ಕಲಬುರಗಿ ಮೇಯರ್ ಸ್ಥಾನಕ್ಕೆ ಜೆಡಿಎಸ್ ತಂತ್ರ; ಮುಳುಗುವ ಹಡಗಿನ ಜೊತೆ ಏಕೆ ಬರುತ್ತೀರಿ: ಹೆಚ್​ಡಿ ರೇವಣ್ಣ ವ್ಯಂಗ್ಯ

Kalaburagi Municipal Elections 2021: ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೇಯರ್ ಸ್ಥಾನಕ್ಕಾಗಿ ಜೆಡಿಎಸ್​ ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಜತೆ ಬಿಜೆಪಿ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಕಲಬುರಗಿ ಮೇಯರ್ ಸ್ಥಾನಕ್ಕೆ ಜೆಡಿಎಸ್ ತಂತ್ರ; ಮುಳುಗುವ ಹಡಗಿನ ಜೊತೆ ಏಕೆ ಬರುತ್ತೀರಿ: ಹೆಚ್​ಡಿ ರೇವಣ್ಣ ವ್ಯಂಗ್ಯ
ಹೆಚ್.ಡಿ. ರೇವಣ್ಣ
Edited By:

Updated on: Sep 08, 2021 | 6:57 PM

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಫಲಿತಾಂಶ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದು ಜೆಡಿಎಸ್ ಪಕ್ಷ ಗೇಮ್ ಪ್ಲ್ಯಾನ್ ಮಾಡುತ್ತಿರುವುದು ತಿಳಿದುಬಂದಿದೆ. ನಾವು ಬೇರೆ ಯಾವ ಪಕ್ಷದವರಿಗೂ ಬೆಂಬಲ ನೀಡುವುದಿಲ್ಲ. ಆದರೆ ನಮಗೆ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲಿಸಲಿ ಎಂಬಂತೆ ಜೆಡಿಎಸ್ ನಿಲುವು ತಾಳಿರುವ ಬಗ್ಗೆ ಜೆಡಿಎಸ್ ಪಕ್ಷದ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ. ಕಲಬುರಗಿ ಮೇಯರ್ ಪಟ್ಟ ಪಡೆಯಲು ಜೆಡಿಎಸ್ ತಂತ್ರ ಹೆಣೆದಿದೆ. ಜೆಡಿಎಸ್ ನೇತೃತ್ವದಲ್ಲಿ ಪಾಲಿಕೆ ಚುಕ್ಕಾಣಿ ಹಿಡಿಯಲು ಬೆಂಬಲಿಸಲಿ. ನಾಲ್ಕು ಸ್ಥಾನಗಳನ್ನು ಗೆದ್ದರೂ ಮೇಯರ್ ಪಟ್ಟ ಪಡೆಯುವ ಜೆಡಿಎಸ್ ತಂತ್ರ ತಿಳಿದುಬಂದಿದೆ.

ಕಲಬುರಗಿ ಪಾಲಿಕೆ ಮೇಯರ್ ಸ್ಥಾನ ಪಡೆಯಲು ರಾಜಕೀಯ ಪಕ್ಷಗಳು ಸರ್ಕಸ್ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ, ನಾಳೆ ಕಲಬುರಗಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೆರಳಲಿದ್ದಾರೆ. ಶಾಸಕರು, ಸ್ಥಳೀಯ ಮುಖಂಡರ ಜೊತೆ ಕಟೀಲ್ ಚರ್ಚೆ ನಡೆಸಲಿದ್ದಾರೆ. ಜೆಡಿಎಸ್ ಜತೆ ಮೈತ್ರಿ ಕುರಿತಂತೆ ಕಟೀಲ್ ಚರ್ಚಿಸಲಿದ್ದಾರೆ. ಕಲಬುರಗಿ ಖಾಸಗಿ ಹೋಟೆಲ್​​ನಲ್ಲಿ ಬಿಜೆಪಿ ಮುಖಂಡರ ಸಭೆ ನಡೆಯಲಿದೆ. ನೂತನವಾಗಿ ಆಯ್ಕೆಯಾಗಿರುವ ಪಾಲಿಕೆ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೇಯರ್ ಸ್ಥಾನಕ್ಕಾಗಿ ಜೆಡಿಎಸ್​ ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಜತೆ ಬಿಜೆಪಿ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ನಾಳೆ ಅಂತಿಮ ನಿರ್ಧಾರ ಸಾಧ್ಯತೆ ಕಂಡುಬಂದಿದೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ವಿಚಾರವಾಗಿ ಜೆಡಿಎಸ್‌ಗೆ ಮೇಯರ್ ಸ್ಥಾನ ಬೇಕೆಂಬ ಅಭಿಪ್ರಾಯ ಕೇಳಿಬಂದಿದೆ. ಈಗ ನಮಗೆ ಯಾರು ಬೆಂಬಲಿಸುತ್ತಾರೆಂಬುದು ಮುಖ್ಯ ಎಂದು ಹೆಚ್.ಡಿ. ಕುಮಾರಸ್ವಾಮಿ ಭೇಟಿ ಬಳಿಕ ಕಲಬುರಗಿ ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ಹೇಳಿಕೆ ನೀಡಿದ್ದಾರೆ.

