ಆಸಿಡ್ ದಾಳಿಯ ನರಕಯಾತನೆ, ಅಪರಾಧಿಯನ್ನು ಕ್ಷಮಿಸಿದ ಕರುಣಾಮಯಿ: ದೇವೇಗೌಡರ ಬದುಕಿನ ಶಕ್ತಿಯಾಗಿದ್ದ ಚೆನ್ನಮ್ಮ

Chennamma Deve Gowda Death: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದಿಂದ ಕುಟುಂಬ ದುಃಖತಪ್ತವಾಗಿದೆ. 2001ರಲ್ಲಿ ಚೆನ್ನಮ್ಮ ಹಾಗೂ ಸೊಸೆ ಭವಾನಿ ರೇವಣ್ಣ ಮೇಲೆ ನಡೆದ ಭೀಕರ ಆಸಿಡ್ ದಾಳಿಯ ರಾಜಕೀಯ ಪಿತೂರಿಯನ್ನು ದೇವೇಗೌಡರು 'ವೀಕೆಂಡ್ ವಿತ್ ರಮೇಶ್'ನಲ್ಲಿ ಬಿಚ್ಚಿಟ್ಟಿದ್ದರು. ರೇವಣ್ಣ ಗುರಿಯಾಗಿದ್ದರೂ, ಚೆನ್ನಮ್ಮ ಮತ್ತು ಭವಾನಿ ಆಸಿಡ್‌ಗೆ ತುತ್ತಾಗಿದ್ದರು. ತಮ್ಮನ ಮಗನೇ ಅಪರಾಧಿಯಾಗಿದ್ದರೂ, ದೇವೇಗೌಡರು ಆತನಿಗೆ ಕ್ಷಮಾದಾನ ನೀಡಿ, ಕೌಟುಂಬಿಕ ಪ್ರೀತಿಗೆ ದೊಡ್ಡ ಉದಾಹರಣೆಯಾಗಿದ್ದಾರೆ. ಈ ಘಟನೆ ಅವರ ಬದುಕಿನ ಕರಾಳ ಸತ್ಯ.

ಆಸಿಡ್ ದಾಳಿಯ ನರಕಯಾತನೆ, ಅಪರಾಧಿಯನ್ನು ಕ್ಷಮಿಸಿದ ಕರುಣಾಮಯಿ: ದೇವೇಗೌಡರ ಬದುಕಿನ ಶಕ್ತಿಯಾಗಿದ್ದ ಚೆನ್ನಮ್ಮ
ದೇವೇಗೌಡ ಹಾಗೂ ಚೆನ್ನಮ್ಮ

Updated on: Jul 18, 2026 | 6:03 PM

ಬೆಂಗಳೂರು, ಜು.18: ದೇಶದ ರಾಜಕಾರಣದಲ್ಲಿ ಧೀಮಂತ ನಾಯಕರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಇಂದು ನಿಧನ ಹೊಂದಿದ್ದಾರೆ. ಗೌಡರ ಕುಟುಂಬಕ್ಕೆ ಮಹಾಲಕ್ಷ್ಮೀಯಾಗಿದ್ದ ಚೆನ್ನಮ್ಮ ಇಂದು ಆ ಸುಂದರ ಕುಟುಂಬವನ್ನು ಬಿಟ್ಟು ಹೋಗಿದ್ದಾರೆ. ದೇವೇಗೌಡ ಅವರಿಗೆ ಚೆನ್ನಮ್ಮ ಪತ್ನಿ ಮಾತ್ರ ಆಗದೆ, ತಾಯಿಯಾಗಿ ಕಷ್ಟ, ಸುಖದಲ್ಲಿ ಜೊತೆಯಾಗಿದ್ದವರು. ಆದರೆ ಇಂದು ಅವರನ್ನು ಒಬ್ಬಂಟಿ ಮಾಡಿ ಹೋಗಿದ್ದಾರೆ. ಇದರ ನಡುವೆ ದೇವೇಗೌಡ ಅವರ ಕೌಟುಂಬಿಕ ಜೀವನದ ಅತ್ಯಂತ ಕರಾಳ ಸತ್ಯವೊಂದು ಇದೆ. 2001ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಸೊಸೆ ಭವಾನಿ ರೇವಣ್ಣ ಮೇಲಿನ ಆಸಿಡ್ ದಾಳಿಯ ಹಿಂದೆ ಇದ್ದ ರಾಜಕೀಯ ಪಿತೂರಿಯನ್ನು ಗೌಡರು ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

‘ವೀಕೆಂಡ್ ವಿತ್ ರಮೇಶ್’ ಸಾಧಕರ ಸೀಟಿನಲ್ಲಿ ಕುಳಿತು ಭಾವನಾತ್ಮಕವಾಗಿ ಮಾತನಾಡಿದ್ದ ದೇವೇಗೌಡರು, ಅಂದು ನಡೆದ ಆ ಘೋರ ಘಟನೆಯ ಕಟು ಸತ್ಯವನ್ನು ಬಿಚ್ಚಿಟ್ಟಿದ್ದರು. ಫೆಬ್ರವರಿ 21, 2001 ರಂದು ಹಾಸನದ ಹೊಳೆನರಸೀಪುರ ತಾಲ್ಲೂಕಿನ ಇರುವ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ಈ ದಾಳಿ ನಡೆದಿತ್ತು. ಆಗಿನ ಪತ್ರಿಕೆಗಳಲ್ಲಿ ದೇವೇಗೌಡರ ತಮ್ಮನ ಮಗ ಲೋಕೇಶ್ ಕೌಟುಂಬಿಕ ವೈಷಮ್ಯದಿಂದ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿತ್ತು. ಆದರೆ, ಇದರ ಹಿಂದೆ ದೊಡ್ಡ ರಾಜಕೀಯ ಮುಖಂಡರ ಕೈವಾಡವಿತ್ತು ಎಂದು ಹೇಳಿಕೊಂಡಿದ್ದರು.

