಮಾರ್

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 09, 2023 | 11:58 AM

KPCC President Press Meet in Shivamoggga: ನನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿದೆ. ಆಕೆಯ ಶಿಕ್ಷಣ ಶುಲ್ಕದ ಬಗ್ಗೆ ಅವರಿಗೆ ಮಾಹಿತಿ ಬೇಕಂತೆ. ಈ ಸಿಬಿಐನವರಿಗೆ ಮಾಡಲು ದೊಡ್ಡ ದೊಡ್ಡ ಕೆಲಸಗಳು ಇವೆ. ಆ ದೊಡ್ಡ ಕೆಲಸಗಳನ್ನು ಮಾಡುವಂತೆ ಸಿಬಿಐಗೆ ಸಲಹೆ ನೀಡಿ ಪತ್ರ ಬರೆಯುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.

DK Shivakumar: ನನ್ನ ಮಗಳ ಫೀಸ್ ಬಗ್ಗೆ ಮಾಹಿತಿ ಬೇಕಂತೆ; ಸಿಬಿಐಗೆ ಬುದ್ಧಿ ಹೇಳುತ್ತೇನೆ ಎಂದ ಡಿಕೆ ಶಿವಕುಮಾರ್
ಶಿವಮೊಗ್ಗದಲ್ಲಿ ಡಿಕೆ ಶಿವಕುಮಾರ್
Follow us on

ಶಿವಮೊಗ್ಗ: ಸಿಬಿಐಗೆ ಮಾಡಲು ದೊಡ್ಡ ದೊಡ್ಡ ಕೆಲಸಗಳು ಇರುತ್ತವೆ. ಅವುಗಳನ್ನು ಮೊದಲು ಮಾಡುವಂತೆ ತಾನು ಸಿಬಿಐಗೆ ಸಲಹೆ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಹೇಳಿದರು. ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಸಚಿವರು, ತನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿರುವ ವಿಚಾರ ಪ್ರಸ್ತಾಪಿಸುತ್ತಾ ಈ ಮೇಲಿನ ಮಾತುಗಳನ್ನು ಹೇಳಿದರು.

ನನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿದೆ. ಆಕೆಯ ಶಿಕ್ಷಣ ಶುಲ್ಕದ ಬಗ್ಗೆ ಅವರಿಗೆ ಮಾಹಿತಿ ಬೇಕಂತೆ. ಈ ಸಿಬಿಐನವರಿಗೆ ಮಾಡಲು ದೊಡ್ಡ ದೊಡ್ಡ ಕೆಲಸಗಳು ಇವೆ. ಆ ದೊಡ್ಡ ಕೆಲಸಗಳನ್ನು ಮಾಡುವಂತೆ ಸಿಬಿಐಗೆ ಸಲಹೆ ನೀಡಿ ಪತ್ರ ಬರೆಯುತ್ತೇನೆ ಎಂದು ಡಿಕೆಶಿ ತಿಳಿಸಿದರು. ಇದೇ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕೇಂದ್ರ ಸರ್ಕಾರ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಇದೇ ವೇಳೆ, ತನಗೆ ಜಾರಿ ನಿರ್ದೇಶನಾಲಯದಿಂದ ನೋಟೀಸ್ ಬಂದಿರುವ ವಿಚಾರವನ್ನೂ ಅವರು ಖಚಿತಪಡಿಸಿದರು. ಇಡಿ ನೋಟೀಸ್ ಬಂದಿದೆ. ಫೆಬ್ರುವರಿ 22ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Yatindra Siddaramaiah: ನಾನೇ ಅಭ್ಯರ್ಥಿ: ವರುಣಾ ಕ್ಷೇತ್ರದಲ್ಲಿ ಡಾ. ಯತೀಂದ್ರ ಆತ್ಮವಿಶ್ವಾಸದ ಓಟ

ಮದ್ಯ ಖರೀದಿಸಲು ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಧೋರಣೆಯನ್ನು ಡಿಕೆ ಶಿವಕುಮಾರ್ ಇದೇ ವೇಳೆ ಖಂಡಿಸಿದರು. ಇವರು ಲಿಕರ್ ಖರೀದಿಗೆ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಲು ಹೊರಟಿತ್ತು. ಮಠಾಧೀಶರ ಒತ್ತಾಯಕ್ಕೆ ಮಣಿದು ಈ ನಿರ್ಧಾರ ಕೈಬಿಟ್ಟಿದ್ದಾರೆ. ಆದರೆ ಇವರ ಮನಃಸ್ಥಿತಿ ಏನು ಎಂಬುದು ಇವರ ಆಲೋಚನೆಯಿಂದ ಗೊತ್ತಾಗುತ್ತದೆ.

