Milind Deora: ಕಾಂಗ್ರೆಸ್ ತೊರೆದು ಶಿಂಧೆ ಸಮ್ಮುಖದಲ್ಲಿ ಶಿವಸೇನಾ ಸೇರಿದ ಮಿಲಿಂದ್ ದಿಯೋರಾ

ಶಿವಸೇನಾಗೆ ಸೇರುವ ಮೊದಲು ಕಾಂಗ್ರೆಸ್ ನಾಯಕ ದಿಯೋರಾ, ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯವೊಂದು ಮುಕ್ತಾಯವಾಗಿದೆ. ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಬರೆದಿದ್ದಾರೆ.

Milind Deora: ಕಾಂಗ್ರೆಸ್ ತೊರೆದು ಶಿಂಧೆ ಸಮ್ಮುಖದಲ್ಲಿ ಶಿವಸೇನಾ ಸೇರಿದ ಮಿಲಿಂದ್ ದಿಯೋರಾ
ಶಿವಸೇನಾ ಸೇರಿದ ಮಿಲಿಂದ್ ದಿಯೋರಾ
ರಶ್ಮಿ ಕಲ್ಲಕಟ್ಟ

Updated on: Jan 14, 2024 | 4:37 PM

ಮುಂಬೈ ಜನವರಿ 14: ಹಿರಿಯ ಕಾಂಗ್ರೆಸ್ (Congress) ನಾಯಕ ಮಿಲಿಂದ್ ದಿಯೋರಾ (Milind Deora) ಭಾನುವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರ ಸಮ್ಮುಖದಲ್ಲಿ ಶಿವಸೇನಾ (Shivsena) ಸೇರಿದ್ದಾರೆ. ಶಿವಸೇನಾಗೆ ಸೇರುವ ಮೊದಲು ಕಾಂಗ್ರೆಸ್ ನಾಯಕ ದಿಯೋರಾ, ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯವೊಂದು ಮುಕ್ತಾಯವಾಗಿದೆ. ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ. ಎಲ್ಲಾ ನಾಯಕರು, ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರಿಗೆ ವರ್ಷಗಳಲ್ಲಿ ಅವರ ಅಚಲ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದರು.

ಭಾನುವಾರ ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧಿಕೃತ ನಿವಾಸಕ್ಕೆ ಬಂದ ದಿಯೋರಾ, ಮುಂಬೈನಲ್ಲಿ ಸಿಎಂ ಸಮ್ಮುಖದಲ್ಲಿ ಆಡಳಿತ ಪಕ್ಷಕ್ಕೆ ಸೇರ್ಪಡೆಯಾದರು.


ಈ  ಹಿಂದೆ ಮಿಲಿಂದ್ ದಿಯೋರಾ ಅವರು ಉದ್ಧವ್ ಸೇನೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.


ಶಿವಸೇನಾಗೆ ಸೇರ್ಪಡೆಯಾದ ನಂತರ ಮಾತನಾಡಿದ ಮಿಲಿಂದ್ ದಿಯೋರಾ, ಇದು ನನಗೆ ತುಂಬಾ ಭಾವನಾತ್ಮಕ ದಿನವಾಗಿದೆ. ನಾನು ಕಾಂಗ್ರೆಸ್ ತೊರೆಯುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಇಂದು ನಾನು ಶಿವಸೇನಾಗೆ ಸೇರಿದ್ದೇನೆ. ಕಾಂಗ್ರೆಸ್ ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಹಳೆಯ ಸಂಬಂಧವನ್ನು ನಾನು ಏಕೆ ಕಡಿದುಕೊಂಡಿದ್ದೇನೆ ಎಂದು ಬೆಳಿಗ್ಗೆಯಿಂದ ನನಗೆ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ … ನಾನು ಪಕ್ಷಕ್ಕೆ ನಿಷ್ಠನಾಗಿದ್ದೆ. ದುರದೃಷ್ಟವಶಾತ್, ಇಂದಿನ ಕಾಂಗ್ರೆಸ್ 1968 ಮತ್ತು 2004 ರ ಕಾಂಗ್ರೆಸ್‌ಗಿಂತ ಬಹಳ ಭಿನ್ನವಾಗಿದೆ. ಕಾಂಗ್ರೆಸ್ ಮತ್ತು ಯುಬಿಟಿ ರಚನಾತ್ಮಕ ಮತ್ತು ಸಕಾರಾತ್ಮಕ ಸಲಹೆಗಳು ಮತ್ತು ಅರ್ಹತೆ ಮತ್ತು ಸಾಮರ್ಥ್ಯಕ್ಕೆ ಪ್ರಾಮುಖ್ಯತೆ ನೀಡಿದ್ದರೆ, ಏಕನಾಥ್ ಶಿಂಧೆ ಮತ್ತು ನಾನು ಇಲ್ಲಿ ಇರುತ್ತಿರಲಿಲ್ಲ. ಶಿಂಧೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು, ನಾನು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು ಎಂದಿದ್ದಾರೆ.

30 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಆರ್ಥಿಕ ಸುಧಾರಣೆಗಳನ್ನು ಮಾಡಿದ್ದರು. ಆಗ ಕಾಂಗ್ರೆಸ್ ಕೈಗಾರಿಕೋದ್ಯಮಿಗಳನ್ನು ಮಾತ್ರ ಅವಮಾನಿಸಿತು. ಕೈಗಾರಿಕೋದ್ಯಮಿಗಳನ್ನು ದೇಶದ್ರೋಹಿ ಎಂದು ಕರೆಯಲಾಯಿತು. ಇಂದು ಇದೇ ಪಕ್ಷ ಮೋದಿ ವಿರುದ್ಧ ಮಾತನಾಡುತ್ತಿದೆ. ಮೋದಿ ವಿರೋಧ ಮಾತ್ರ ಈ ಪಕ್ಷದ ಅಜೆಂಡಾವಾಗಿ ಉಳಿದಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಕೈ’ ಬಿಟ್ಟವರು; 2019ರ ನಂತರ ಕಾಂಗ್ರೆಸ್ ಪಕ್ಷ ತೊರೆದ ನಾಯಕರಿವರು

ಮಿಲಿಂದ್ ದಿಯೋರಾ ಕಾಂಗ್ರೆಸ್ ವಿರುದ್ಧ  ಅಸಮಾಧಾನಗೊಂಡಿದ್ದೇಕೆ?
ಮಿಲಿಂದ್ ದಿಯೋರಾ ಅವರು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಎರಡು ಬಾರಿ ಸಂಸದರಾಗಿದ್ದಾರೆ. 2019ರಲ್ಲಿ ಉದ್ಧವ್  ಬಣದ ಸಂಸದ ಅರವಿಂದ್ ಸಾವಂತ್ ಗೆದ್ದಿದ್ದರು. ಇಂಡಿಯಾ ಬ್ಲಾಕ್‌ನ ಭಾಗವಾಗಿ ಉದ್ಧವ್  ನೇತೃತ್ವದ ಶಿವಸೇನಾ ಬಣ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ, ಸೇನಾ ಈಗಾಗಲೇ ಹೊಂದಿರುವ ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂದು ಹೇಳಿದೆ. ಈ ಮೂಲಕ ಮುಂಬೈ ದಕ್ಷಿಣ ಉದ್ಧವ್ ಬಣಕ್ಕೆ ಹೋಗಲಿದ್ದು, ಮಿಲಿಂದ್ ದಿಯೋರಾ ಅದೇ ಸ್ಥಾನದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ ಎಂದು ಉದ್ಧವ್ ಬಣದ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

 

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Sun, 14 January 24

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us