“ಅಂದು ಆಸಿಡ್ ದಾಳಿಕೋರರ ಅಸಲಿ ಟಾರ್ಗೆಟ್ ನನ್ನ ಮಗ ಹೆಚ್.ಡಿ.ರೇವಣ್ಣ ಆಗಿದ್ದ. ಮಹಾದೇಶ್ವರ ಬೆಟ್ಟಕ್ಕೆ ನಾವೆಲ್ಲ ಹೊರಟಾಗ ರೇವಣ್ಣ ಬಂದಿರಲಿಲ್ಲ. ಇದನ್ನು ಅರಿಯದ ದಾಳಿಕೋರರು ರೇವಣ್ಣ ಎಂದು ಭಾವಿಸಿ ನನ್ನ ಪತ್ನಿ ಚನ್ನಮ್ಮ ಮತ್ತು ಸೊಸೆ ಭವಾನಿ ರೇವಣ್ಣ ಅವರನ್ನೇ ಗುರಿಯಾಗಿಸಿ ಆಸಿಡ್ ಎರೆಚಿದ್ದರು. ಕೃತ್ಯ ಎಸಗಿದ್ದು ನನ್ನ ತಮ್ಮನ ಮಗನೇ ಆದರೂ, ಆತನನ್ನು ಎತ್ತಿ ಕಟ್ಟಿದವರ ಹಿಂದೆ ರಾಜಕೀಯ ಮುಖಂಡರ ಪ್ರೇರಣೆಯಿತ್ತು” ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಈ ಪ್ರಕರಣದಲ್ಲಿ ಲೋಕೇಶ್‌ಗೆ ನ್ಯಾಯಾಲಯ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ತನ್ನ ಮೇಲೆ ದಾಳಿ ಮಾಡಿದವನನ್ನೇ ಗೌಡರು ಜೈಲಿನಿಂದ ಬಿಡಿಸಿದ್ದರು ಎಂಬ ಸಂಗತಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. “ನನ್ನ ತಮ್ಮನಿಗೆ ಕ್ಯಾನ್ಸರ್ ಇತ್ತು. ಆತ ಇನ್ನು ಕೆಲವೇ ದಿನ ಬದುಕುತ್ತಾನೆ ಎಂದು ಗೊತ್ತಾದಾಗ ನನ್ನ ಮನಸ್ಸು ಕರಗಿತು. ಲೋಕೇಶ್ ಇನ್ನು 4 ವರ್ಷ ಜೈಲಿನಲ್ಲಿ ಇರಬೇಕಿತ್ತು. ಆದರೆ ತಮ್ಮನ ಕೊನೆಗಾಲದ ಸ್ಥಿತಿ ನೋಡಿ ಹೈಕೋರ್ಟ್ ಜಡ್ಜ್‌ಗೆ ಫೋನ್ ಮಾಡಿ, ನನ್ನ ತಮ್ಮ ಸಾಯುತ್ತಿದ್ದಾನೆ ಆತನ ಮಗನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದೆ” ಎಂದರು. ಮಾಜಿ ಪ್ರಧಾನಿ ಪತ್ನಿಯ ಮೇಲೆಯೇ ದಾಳಿ ನಡೆದಾಗ ಸ್ವತಃ ಗೌಡರೇ ಅಪರಾಧಿಯ ಬಿಡುಗಡೆಗೆ ಕೋರಿದ್ದನ್ನು ಕಂಡು ಅಂದು ನ್ಯಾಯಮೂರ್ತಿಗಳೇ ಆಶ್ಚರ್ಯಚಕಿತರಾಗಿದ್ದರು.

ತಮ್ಮ ಬದುಕಿನ ಏಳುಬೀಳುಗಳಲ್ಲಿ ಹೆಗಲಾಗಿ ನಿಂತ ಪತ್ನಿ ಚೆನ್ನಮ್ಮ ಅವರ ತ್ಯಾಗವನ್ನು ಗೌಡರು ಈ ಕಾರ್ಯಕ್ರಮದ ಮೂಲಕ  ಸ್ಮರಿಸಿದ್ದರು. ಚೆನ್ನಮ್ಮ ಅವರು ಈ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವ ಪ್ರಕಾರ, “ಆಸಿಡ್ ದಾಳಿಯಾದಾಗ ನನಗೆ 2 ತಿಂಗಳು ಪ್ರಜ್ಞೆಯೇ ಇರಲಿಲ್ಲ. ಆ ದಿನಗಳಲ್ಲಿ ದೇವೇಗೌಡ ಕಣ್ಣೀರು ಹಾಕಿದ್ದರು . ಆದರೆ ನನ್ನ ಮೇಲೆ ದಾಳಿ ಮಾಡಿದವನನ್ನು ಇವರು ಜೈಲಿನಿಂದ ಬಿಡಿಸಿದಾಗ ನಾನು ಯಾವುದೇ ಬೇಸರ ಮಾಡಿಕೊಳ್ಳಲಿಲ್ಲ” ಎಂದು ಪತಿಯ ಗುಣವನ್ನು ಕೊಂಡಾಡಿದ್ದರು. ದಶಕಗಳ ಕಾಲ ರಹಸ್ಯವಾಗಿದ್ದ ಈ ಘಟನೆ ವೀಕೆಂಡ್ ವೇದಿಕೆಯಲ್ಲಿ ಸಾರ್ವಜನಿಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us