ಇನ್ನು, ವಿಐಎಸ್​ಎಲ್ ಕಾರ್ಖಾನೆಯನ್ನು ಉಳಿಸಬೇಕು ಎಂದು ಆಗ್ರಹಿಸಿದ ಅವರು, ವಿಐಎಸ್​ಎಲ್​ಗೆ ಮೈನಿಂಗ್ ಲೈಸೆನ್ಸ್ ಸಿಕ್ಕರೆ ಸಂಸ್ಥೆ ಉಳಿಯುತ್ತದೆ. ಕಳೆದ 7 ವರ್ಷಗಳಿಂದ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಆದರೂ, ವಿಐಎಸ್​ಎಲ್​ಗೆ ಯಾಕೆ ಗಣಿಗಾರಿಕೆ ಪರವಾನಿಗೆ ಕೊಡಲಾಗಿಲ್ಲ ಂದು ಅವರು ಕೇಳಿದರು.

ಇದನ್ನೂ ಓದಿ: Mandya Politics: ಜೆಡಿಎಸ್​ ಭದ್ರಕೋಟೆಯಲ್ಲಿ ಬಿಜೆಪಿ ಉಸ್ತುವಾರಿ ಬದಲಾವಣೆ, ಮಂಡ್ಯಕ್ಕೆ ಅಶೋಕ್, ಗೋಪಾಲಯ್ಯ ಹೊರಕ್ಕೆ

ಟೆಂಡರ್ ಅಕ್ರಮ

ಟೆಂಡರ್ ಬಿಲ್​ನಲ್ಲಿ 22 ಸಾವಿರ ಕೋಟಿ ರೂ ಅಕ್ರಮ ನಡೆದಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಅವರು ಸರ್ಕಾರದ ವಿರುದ್ಧ ಮಾಡಿರುವ ಆರೋಪವನ್ನು ಡಿಕೆಶಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ ಆಗುತ್ತದೆ. ಹಾಗಾಗಿ, ಸರ್ಕಾರ ತರಾತುರಿಯಲ್ಲಿ ಟೆಂಡರ್ ಮಾಡಲು ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಅಭಿಪ್ರಾಯಪಟ್ಟರು.

ಇನ್ನು, ಶಿವಮೊಗ್ಗ ವಿಮಾನನಿಲ್ದಾಣಕ್ಕೆ ಬಿಎಸ್ ಯಡಿಯೂರಪ್ಪ ಅವರ ಹೆಸರಿಡಲು ತನಗೆ ಯಾವುದೇ ಅಭ್ಯಂತರ ಇಲ್ಲ ಎಂದ ಅವರು, ಈ ಏರ್​ಪೋರ್ಟ್​ಗೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.\

ಇದನ್ನೂ ಓದಿ: ಹಾಸನ: ಜೆಡಿಎಸ್​ನ ಮತ್ತೊಂದು ವಿಕೆಟ್‌ ಪತನ, ಕಾಂಗ್ರೆಸ್​ ಸೇರೊ ಬಗ್ಗೆ ಮಾತನಾಡಿದ ಶಾಸಕನ ಆಡಿಯೋ ವೈರಲ್

ಹಾಗೆಯೇ, ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರಮೇಶ್ ಜಾರಕಿಹೊಳಿ ಒತ್ತಾಯ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ತಾನು ಅವರ ಬಗ್ಗೆ ಮಾತನಾಡುವುದಿಲ್ಲ. ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಜಾರಕಿಹೊಳಿ ಮತ್ತು ಈಶ್ವರಪ್ಪ ಹತಾಶರಾಗಿದ್ದಾರೆ ಎಂದರು.

Published On - 11:55 am, Thu, 9 February 23