ದೆಹಲಿ ಜನವರಿ 14: ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ (Milind Deora) ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಭಾನುವಾರ ಕಾಂಗ್ರೆಸ್ (Congress) ಜೊತೆಗಿನ ತಮ್ಮ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿ ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತದ ಶಿವಸೇನಾಗೆ (Shivsena) ಸೇರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ನಿರ್ಧಾರ ಬಗ್ಗೆ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ದಿಯೋರಾ, ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯವೊಂದು ಮುಕ್ತಾಯವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದ್ದು,ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದೆ. ಎಲ್ಲಾ ನಾಯಕರು, ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರು ವರ್ಷಗಳಿಂದ ನೀಡಿದ ಅಚಲ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಬರೆದಿದ್ದಾರೆ.
ನಿರ್ಗಮಿತ ಹಿರಿಯ ಕಾಂಗ್ರೆಸ್ ನಾಯಕ ಇಂದು ಮಧ್ಯಾಹ್ನ ತಮ್ಮ 400 ಬೆಂಬಲಿಗರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಸೇರಿದ್ದಾರೆ. ಮಾಜಿ ಕೇಂದ್ರ ಸಚಿವರು ಕಾಂಗ್ರೆಸ್ ಹಿರಿಯ ಮುರಳಿ ದಿಯೋರಾ ಅವರ ಕುಟುಂಬವು ಕಾಂಗ್ರೆಸ್ ಪಕ್ಷದೊಂಗಿಗೆ ಐದು ದಶಕಗಳಿಂದ ದೀರ್ಘಕಾಲದ ಒಡನಾಟವನ್ನು ಹೊಂದಿದೆ.
ಶಿವಸೇನಾಗೆ ಸೇರ್ಪಡೆಯಾದ ನಂತರ ಮಾತನಾಡಿದ ಮಿಲಿಂದ್ ದಿಯೋರಾ, ಇದು ನನಗೆ ತುಂಬಾ ಭಾವನಾತ್ಮಕ ದಿನವಾಗಿದೆ. ನಾನು ಕಾಂಗ್ರೆಸ್ ತೊರೆಯುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಇಂದು ನಾನು ಶಿವಸೇನಾಗೆ ಸೇರಿದ್ದೇನೆ. ಕಾಂಗ್ರೆಸ್ ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಹಳೆಯ ಸಂಬಂಧವನ್ನು ನಾನು ಏಕೆ ಕಡಿದುಕೊಂಡಿದ್ದೇನೆ ಎಂದು ಬೆಳಿಗ್ಗೆಯಿಂದ ನನಗೆ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ. ನಾನು ಪಕ್ಷಕ್ಕೆ ನಿಷ್ಠನಾಗಿದ್ದೆ. ದುರದೃಷ್ಟವಶಾತ್, ಇಂದಿನ ಕಾಂಗ್ರೆಸ್ 1968 ಮತ್ತು 2004 ರ ಕಾಂಗ್ರೆಸ್ಗಿಂತ ಬಹಳ ಭಿನ್ನವಾಗಿದೆ. ಕಾಂಗ್ರೆಸ್ ಮತ್ತು ಯುಬಿಟಿ ರಚನಾತ್ಮಕ ಮತ್ತು ಸಕಾರಾತ್ಮಕ ಸಲಹೆಗಳು ಮತ್ತು ಅರ್ಹತೆ ಮತ್ತು ಸಾಮರ್ಥ್ಯಕ್ಕೆ ಪ್ರಾಮುಖ್ಯತೆ ನೀಡಿದ್ದರೆ, ಏಕನಾಥ್ ಶಿಂಧೆ ಮತ್ತು ನಾನು ಇಲ್ಲಿ ಇರುತ್ತಿರಲಿಲ್ಲ. ಶಿಂಧೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು, ನಾನು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ:Milind Deora: ಕಾಂಗ್ರೆಸ್ ತೊರೆದು ಶಿಂಧೆ ಸಮ್ಮುಖದಲ್ಲಿ ಶಿವಸೇನಾ ಸೇರಿದ ಮಿಲಿಂದ್ ದಿಯೋರಾ
30 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಆರ್ಥಿಕ ಸುಧಾರಣೆಗಳನ್ನು ಮಾಡಿದ್ದರು. ಆಗ ಕಾಂಗ್ರೆಸ್ ಕೈಗಾರಿಕೋದ್ಯಮಿಗಳನ್ನು ಮಾತ್ರ ಅವಮಾನಿಸಿತು. ಕೈಗಾರಿಕೋದ್ಯಮಿಗಳನ್ನು ದೇಶದ್ರೋಹಿ ಎಂದು ಕರೆಯಲಾಯಿತು. ಇಂದು ಇದೇ ಪಕ್ಷ ಮೋದಿ ವಿರುದ್ಧ ಮಾತನಾಡುತ್ತಿದೆ. ಮೋದಿ ವಿರೋಧ ಮಾತ್ರ ಈ ಪಕ್ಷದ ಅಜೆಂಡಾವಾಗಿ ಉಳಿದಿದೆ ಎಂದಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