ಏಕೆ ಮುಳುಗುವ ಹಡಗಿನ ಜತೆ ಬರುತ್ತೀರಿ: ಹೆಚ್.ಡಿ. ರೇವಣ್ಣ ವ್ಯಂಗ್ಯ
ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗು ಎಂದು ಹೇಳ್ತೀರಿ. ಅಂಥ ಪಕ್ಷದ ಜತೆ ಮೈತ್ರಿಗೆ ಬಂದು ಕುತ್ತು ತಂದುಕೊಳ್ಳಬೇಡಿ. ನಮ್ಮ ಜತೆ ಸೇರಿ ನಿಮ್ಮ ಸ್ಥಾನಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಜೆಡಿಎಸ್ ಮುಳುಗುವ ಹಡಗು ಅಂತಾರೆ. ಸಿಎಂ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ತೀವಿ ಅಂತಾರೆ. ಏಕೆ ಮುಳುಗುವ ಹಡಗಿನ ಜತೆ ಬರುತ್ತೀರಿ ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.

ಮುಳುಗುವ ಹಡಗನ್ನು ತೇಲಿಸುವುದು ಹೇಗೆಂದು ಗೊತ್ತಿದೆ. ಹಡಗು ಮುಳುಗದಂತೆ ನೋಡಿಕೊಳ್ಳಲು ಮಷೀನ್‌ಗಳು ಇವೆ. ಮುಂದಿನ ಚುನಾವಣೆಗೆ ನೀವು ಮುಳುಗದಂತೆ ನೋಡಿಕೊಳ್ಳಿ. ನಾವು ಮುಳುಗುತೀವೋ, ತೇಲುತ್ತೇವೋ ನೀವು ಜೋಪಾನ. ನಿಮ್ಮ ತಂದೆ- ತಾಯಿ ಮಾಡಿದ ಪುಣ್ಯದಿಂದ ಅಧಿಕಾರ ಸಿಕ್ಕಿದೆ. ಅದನ್ನು ಕಳೆದುಕೊಳ್ಳಬೇಡಿ ಎಂದು ರೇವಣ್ಣ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಭಯ ಇದೆ. ಗ್ರಾಮೀಣ ಭಾಗದ ಜನರು ಸೋಲಿಸುತ್ತಾರೆಂಬ ಭಯವಿದೆ. ಹೀಗಾಗಿ ಚುನಾವಣೆ ಮುಂದೂಡಲು ಯತ್ನಿಸಲಾಗುತ್ತಿದೆ ಎಂದು ಹೆಚ್.ಡಿ. ರೇವಣ್ಣ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುತ್ತಿದ್ದರು; 2023ರಲ್ಲಿ ಯಾರು ಮುಳುಗುತ್ತಾರೆ ನೋಡೋಣ: ಹೆಚ್​ಡಿ ರೇವಣ್ಣ

ಇದನ್ನೂ ಓದಿ: ಕಲಬುರಗಿ ಪಾಲಿಕೆ ಚುನಾವಣೆ: ಸ್ಪಷ್ಟ ಬಹುಮತ ನೀಡದ ಮತದಾರ; ಟಿಕೆಟ್ ಹಂಚಿಕೆ, ಕಾರ್ಯಕರ್ತರ ಅಸಮಾಧಾನ ಕಾರಣ

Published On - 6:54 pm, Wed, 8 September 21

Web contact

TV9 Kannada

Read More
Follow Us