ಗ್ಯಾರೆಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ: ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ನಾಯಕರು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ನಾನು ಕೇಳುತ್ತಿದ್ದೇನೆ, ಯಾವ ಹಳ್ಳಿಯ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಬೇಕು. ಹಳ್ಳಿ ಹೆಣ್ಣುಮಗಳ ಬಗ್ಗೆ ಏಕೆ ಇಷ್ಟು ಹಗುರವಾಗಿ ಮಾತನಾಡಿದ್ದಾರೆ ಎಂದು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ ಪ್ರಶ್ನಿಸಿದರು.

ಗ್ಯಾರೆಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ: ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ನಾಯಕರು
ಹೆಚ್​ಡಿ ಕುಮಾರಸ್ವಾಮಿ
Follow us
| Updated By: ವಿವೇಕ ಬಿರಾದಾರ

Updated on: Apr 14, 2024 | 1:53 PM

ಮಂಡ್ಯ, ಏಪ್ರಿಲ್​ 14: ಲೋಕಸಭೆ ಚುನಾವಣೆ (Lok Sabha Election) ಹೊತ್ತಿನಲ್ಲಿ ಎನ್​ಡಿಎ (NDA) ನಾಯಕರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್ (Sanjay Patil)​ “ಸುಖ ನಿದ್ರೆಗೆ ಅಕ್ಕ ಒಂದು ಪೆಗ್​ ಎಕ್ಸ್​ಟ್ರಾ ಹಾಕಬೇಕಾಗುತ್ತದೆ” ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ (Laxmi Hebbalkar) ವಿರುದ್ಧ ಕೆಟ್ಟದಾಗಿ ಹೇಳಿಕೆ ನೀಡಿದ್ದರು. ಸಂಚಯ ಪಾಟೀಲ್ ಹೇಳಿಕೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumarswamy) ಅವರು “ಗ್ಯಾರಂಟಿಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ” ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ರಾಜ್ಯಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್​ ಎನ್​ಡಿಎ ನಾಯಕರ ವಿರುದ್ಧ ಹರಿಹಾಯ್ದಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಂಡ್ಯದ ಸಂಜಯ ವೃತ್ತದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಗೋ ಬ್ಯಾಕ್ ಕುಮಾರಸ್ವಾಮಿ ಎಂದು ಮಹಿಳೆಯರು ಘೋಷಣೆ ಕೂಗಿದರು. ಕಾಂಗ್ರೆಸ್​ನ ಮಹಿಳಾ ಘಟಕ ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು. ಹೆದ್ದಾರಿ ತಡೆಯಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ: ಯತ್ನಾಳ್​

ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಲೋಕಭಾ ಚುನಾವಣೆವರೆಗೆ ಮಾತ್ರ ಇರುತ್ತವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ನ ಶಾಸಕ ಬಾಲಕೃಷ್ಣ, ರಾಯರೆಡ್ಡಿ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆ ಎಂದಿದ್ದಾರೆ. ಈ ಗ್ಯಾರಂಟಿಗಳು ಲೋಕಸಭಾ ಚುನಾವಣೆ ಬಳಿಕ ಹಂತ ಹಂತವಾಗಿ ಹೋಗುತ್ತವೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು. ಗ್ಯಾರೆಂಟಿ ಜಾರಿ ಮಾಡುವಾಗಲೇ ನೆಪ ಮಾಡಿ ಜಾರಿಗೆ ತಂದಿದ್ದಾರೆ. 10 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಕೊಡುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಅಷ್ಟೇ ಅಲ್ಲ ಕಾಂಗ್ರೆಸ್ ಸರ್ಕಾರ ಇರುತ್ತದೆ ಎಂಬುವುದೇ ಗ್ಯಾರಂಟಿ ಇಲ್ಲ ಎಂದರು.

ಯಾವ ಹಳ್ಳಿಯ ಮಹಿಳೆ ದಾರಿ ತಪ್ಪಿದ್ದಾರೆ ಎಂದು ಸ್ಪಷ್ಟಪಡಿಸಬೇಕು: ಹೆಬ್ಬಾಳ್ಕರ್​

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ನಾನು ಕೇಳುತ್ತಿದ್ದೇನೆ, ಯಾವ ಹಳ್ಳಿಯ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಬೇಕು. ಹಳ್ಳಿ ಹೆಣ್ಣುಮಗಳ ಬಗ್ಗೆ ಏಕೆ ಇಷ್ಟು ಹಗುರವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆ ಮಾಡಿಲ್ಲ. ಬಿಜೆಪಿಯ ಮನಸ್ಥಿತಿ ಬಗ್ಗೆ ರಾಜ್ಯದ ಜನರಿಗೆ ಗೊತ್ತಾಗಿದೆ. ಸುಳ್ಳು ಹೇಳುವುದು ಬಿಜೆಪಿಯ ಅಜೆಂಡಾ ಆಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಸಂಜಯ್ ಪಾಟೀಲ್ ಮನೆ ಎದುರು ‘ಕೈ’ ಕಾರ್ಯಕರ್ತೆಯರಿಂದ ಪ್ರತಿಭಟನೆ

