ಮೂರು ಬಾರಿ ಶಾಸಕನಾಗಿದ್ದೇನೆ, ಟಿಕೆಟ್ ನೀಡುವಂತೆ ಕೇಳಿದ್ದೇನೆ: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ

|

Updated on: Mar 28, 2023 | 10:19 PM

ಕರ್ನಾಟಕದಲ್ಲಿ ಬಿಜೆಪಿ ನಾಯಕರ ನಡುವೆ ಟಿಕೆಟ್ ಫೈಟ್ ಆರಂಭಗೊಂಡಿದೆ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಮನವಿ ಮಾಡಿದ ಬೆನ್ನಲ್ಲೇ ಶಾಸಕರು ಸಿಟಿ ರವಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಮೂರು ಬಾರಿ ಶಾಸಕನಾಗಿದ್ದೇನೆ, ಟಿಕೆಟ್ ನೀಡುವಂತೆ ಕೇಳಿದ್ದೇನೆ: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ
Follow us on

ಚಿಕ್ಕಮಗಳೂರು: ಶೀಘ್ರದಲ್ಲೇ ದಿನಾಂಕ ಘೋಷಣೆಯಾಗಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಕಣಕ್ಕಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಯಾರಿಕೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಟಿಕೆಟ್ ಫೈಟ್ (BJP Ticket Fight) ಕೂಡ ಏರ್ಪಟ್ಟಿದೆ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ (MP Kumaraswamy) ಅವರಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಅವರಲ್ಲಿ ಮನವಿ ಮಾಡಿದ ಬೆನ್ನಲ್ಲೇ ಶಾಸಕರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿಟಿ ರವಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಮೂರು ಬಾರಿ ಶಾಸಕ ಆಗಿದ್ದೇನೆ ಟಿಕೆಟ್ ಕೇಳಲೇಬೇಕಲ್ಲ. ನಾಯಕರನ್ನ ಟಿಕೆಟ್ ನೀಡುವಂತೆ ಕೇಳಿದ್ದೇನೆ ಎಂದರು.

ನಾನು ಇಲ್ಲೇ ಹಿರಿಯ ಶಾಸಕನಾಗಿದ್ದೇನೆ. ನಾನು ಬೇರೆ ಪಕ್ಷದಲ್ಲಿ ಟಿಕೆಟ್ ಕೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಮನೆಗೆ ಹೋಗಿರುವುದು ಸುಳ್ಳು. ಯಾವುದೇ ಪಕ್ಷದವರು ನನ್ನ ಕರೆದಿಲ್ಲ. ರಾಜಕೀಯದಲ್ಲಿ ಭಿನ್ನಮಗಳು ಕೂಡ ಸಹಜ, ನಾವು ಒಂದೇ ತರ ಇರಲು ಸಾಧ್ಯವಿಲ್ಲ. ನಾನು ದೇವರಲ್ಲ ತಪ್ಪು ಮಾಡಿರಬಹುದು, ತಪ್ಪು ಮಾಡಿಲ್ಲ ಅಂತ ಹೇಳುವುದಿಲ್ಲ. ನನಗೆ ಬಿಜೆಪಿಯಿಂದ ಟಿಕೆಟ್ ನೀಡುತ್ತಾರೆ, ನಾನು ಇಲ್ಲಿಂದಲೇ ಸ್ಪರ್ಧಿಸಿ ಮತ್ತೆ ಗೆಲ್ಲುತ್ತೇನೆ ಎಂದರು.

