ನೀವು ಕಮಿಷನ್ ತೆಗೆದುಕೊಂಡಿದ್ದಕ್ಕೆ ತಾನೇ ಮನೆ ಸೇರಿರುವುದು: ಸಿಟಿ ರವಿ ಆರೋಪಕ್ಕೆ ಹೆಚ್​ವಿಶ್ವನಾಥ್​ ತಿರುಗೇಟು

ನೀವು ಕಮಿಷನ್ ತೆಗೆದುಕೊಂಡಿದ್ದಕ್ಕೆ ತಾನೇ ಮನೆಗೆ ಸೇರಿರುವುದು. ಯಾವುದೇ ಕ್ಷೇತ್ರಕ್ಕೆ ಹೋದರೂ ಸತ್ಯವಂತರು ಸಿಗುವುದಿಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​​.ವಿಶ್ವನಾಥ್​ ಹೇಳಿದ್ದಾರೆ. ಮೂಲಕ ಕಾಂಗ್ರೆಸ್​ನ ಬಹುತೇಕ ಶಾಸಕರು ಒಂದೇ ದಿನ ವಸೂಲಿಗೆ ಹೊರಟ್ಟಿದ್ದಾರೆ ಎಂಬ ಮಾಜಿ ಶಾಸಕ ಸಿಟಿ ರವಿ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.

ಬೆಳಗಾವಿ, ಆಗಸ್ಟ್​ 13: ಕಾಂಗ್ರೆಸ್​ನ ಬಹುತೇಕ ಶಾಸಕರು ಒಂದೇ ದಿನ ವಸೂಲಿಗೆ ಹೊರಟ್ಟಿದ್ದಾರೆ ಎಂಬ ಮಾಜಿ ಶಾಸಕ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್​ ಸದಸ್ಯ ಹೆಚ್​​.ವಿಶ್ವನಾಥ್​ (H Vishwanath) ನೀವು ಕಮಿಷನ್ ತೆಗೆದುಕೊಂಡಿದ್ದಕ್ಕೆ ತಾನೇ ಮನೆಗೆ ಸೇರಿರುವುದು. ಯಾವುದೇ ಕ್ಷೇತ್ರಕ್ಕೆ ಹೋದರೂ ಸತ್ಯವಂತರು ಸಿಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಚುನಾವಣೆಗೂ ಮುನ್ನ ಒಂದೂವರೆ ಲಕ್ಷ ಕೋಟಿ ರೂ. ಟೆಂಡರ್ ಕರೆದು ಕಿಕ್​ ಬ್ಯಾಕ್ ತೆಗೆದುಕೊಂಡರು ಎಂದು BJP ವಿರುದ್ಧ ವಾಗ್ದಾಳಿ ಮಾಡಿದರು.

ಪೆನ್​ಡ್ರೈವ್​ ಬಗ್ಗೆ ಮಾಜಿ ಸಿಎಂ ಹೆಚ್.​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೆಚ್​.ಡಿ.ಕುಮಾರಸ್ವಾಮಿ ಆಸ್ತಿ ಎಷ್ಟಿದೆ, ಹೇಗೆ ಬಂತು ಅಂತಾ ಕೇಳಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ಉತ್ತರ ಕೊಟ್ಟಿದೆ: ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಯಾಕೆ ಸ್ಪರ್ಧಿಸಬಾರದು? ನಾನು ಕಾಂಗ್ರೆಸ್​ನಲ್ಲೇ ಎಂಪಿ ಆಗಿದ್ದವನು. ಕಾಂಗ್ರೆಸ್ ಕಾರ್ಯಕರ್ತನಾಗಿ ಮೇಲಕ್ಕೆ ಬಂದಿದ್ದೇನೆ. ಇಂದಿರಾ ಗಾಂಧಿ ಹೆಸರಲ್ಲಿ ಕಾಂಗ್ರೆಸ್​​ನಲ್ಲಿ ಯಾರು ನಿಂತರು ಗೆಲ್ಲುತ್ತಿದ್ದರು. ಈಗ ದೇಶದಲ್ಲಿ ಪಕ್ಷ ರಾಜಕಾರಣ ಹೋಗಿ ವ್ಯಕ್ತಿ ರಾಜಕಾರಣ ಬಂದಿದೆ ಎಂದರು.

