ಪಾಕಿಸ್ತಾನದ ಮೇಲಿನ ದ್ವೇಷದಿಂದ ಭಾರತ, ಇರಾನ್, ಅಫ್ಘಾನ್ ಒಂದಾಗಿ ಸಂಚು; ಖವಾಜಾ ಆಸಿಫ್ ಆರೋಪ
ಇರಾನ್ ವಿರುದ್ಧದ ಇಸ್ರೇಲ್ ಯುದ್ಧದಿಂದ ಭಯಭೀತರಾಗಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ತಮ್ಮ ದೇಶದ ವಿರುದ್ಧ ಭಾರತವು ಸಂಚು ರೂಪಿಸಿದೆ ಎಂದು ಹೇಳಿದ್ದಾರೆ. ಇಸ್ರೇಲ್ ಪಾಕಿಸ್ತಾನವನ್ನು ತನ್ನ ಸಾಮಂತ ರಾಷ್ಟ್ರವಾಗಿ ಪರಿವರ್ತಿಸುತ್ತಿದೆ. ಪಾಕಿಸ್ತಾನದ ವಿರುದ್ಧದ ದ್ವೇಷದಿಂದ ಅಫ್ಘಾನಿಸ್ತಾನ, ಇರಾನ್ ಮತ್ತು ಭಾರತ ಮೈತ್ರಿ ಮಾಡಿಕೊಂಡಿವೆ ಎಂದು ಖವಾಜಾ ಆಸಿಫ್ ಆರೋಪಿಸಿದ್ದಾರೆ.

ಇಸ್ಲಮಾಬಾದ್, ಮಾರ್ಚ್ 4: ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ಪಾಕಿಸ್ತಾನವನ್ನು ಭಯಭೀತಗೊಳಿಸಿವೆ. ಪಾಕಿಸ್ತಾನವೂ ಇರಾನ್ನೊಂದಿಗೆ 900 ಕಿ.ಮೀ. ಉದ್ದದ ಗಡಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತನ್ನ ದೇಶದ ಮೇಲೂ ದಾಳಿಯಾಗುವ ಭೀತಿ ಎದುರಾಗಿದೆ. ಇದರ ನಡುವೆ ಇಂತಹ ಸಂಘರ್ಷದ ಸಮಯದಲ್ಲೂ ಭಾರತದ ಮೇಲೆ ಗೂಬೆ ಕೂರಿಸುವ ಅವಕಾಶವನ್ನು ಪಾಕಿಸ್ತಾನ ಬಿಟ್ಟಿಲ್ಲ. ನಿನ್ನೆ ಸಂಜೆ ಈ ಬೆಳವಣಿಗೆಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪಾಕಿಸ್ತಾನಿ ರಕ್ಷಣಾ ಸಚಿವ ಖವಾಜಾ ಆಸಿಫ್, ನಮ್ಮ ನೆರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಇರಾನ್ ಮತ್ತು ಭಾರತ ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿವೆ. “ಪ್ಯಾಲೆಸ್ಟೈನ್ ಭೂಮಿಯಲ್ಲಿ ಇಸ್ರೇಲ್ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಇಸ್ಲಾಮಿಕ್ ಜಗತ್ತಿನಲ್ಲಿ ಸಂಭವಿಸಿದ ಪ್ರತಿಯೊಂದು ವಿಪತ್ತು, ಅದರ ಮೇಲೆ ಹೇರಲಾದ ಪ್ರತಿಯೊಂದು ಯುದ್ಧಕ್ಕೆ ಜಿಯೋನಿಸ್ಟ್ ಸಿದ್ಧಾಂತ ಕಾರಣವೆಂದು ತೋರಿಸುತ್ತದೆ. ಅಫ್ಘಾನಿಸ್ತಾನ, ಇರಾನ್ ಮತ್ತು ಭಾರತಗಳು ಪಾಕಿಸ್ತಾನದ ವಿರುದ್ಧ ದ್ವೇಷದ ಸಂಚನ್ನು ರೂಪಿಸುತ್ತಿವೆ” ಎಂದು ಆಸಿಫ್ ಹೇಳಿದ್ದಾರೆ.
“ಇರಾನ್ ಜೊತೆಗಿನ ಸಂಘರ್ಷಕ್ಕೆ ಜಿಯೋನಿಸ್ಟ್ ಹಿತಾಸಕ್ತಿಗಳು ಕುಮ್ಮಕ್ಕು ನೀಡುತ್ತಿವೆ. ಇರಾನ್ ಒಪ್ಪಂದಕ್ಕೆ ಬರಲು ಮುಕ್ತವಾಗಿದ್ದರೂ ಸಂಘರ್ಷವನ್ನು ಇರಾನ್ ಮೇಲೆ ಹೇರಲಾಗಿದೆ” ಎಂದು ಟೀಕಿಸಿದ್ದಾರೆ. ಇಸ್ರೇಲಿನ ಗೆಲುವು ಅಫ್ಘಾನಿಸ್ತಾನ, ಭಾರತ ಮತ್ತು ಇರಾನ್ಗಳನ್ನು ಒಳಗೊಂಡ ಸಂಘಟಿತ ಯೋಜನೆಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಇರಾನ್-ಇಸ್ರೇಲ್, ಅಮೆರಿಕ ಸಂಘರ್ಷ; ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ ಭಾರತೀಯರನ್ನು ಕರೆತರಲಿವೆ 58 ವಿಮಾನಗಳು
“ಅಫ್ಘಾನಿಸ್ತಾನ, ಇರಾನ್ ಮತ್ತು ಭಾರತದ ಜಂಟಿಯಾಗಿ ಪಾಕಿಸ್ತಾನದ ವಿರುದ್ಧ ದ್ವೇಷ ಕಾರುತ್ತಿವೆ. ಇದರಿಂದ ನಮ್ಮ ಗಡಿಗಳು ಅಸುರಕ್ಷಿತವಾಗುತ್ತಿವೆ. ಎಲ್ಲಾ ಕಡೆಯ ಶತ್ರುಗಳಿಂದ ನಮ್ಮನ್ನು ಸುತ್ತುವರೆಯಲಾಗಿದೆ. ಪಾಕಿಸ್ತಾನವನ್ನು ಸಾಮಂತ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
