AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ದಲಿತ, ನಾನೇಕೆ ಸಿಎಂ ಆಗಬಾರದು?’: ಸಚಿವ ತಿಮ್ಮಾಪುರ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಇದೀಗ ರಾಜ್ಯದಲ್ಲಿ ದಲಿತ ಸಿಎಂ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಆರ್.ಬಿ. ತಿಮ್ಮಾಪುರ ಅವರು ದಲಿತ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ. ಇಷ್ಟೇ ಅಲ್ಲದೇ, ನಾನು ದಲಿತ, ನಾನೇಕ ಮುಖ್ಯಮಂತ್ರಿಯಾಗಬಾರದು. ದಲಿತರು ಯಾಕೆ ಸಿಎಂ ಆಗಬಾರದು? ಎಂದು ಪ್ರಶ್ನಿಸಿದ್ದಾರೆ.

'ನಾನು ದಲಿತ, ನಾನೇಕೆ ಸಿಎಂ ಆಗಬಾರದು?': ಸಚಿವ ತಿಮ್ಮಾಪುರ
ಆರ್​ ಬಿ ತಿಮ್ಮಾಪುರ
ಶಿವಕುಮಾರ್ ಪತ್ತಾರ್
| Updated By: ವಿವೇಕ ಬಿರಾದಾರ|

Updated on:Jan 14, 2025 | 12:50 PM

Share

ಹುಬ್ಬಳ್ಳಿ, ಜನವರಿ 14, ಆಡಳಿತಾರೂಢ ಕಾಂಗ್ರೆಸ್ (Congress)​ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ಜೋರಾಗಿದ್ದು, ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಆಗುವ ಡ್ಯಾಮೇಜ್​ ಅನ್ನು ತಡೆಯಲು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ (Randeep Singh Surjewala) ​ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಸುರ್ಜೆವಾಲಾ ರಾಜ್ಯ ನಾಯಕರಿಗೆ ಖಡಕ್​ ಸೂಚನೆ ನೀಡಿದ ಬಳಿಕವೂ ಸಿಎಂ ಆಗುವ ಕೂಗು ನಿಂತಿಲ್ಲ. ದಲಿತ ಸಿಎಂ ಕೂಗು ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು? ಎಂದು ಸಚಿವ ಆರ್​ಬಿ ತಿಮ್ಮಾಪುರ (RB Timmapur) ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಲಿತರು ಯಾಕೆ ಸಿಎಂ ಆಗಬಾರದು? ನಾನು ಯಾಕೆ ಸಿಎಂ ಆಗಬಾರದು? ಮುಖ್ಯಮಂತ್ರಿ ಮಾಡಿದರೆ ಯಾರು ಬೇಡ ಅಂತಾರೆ. ನನಗೆ ಅಷ್ಟು ಶಕ್ತಿ ಇದೆಯೋ ಇಲ್ವೋ, ಸಿಎಲ್​ಪಿಯಲ್ಲಿ ನನ್ನ ಒಪ್ಪುತ್ತಾರೋ ‌ಇಲ್ವೋ? ಇವೆಲ್ಲವೂ ಪರಿಗಣನೆಗೆ ಬರುತ್ತದೆ. ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದರು.

ಸೋಮವಾರ ನಡೆದ ಸಭೆಯಲ್ಲಿ ಬೆಳಗಾವಿ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗಿದೆ. ಶಾಸಕಾಂಗ ಸಭೆಯಲ್ಲಿ ಯಾರೂ ಅಸಮಾಧಾನ‌ ವ್ಯಕ್ತಪಡಿಸಿಲ್ಲ. ದಲಿತ ಶಾಸಕರ ಡಿನ್ನರ್ ಸಭೆ ರದ್ದಾಗಿಲ್ಲ, ಮುಂದೂಡಿದ್ದೇವೆ. ದಲಿತ ಶಾಸಕರ ಕಷ್ಟ ನೋವು ಆಲಿಸಬೇಕು. ತ್ಯಾಗದ ಬಗ್ಗೆ ನಾನು ಮಾತಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಪಂಚ ಪ್ರಶ್ನೆ.. 60 ದಿನಗಳ ಟಾರ್ಗೆಟ್.. ಶಿಸ್ತಿನ ಪಾಠ: ಕಾಂಗ್ರೆಸ್ ಸಭೆಯ ಇನ್​ಸೈಡ್​ ಡಿಟೇಲ್ಸ್

ಸಿಎಂ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸ್ತಾರೆ. ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳೆಗೆ ಇಳಿಸುತ್ತಾರೆ ಎಂದು ಹೇಳಿದ್ದು ಯಾರು? ಅಧಿಕಾರ ಹಂಚಿಕೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನರಾಚನೆ ವಿಚಾರ ನನಗೆ ಗೊತ್ತಿಲ್ಲ ಎಂದರು.

ಹಸುಗಳ ಕೆಚ್ಚಲು ಕೊಯ್ದಿದ್ದನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ದಲಿತರ ಕೊಲೆಯಾಗುತ್ತದೆ. ಆಗ ಪ್ರತಿಭಟನೆ ಮಾಡಿದ್ದಾರಾ? ತಂದೆ-ತಾಯಿಯ ಕೊಲೆಯಾಗುತ್ತದೆ, ಅಂತವರಿಗೆ ಬಲಿ ಹಾಕಬೇಕು. ಇದರಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ. ಸಣ್ಣತನದ ರಾಜಕೀಯದಿಂದ ಹೊರಬರದಿದ್ದರೇ ಬಿಜೆಪಿಯವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಉತ್ತರ ಕರ್ನಾಟಕದವರು ಸಿಎಂ ಆದ್ರೆ ಸ್ವಾಗತಿಸುವೆ: ಎಸ್​ಆರ್ ಪಾಟೀಲ್

ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ನಾನು ಸ್ವಾಗತಿಸುತ್ತೇನೆ. ಪ್ರತಿಯೊಬ್ಬ ಶಾಸಕರಿಗೂ ಮಂತ್ರಿ ಸ್ಥಾನದ ಬಗ್ಗೆ ಆಸೆ ಇರುತ್ತದೆ. ಯಾರು ಕೂಡ ಸನ್ಯಾಸಿಗಳಲ್ಲ ಎಂದು ಕಾಂಗ್ರೆಸ್ ಮುಖಂಡ ಎಸ್​ಆರ್​ ಪಾಟೀಲ್ ಹೇಳಿದರು.

ಅವಕಾಶ ಮಾಡಿಕೊಡಿ ಅಂತ ಸಹಜವಾಗಿ ಎಲ್ಲರೂ ಕೇಳುತ್ತಾರೆ. ಸಿಎಂ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್​ಗೆ ಬಿಟ್ಟಿದ್ದು. ಅಧಿಕಾರ ಹಂಚಿಕೆ ಮಾತುಕತೆ ಕುರಿತು ನನಗೆ ಮಾಹಿತಿ ಇಲ್ಲ. ಸಿದ್ದರಾಮಯ್ಯರನ್ನು ಕೆಳಗಿಳಿಸಬೇಕು ಎಂಬುವುದು ಎಲ್ಲಿ ಚರ್ಚೆಯಾಗಿದೆ ಎಂದು ಪ್ರಶ್ನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:48 pm, Tue, 14 January 25