ಲೋಕಸಭೆ ಚುನಾವಣೆಗೆ ಪೂರಕವಾಗಿ ಪಕ್ಷ ಸಂಘಟಿಸಿ: ಮುಖಂಡರಿಗೆ ಕರೆ ನೀಡಿದ ದಳಪತಿ ಹೆಚ್​ಡಿ ದೇವೇಗೌಡ

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಪಕ್ಷದ ಸಂಘಟನೆಯ ಕಡೆ ಗಮನ ನೀಡಿರುವ ಹೆಚ್​ಡಿ ದೇವೇಗೌಡ ಮತ್ತು ಹೆಚ್​ಡಿ ಕುಮಾರಸ್ವಾಮಿ ಅವರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳ ಮುಖಂಡರ ಜತೆ ಆತ್ಮಾವಲೋಕನ ಸಭೆಗಳನ್ನು ನಡೆಸಿದರು.

ಲೋಕಸಭೆ ಚುನಾವಣೆಗೆ ಪೂರಕವಾಗಿ ಪಕ್ಷ ಸಂಘಟಿಸಿ: ಮುಖಂಡರಿಗೆ ಕರೆ ನೀಡಿದ ದಳಪತಿ ಹೆಚ್​ಡಿ ದೇವೇಗೌಡ
ಹೆಚ್​ಡಿ ದೇವೇಗೌಡ ಮತ್ತು ಹೆಚ್​ಡಿ ಕುಮಾರಸ್ವಾಮಿ
Follow us
|

Updated on: Jun 06, 2023 | 9:00 PM

ಬೆಂಗಳೂರು: ಈ ಸೋಲು ಶಾಶ್ವತ ಅಲ್ಲ, ತಾತ್ಕಾಲಿಕ. ದೃತಿಗೆಡದೆ ಪಕ್ಷವನ್ನು ಮರಳಿ ಕಟ್ಟೋಣ. ನಿಮ್ಮ ಜತೆ ನಾವಿದ್ದೇವೆ, ನಿಮ್ಮ ಜತೆ ಹಗಲಿರುಳು ಶ್ರಮಿಸುತ್ತೇವೆ ಎಂದು ಜೆಡಿಎಸ್ (JDS) ಪಕ್ಷದ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Deve Gowda) ಅವರು ಮುಖಂಡರಿಗೆ ಧೈರ್ಯ ತುಂಬಿದರು. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಪಕ್ಷದ ಸಂಘಟನೆಯ ಕಡೆ ಗಮನ ನೀಡಿರುವ ದಳಪತಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳ ಮುಖಂಡರ ಜತೆ ಆತ್ಮಾವಲೋಕನ ಸಭೆಗಳನ್ನು ನಡೆಸಿದರು.

ಬೆಂಗಳೂರಿನಲ್ಲಿರುವ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೆಳಗ್ಗೆಯಿಂದಲೇ ಒಂದೊಂದೇ ಜಿಲ್ಲೆಯ ಸರಣಿ ಸಭೆಗಳನ್ನು ನಡೆಸಿದ ದೇವೇಗೌಡ ಹಾಗೂ ಹೆಚ್​ಡಿ ಕುಮಾರಸ್ವಾಮಿ, ಎಲ್ಲಾ ಜಿಲ್ಲಾ ಮುಖಂಡರಿಗೆ ಕೆಲ ಮಹತ್ವದ ಅಂಶಗಳ ಬಗ್ಗೆ ಕಿವಿಮಾತು ಹೇಳಿದರು.

ಚುನಾವಣೆಗೆ ಪೂರಕವಾಗಿ ಪಕ್ಷ ಸಂಘಟಿಸಿ: ದೇವೇಗೌಡ

ಮುಂದೆ ಲೋಕಸಭೆ ಚುನಾವಣೆ ಬರುತ್ತಿದೆ. ಇದರೊಂದಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯು ಬರುತ್ತದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆಯೂ ನಡೆಯಲಿದೆ. ನಮ್ಮ ಗುರಿ ಈ ಚುನಾವಣೆಗಳೇ ಆಗಿರಬೇಕು. ಇದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಮಾಡಬೇಕು ಹಾಗೂ ಜನರ ಜೊತೆ ಇದ್ದು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ತಾಲೂಕು, ಜಿಲ್ಲಾ ಸಮಿತಿಗಳು ಬದ್ಧತೆಯಿಂದ ದುಡಿಮೆ ಮಾಡಬೇಕು ಎಂದು ದೇವೇಗೌಡರು ಸಲಹೆ ನೀಡಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ? ಹೀಗಿದೆ ಕ್ಷೇತ್ರ ಹಂಚಿಕೆ ಲೆಕ್ಕಾಚಾರ

