ರಾಜಕಾರಣದಲ್ಲಿ ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ: ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ!

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಮತ್ತು ವಿವಿಧ ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ ನಡೆದಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಬಾಯಲ್ಲಿ ಅಚ್ಚರಿ ಮಾತುಗಳು ಬಂದಿವೆ. ಹೌದು...ರಾಜಕೀಯದಲ್ಲಿ ನಾನು ಎಷ್ಟು ದಿನ ಇರುತ್ತೇನೋ, ಬಿಡುತ್ತೇನೋ ಗೊತ್ತಿಲ್ಲ ಎನ್ನುವ ಮಾತುಗಳನ್ನಾಡಿದ್ದಾರೆ.

ರಾಜಕಾರಣದಲ್ಲಿ ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ: ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ!
ಡಿಕೆ ಶಿವಕುಮಾರ್
Edited By:

Updated on: Apr 05, 2024 | 4:43 PM

ಬೆಂಗಳೂರು, (ಏಪ್ರಿಲ್ 05): ನಾನು ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್‌ ಕೊಡಬೇಕು ಎಂದು ಖುದ್ದು ಸಿಎಂ ಸಿದ್ದರಾಮಯ್ಯ (Siddaramaiah) ಮೊನ್ನೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಹೇಳಿದ್ದರು. ಇದು ಕಾಂಗ್ರೆಸ್​ನಲ್ಲಿ ಮಾತ್ರವಲ್ಲದೇ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಸಹ, ನಾನು ರಾಜಕೀಯದಲ್ಲಿ ಎಷ್ಟು ದಿನ ಇರುತ್ತೇನೋ, ಬಿಡುತ್ತೇನೋ ಗೊತ್ತಿಲ್ಲ ಎಂದು ಅಚ್ಚರಿ ಮಾತುಗಳನ್ನಾಡಿದ್ದಾರೆ. ಇದು ಕೂಡ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನೂತನ ಕಾರ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ , ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಕೆಲಸ ಮಾಡಬೇಕು. ವಿಸಿಟಿಂಗ್​ ಕಾರ್ಡ್​ ಇಟ್ಟುಕೊಂಡು ಓಡಾಡಿದರೆ ಆಗಲ್ಲ. ಕೆಲಸ ಮಾಡಿಲ್ಲ ಎಂದರೆ ಚುನಾವಣೆ ಬಳಿಕ ಮಾಜಿಗಳು ಆಗುತ್ತೀರಿ. ನಾನು ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ನೀವೆಲ್ಲಾ ಕೆಲಸ ಮಾಡಬೇಕು, ನಿಮಗೆ ಕಾರು, ರೂಂ ಕೊಡಲ್ಲ. ನಿಮ್ಮದೇ ಕಾರು ಬಳಸಿಕೊಂಡು ಸುತ್ತಬೇಕು ಎಂದು ಹೇಳಿದರು. ಇದರಲ್ಲಿ ಡಿಕೆ ಶಿವಕುಮಾರ್ ಅವರು, ತಾವು ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ ಎನ್ನುವ ಆಡಿದ ಮಾತುಗಳು ಸಂಚಲನ ಮೂಡಿಸಿದೆ.

ಇದನ್ನೂ ಓದಿ: ನಾನು ಇರಬೇಕೋ, ಬೇಡ್ವೋ? ವರುಣದಲ್ಲಿ ಸಿಎಂ ಎಮೋಷನಲ್ ಕಾರ್ಡ್​ ಹಿಂದೆ ಇದೆಯಾ ಆ 9 ಸಾವಿರ ಮತಗಳ ಟೆನ್ಷನ್​​

ನಾವೆಲ್ಲಾ ವಿದ್ಯಾರ್ಥಿ ಘಟಕದಿಂದ ಬಂದಿದ್ದೇವೆ. ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್​​, ಧ್ರುವನಾರಾಯಣರನ್ನು ನೆನಪಿಸಿಕೊಳ್ಳಬೇಕು. ಪಕ್ಷಕ್ಕೆ ಎಲ್ಲರೂ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ನಾವು NSUI ಘಟಕದಿಂದ ಬೆಳೆದು ಬಂದವರು. NSUIನಲ್ಲಿ ನನಗೆ ಟಿಕೆಟ್ ಕೊಟ್ಟಿರಲಿಲ್ಲ, ಯಾರು ಎಂದು ಹೇಳಲ್ಲ. ನಾವು ಹಂಗೋ ಹಿಂಗೋ ಬೆಳೆದುಕೊಂಡು ಬಂದಿದ್ದೇವೆ ಎಂದು ನೂತನ ಪದಾಧಿಕಾರಿಗಳಿಗೆ ಪಾಠ ಮಾಡಿದರು.

ಚರ್ಚೆಗೆ ಗ್ರಾಸವಾದ ಸಿಎಂ-ಡಿಸಿಎಂ ಮಾತು

ಮೊನ್ನೆ ಲೋಕಸಭಾ ಚುನಾವಣೆ ಪ್ರಚಾರದ ಸಭೆಯಲ್ಲಿ ಮಾತನಾಡುವ ವೇಳೆ ಸಿಎಂ ಸಿದ್ದರಾಮ್ಯಯ ಅವರು, ನಾನು ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್‌ ಕೊಡಬೇಕು ಎಂದು ಹೇಳಿದ್ದರು. ಇದು ಕಾಂಗ್ರೆಸ್​​ನಲ್ಲಿ ಮಾತ್ರವಲ್ಲ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೇನಿದು ಚುನಾವಣೆ ಸಂದರ್ಭದಲ್ಲಿ ಸಿಎಂ ಬಾಯಿಂದಲೇ ಇಂತಹ ಮಾತು ಏಕೆ ಬಂತು ಎಂದು ಅವರ ಬೆಂಬಲಿಗರು, ಮುಖಂಡರುಗಳಲ್ಲಿ ಭಾರೀ ಚರ್ಚೆಯಾಗಿದೆ. ಸಿಎಂ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಸಹ ನಾನು ಎಷ್ಟು ದಿನ ರಾಜಕಾರಣದಲ್ಲಿ ಇರುತ್ತೇನೆ ಗೊತ್ತಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದು,  ಅಚ್ಚರಿಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us