ಶಾಸಕ ಕುಮಾರಸ್ವಾಮಿ ವಿರುದ್ಧ ಸ್ವಪಕ್ಷೀಯ ಕಾರ್ಯಕರ್ತರ ಬಂಡಾಯ

ಎಂ.ಪಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಬಂಡಾಯ ಮುಂದುವರೆದಿದೆ. ಮಾರ್ಚ್ 22ರಂದು ನೂರಾರು ಕಾರ್ಯಕರ್ತರು ಸಿ.ಟಿ. ರವಿ ಮನೆಗೆ ಮುತ್ತಿಗೆ ಹಾಕಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದರು. ಇದಕ್ಕೆ ಕಾರಣ, ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ ಜೆಡಿಎಸ್ ಮುಖಂಡೆ ಭಾರತಿ ಕಂಟಕ‌ವಾಗಿದ್ದಾರಂತೆ. ತನ್ನ ಆಪ್ತೆಯ ಮೇಲಿನ ವ್ಯಾಮೋಹದಿಂದಲೇ ಶಾಸಕರು ತಮ್ಮ ಕಾರ್ಯಕರ್ತರನ್ನು ದೂರ ಮಾಡಿದ್ದು ಈ ವಿಚಾರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನೀವು ಮಾಡಿದ್ದೆಲ್ಲ ಸಹಿಸಿಕೊಂಡು ಬಿರಿಯಾನಿ ಹಾಕುವ ದೇಶ ಇದಲ್ಲ; ಎಸ್​ಡಿಪಿಐ ಮುಖಂಡಗೆ ಸಿಟಿ ರವಿ ತಿರುಗೇಟು

ಮೂಡಿಗೆರೆ ಜೆಡಿಎಸ್ ಮುಖಂಡೆ ಭಾರತಿಗಾಗಿ ಎಂ.ಪಿ. ಕುಮಾರಸ್ವಾಮಿಯವರು ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಕಾರ್ಯಕರ್ತರ ವಿರೋಧದ ನಡುವೆಯೂ ಸರ್ಕಾರಿ ದುಡ್ಡನ್ನ ತನ್ನ ಆಪ್ತೆಗಾಗಿ ಖರ್ಚು ಮಾಡಿದ್ದಾರೆ. ತನ್ನ ಆಪ್ತೆಯ ಹೋಂ ಸ್ಟೇ ರಸ್ತೆಗೆ ಲಕ್ಷಾಂತರ ರೂಪಾಯಿ ಅನುದಾನ ನೀಡಿದ್ದಾರೆ. ನೆರೆ ಪರಿಹಾರದ ಹಣವನ್ನು ಹೋಂ ಸ್ಟೇ ರಸ್ತೆಗಾಗಿ ಖರ್ಚು ಮಾಡಿದ್ದಾರೆ. ಹೋಂ ಸ್ಟೇಗೆ ಸಿಮೆಂಟ್ ರಸ್ತೆ, ಚರಡಿ, ವಿದ್ಯುತ್ ಪೂರೈಕೆಗಾಗಿ 80 ಲಕ್ಷ ಅನುದಾನ ನೀಡಿದ್ದಾರೆ ಎಂದು ಕಾರ್ಯಕರ್ತರು ಶಾಸಕನ ಮೇಲೆ ಅಸಮಾಧಾನಗೊಂಡಿದ್ದಾರೆ.

ಇದಕ್ಕೂ ಮುನ್ನ ಮಾರ್ಚ್ 16ರಂದು ಎಂ.ಪಿ. ಕುಮಾರಸ್ವಾಮಿಯವರನ್ನು ವಿರೋಧಿಸಿ ಸ್ವಪಕ್ಷದ ಕಾರ್ಯಕರ್ತರೇ ಮಾಜಿ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಅವರ ಕಾರಿಗೆ ಮುತ್ತಿಗೆ ಹಾಕಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ನನಗೆ 2004 ರಿಂದಲೂ ಇರುವ ವಿರೋಧಿಗಳು ಇಂದಿಗೂ ಇದ್ದಾರೆ. ಆದರೂ ಕೂಡಾ ನಾನು ಗೆಲ್ಲುತ್ತಲೇ ಬಂದಿದ್ದೇನೆ. ಸದ್ಯ ನಾನು ಗೆಲ್ಲಬಾರದು ಅಂತ ಹೀಗೆ ಮಾಡಿದ್ದಾರೆ. ನನಗೆ ಟಿಕೆಟ್ ಕೊಟ್ಟರೆ ನನ್ನ ಗೆಲುವಿಗೆ ಯಾರೂ ಅಡ್ಡಿಪಡಿಸಲು ಆಗಲ್ಲ. ನಾನು ಗೆದ್ದು ಬರುತ್ತೇನೆ ಎಂದಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Tue, 28 March 23