ನಮ್ಮ ಪಕ್ಷಕ್ಕೆ ಎಲ್ಲಿ ನೆಲೆ ಇದೆ ಎನ್ನುವುದು ನಮಗೆ ಗೊತ್ತಿದೆ. ಆ ನೆಲೆಯನ್ನು ಭದ್ರ ಮಾಡಿಕೊಂಡು ಅದನ್ನು ವಿಸ್ತರಿಸಬೇಕು. ಅದಕ್ಕೆ ನಾವು ತುರ್ತಾಗಿ ಮಾಡಬೇಕಿರುವ ಕೆಲಸ ಎಂದರೆ ಹಿರಿಯರ ಜತೆಗೆ ಯುವಕರಿಗೂ ಜವಾಬ್ದಾರಿ ನೀಡಬೇಕು. ಪ್ರಮುಖ ಜವಾಬ್ದಾರಿಗಳನ್ನು ಯುವಕರಿಗೆ ನೀಡಬೇಕು. ಅಷ್ಟೇ ಅಲ್ಲ, ಯುವಕರ ಬಗ್ಗೆ ಹಿರಿಯರು ಪ್ರೀತಿ, ಔದಾರ್ಯತೆಯಿಂದ ವರ್ತಿಸಬೇಕು. ಜಿಲ್ಲಾ ಘಟಕಗಳಲ್ಲಿ ಮಾರ್ಪಾಡು ಹಾಗೂ ಸುಧಾರಣೆಗಳನ್ನು ನಾವು ತರಬೇಕಿದೆ ಎಂದರು.

ವಿಧಾನಸಭೆ ಸೋಲು ದೊಡ್ಡ ಗೆಲುವಿಗೆ ನಾಂದಿ: ಕುಮಾರಸ್ವಾಮಿ

ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನೆಡೆ ಆಗಿದೆ ನಿಜ, ಆದರೆ, ಈ ಸೋಲು ಮುಂದೆ ದೊಡ್ಡ ಗೆಲುವಿಗೆ ನಾಂದಿ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ಹೇಳಿ ಜನರಿಗೆ ಯಾಮಾರಿಸುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಜನರ ಜೊತೆ ಪ್ರಾಮಾಣಿಕವಾಗಿ ನಿಂತರೆ ಅವರೇ ನಮ್ಮ ಪಕ್ಷಕ್ಕೆ ಶಕ್ತಿ ತುಂಬುತ್ತಾರೆ ಎಂದರು.

ಇಂತಹ ಎಷ್ಟೋ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ. 1989ರಲ್ಲಿ ದೇವೇಗೌಡರು ಎರಡು ಕಡೆ ಸೋತರು. ಅದಾದ ಐದು ವರ್ಷದಲ್ಲಿ ಪಕ್ಷ ಪೂರ್ಣ ಪಡೆದು ಅವರು ಮುಖ್ಯಮಂತ್ರಿ ಆದರು. ಆಮೇಲೆ ಲೋಕಸಭೆ ಚುನಾವಣೆಯಲ್ಲಿ 16 ಕ್ಷೇತ್ರ ಗೆದ್ದು ದೇವೇಗೌಡರು ದೇಶದ ಪ್ರಧಾನಿಯೂ ಆದರು. 1999ರಲ್ಲಿ ನಮ್ಮ ಪಕ್ಷಕ್ಕೆ ಹತ್ತೇ ಕ್ಷೇತ್ರಗಳು ಬಂದವು. ನಂತರದ ಚುನಾವಣೆಯಲ್ಲಿ 58 ಶಾಸಕರನ್ನು ಗೆದ್ದಿತ್ತು. 2013ರಲ್ಲಿ 40 ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿತ್ತು. ಇದೆಲ್ಲವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