ಕುಮಾರಸ್ವಾಮಿ ಹೇಳಿಕೆಯಿಂದ ಬಹಳ ನೋವಾಗಿದೆ: ಡಿಕೆ ಶಿವಕುಮಾರ್

ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಯಿಂದ ಬಹಳ ನೋವಾಗಿದೆ. ಅವರ ಹೇಳಿಕೆ ಹಿಂದಿನ ಅರ್ಥವೇನು? ಯಾವ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ? ಹೆಣ್ಣು‌ಮಕ್ಕಳು ದೇವಸ್ಥಾನಗಳಿಗೆ ಹೋಗುವುದು ದಾರಿತಪ್ಪಿದಂತಾಗುತ್ತದೆಯೇ? ಹಬ್ಬ ಆಚರಣೆ ಮಾಡುವುದು, ಫ್ರಿಡ್ಜ್, ಟಿವಿ ತೆಗೆದುಕೊಳ್ಳುವುದು, ಬಟ್ಟೆ ತೆಗೆದುಕೊಳ್ಳುವುದು ದಾರಿ ತಪ್ಪಿದ ಹಾಗೆಯಾ? ಇಡೀ ದೇಶ ಇಂದು ನಮ್ಮ ಗ್ಯಾರೆಂಟಿ ಯೋಜನೆಯನ್ನ ಹೊಗಳುತ್ತಿದೆ. ನಮ್ಮ ಗ್ಯಾರೆಂಟಿ ನೋಡಿ‌, ಮೋದಿ ಗ್ಯಾರೆಂಟಿ ತಂದಿದ್ದಾರೆ. ಇಂಥ ಯೋಜನೆಗೆ ಈ ರೀತಿ ಹೇಳಿಕೆ ಕೊಡುವುದು ಖಂಡನೀಯ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.

ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಜನ ಹೆಣ್ಣುಮಕ್ಕಳು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ನನಗೆ ಗೊತ್ತಿಲ್ಲ. ಇದು ನಮ್ಮ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಇಡೀ ನಾಡಿಗೆ ಮಾಡಿದ ಅವಮಾನ. ಹೆಚ್​ಡಿ ಕುಮಾರಸ್ವಾಮಿ ಕ್ಷಮೆ ಕೇಳುವ ಅಗತ್ಯವಿಲ್ಲ. ಈ ಹಿಂದೆ ನನ್ನ ತಾಯಿ ಬಗ್ಗೆಯೂ ಮಾತನಾಡಿದ್ದರು. , ಅಪ್ಪ-ಅಮ್ಮಗೆ ಹುಟ್ಟವ್ರೊ ಇಲ್ವೋ ಅಂತ ‌ನನಗೆ ಮಾತನಾಡಿದ್ದರು. ಆಮೇಲೆ ಕ್ಷಮೆ ಕೇಳಿದರು. ಕ್ಷಮಾಪಣೆಯಿಂದ‌ ಏನೂ ಉತ್ತರ ಸಿಗುವುದಿಲ್ಲ. ಅವರ ಮನಸ್ಸಿನಲ್ಲಿರುವ‌ ಭಾವನೆಯನ್ನೇ ಅವರು ಹೊರ ಹಾಕಿದ್ದಾರೆ. ಇದಕ್ಕೆ ತಕ್ಕ ಪಾಠವನ್ನ ಜನತೆ ಬಿಜೆಪಿಗೆ ಕಲಿಸಲಿದ್ದಾರೆ. ಇದು ದೇಶ, ನಾಡಿನ ಜನತೆಗೆ ಮಾಡಿದ ಅವಮಾನ ಎಂದು ವಾಗ್ದಾಳಿ ಮಾಡಿದರು.

ಆವೇಶದಲ್ಲಿ ನಾಡಿನ ಮಹಿಳಯರನ್ನು ಅಪಮಾನ ಮಾಡಿದ್ದಾರೆ: ಉಗ್ರಪ್ಪ

ಹೆಚ್​ಡಿ ಕುಮಾರಸ್ವಾಮಿ ಆವೇಶದಲ್ಲಿ ನಾಡಿನ ಸಮಸ್ತ ಮಹಿಳಯರನ್ನು ಅಪಮಾನ ಮಾಡಿದ್ದಾರೆ. ದಾರಿ ತಪ್ಪಿದ್ದಾರೆ ಅಂದ್ರೆ ಏನು ಅರ್ಥ? ಮಿಸ್ಟರ್ ಹೆಚ್​ ಕುಮಾರಸ್ವಾಮಿ ನಿಮಗೂ ದೊಡ್ಡ ಕುಟುಂಬ ಇದೆ. ಬಿಜೆಪಿ ಸಖ್ಯ ಮಾಡಿದ ಮೇಲೆ ಬಿಜೆಪಿ ಮನುವಾದ ನಿಮಗೂ ಬಂದಿದೆ. ಪರಸ್ತ್ರೀಯರನ್ನು ಮಾತೃ ಸ್ವರೂಪದಲ್ಲಿ ಕಾಣುವವರು ನಾವು. ರಾಜ್ಯದ ಮಹಿಳೆಯರ ಬಳಿ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್​ ಹಿರಿಯ ಮುಖಂಡ ವಿಎಸ್​ ಉಗ್ರಪ್ಪ ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