ನನ್ನ ಅಜೆಂಡಾ ಬದಲಾಗಿಲ್ಲ

ಲೋಕಸಭಾ ಚುನಾವಣೆ ಸ್ಪರ್ಧೆ ಕುರಿತು ನಾನು ಇನ್ನೂ ಮಾತನಾಡಿಲ್ಲ. ಒಂದು ಅವಕಾಶ ಕೊಡಿ ಅಂತಾ ನಾನು ಕೇಳುತ್ತೇನೆ. ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರಿಕೊಂಡು ರಾಜ್ಯಾಧ್ಯಕ್ಷನಾಗಿದ್ದೆ. ನಾನು ಹಿಡಿದುಕೊಳ್ಳುವ ಪಕ್ಷದ ಧ್ವಜ ಬೇರೆ ಬೇರೆಯಾಗಬಹುದು, ಆದರೆ ನನ್ನ ಅಜೆಂಡಾ ಬದಲಾಗಿಲ್ಲ ಎಂದು ಹೇಳಿದ್ದಾರೆ

ರಮೇಶ್ ಜಾರಕಿಹೊಳಿಗೆ ಕಿವಿಮಾತು ಹೇಳಿದ ಹೆಚ್​ ವಿಶ್ವನಾಥ್

ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ವರ್ಸಸ್ ಅದರ್ಸ್ ಎಂಬ ವಿಚಾರವಾಗಿ ಮಾತನಾಡಿದ ಅವರು, ಪಾಪ ರಮೇಶ್ ‌ಜಾರಕಿಹೊಳಿ ನನ್ನ ಸ್ನೇಹಿತ, ಏನೋ ಆಗಿ ಮಂತ್ರಿ ಆದರು. ಹಲವು ಕಾರಣಕ್ಕೆ ಆ ಮಂತ್ರಿ ಸ್ಥಾನವೂ ಹೋಯಿತು. ರಾಜ್ಯದಲ್ಲಿ ಬಿಜೆಪಿ ಎಂದಾದರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ, ಇದು ಉಚಿತ, ಖಚಿತ, ನಿಶ್ಚಿತ; ಕಾಂಗ್ರೆಸ್ ಸರ್ಕಾರದ ಬಗ್ಗೆ ಬಿಜೆಪಿ ಲೇವಡಿ

ಒಂದು ಸಲ ಕುಮಾರಸ್ವಾಮಿ ಹೆಗಲ ಮೇಲೆ, ಇನ್ನೊಂದು ಸಲ ನಮ್ಮ ಹೆಗಲ ಕುಳಿತು ಅಧಿಕಾರಕ್ಕೆ ಬಂದರು. ಬಿಜೆಪಿಗೆ ಕರ್ನಾಟಕದಲ್ಲಿ ಅವಕಾಶ ಇಲ್ಲವೇ ಇಲ್ಲ, ಭವಿಷ್ಯವೂ ಇಲ್ಲ‌. ಅವರ ನಡುವಳಿಕೆ, ನಡೆಸಿದಂತ ಆಡಳಿತಕ್ಕೆ ಜನರು ರೋಸಿ ಹೋಗಿದ್ದಾರೆ. ರಮೇಶ್ ಜಾರಕಿಹೊಳಿಗೆ ಚನ್ನಾಗಿರಪ್ಪ, ಬುದ್ಧಿವಂತಿಕೆ ಬಳಸು ಎಂದು ಕಿವಿಮಾತು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:53 pm, Sun, 13 August 23

Loading...
Unable to load recommendations.
Follow Us