AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಗೆಲ್ಲಲು ಭಿನ್ನಾಭಿಪ್ರಾಯ ಮರೆತು ಹುಬ್ಬಳ್ಳಿಯಲ್ಲಿ ಮತ್ತೆ ಒಂದಾದ ಬಿಜೆಪಿ ನಾಯಕರು

ಹುಬ್ಬಳ್ಳಿ ಖಾಸಗಿ ಹೋಟೆಲ್​ನಲ್ಲಿ ತಡರಾತ್ರಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಜಗದೀಶ್ ಶೆಟ್ಟರ್ ಸಭೆ ಮಾಡಿದ್ದು, ವೈಮನಸ್ಸು ಮರೆತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಒಂದಾಗಿದ್ದಾರೆ. ಈ ಸಭೆಯಲ್ಲಿ ಮಾಜಿ ಸಚಿವ ಮುನೇನಕೊಪ್ಪ, ಶಾಸಕರಾದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಮ್​. ಆರ್​.ಪಾಟೀಲ್, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್, ಈರಣ್ಣ ಭಾಗಿಯಾಗಿದ್ದರು.

ಲೋಕಸಭೆ ಗೆಲ್ಲಲು ಭಿನ್ನಾಭಿಪ್ರಾಯ ಮರೆತು ಹುಬ್ಬಳ್ಳಿಯಲ್ಲಿ ಮತ್ತೆ ಒಂದಾದ ಬಿಜೆಪಿ ನಾಯಕರು
ಬಿಜೆಪಿ ನಾಯಕರು
ವಿವೇಕ ಬಿರಾದಾರ
|

Updated on:Feb 04, 2024 | 8:58 PM

Share

ಹುಬ್ಬಳ್ಳಿ, ಫೆಬ್ರವರಿ 04: ವಿಧಾನಸಭೆ ಚುನಾವಣೆ ಸಮಯದಲ್ಲಿ ಟಿಕೆಟ್​ ನೀಡಲು ನಿರಾಕರಿಸಿದ್ದಕ್ಕೆ ಬಿಜೆಪಿಯ ಕಟ್ಟಾಳು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ (Jagadish Shettar)​ ಕಮಲ ಮನೆ ತೊರೆದು ಕಾಂಗ್ರೆಸ್ (Congress)​ ಪಕ್ಷ ಸೇರಿದ್ದರು. ಈ ವೇಳೆ ಜಗದೀಶ್​ ಶೆಟ್ಟರ್​ ಅವರನ್ನು ಬಿಜೆಪಿಯಲ್ಲೇ (BJP) ಉಳಿಸಿಕೊಳ್ಳಲು ಕೇಸರಿ ನಾಯಕರು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ (Pralhad Joshi) ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜೋಡೆತ್ತು ಎಂದೇ ಹೆಸರುವಾಸಿಯಾಗಿದ್ದಾರೆ. ಆದರೆ ಶೆಟ್ಟರ್​ ಪಕ್ಷ ತೊರೆಯುತ್ತಿದ್ದಂತೆ ಇಬ್ಬರ ನಡುವೆ ಸಣ್ಣ ಬಿರುಕು ಮೂಡಿತ್ತು.

ಜಗದೀಶ್​ ಶೆಟ್ಟರ್​ ಕಾಂಗ್ರೆಸ್​ ಸೇರಿದ ಮೇಲೆ ರಾಜ್ಯ ಬಿಜೆಪಿ ನಾಯಕರ ಮೇಲೆ ನೇರಾ ನೇರ ವಾಗ್ದಾಳಿ ಮಾಡಲು ಶುರು ಮಾಡಿದ್ದರು. ಇದು ಸಚಿವ ಪ್ರಹ್ಲಾದ್​ ಜೋಶಿ ಅಸಮಾಧನಕ್ಕೂ ಕಾರಣವಾಗಿತ್ತು. ಇನ್ನು ವಿಧಾನಸಭೆಯಲ್ಲಿ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್​ ಜಗದೀಶ್​ ಶೆಟ್ಟರ್ ಅವರಿಗೆ ಟಿಕೆಟ್​ ನೀಡಿತು. ಸೋಲಿಲ್ಲದ ಸರದಾರನಂತೆ ಸತತ ಆರು ಬಾರಿ ಗೆದ್ದಿದ್ದ ಶೆಟ್ಟರ್​ 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಇದಾದ ನಂತರ ಶೆಟ್ಟರ್​ ಅವರನ್ನು ಕಾಂಗ್ರೆಸ್​ ಎಂಎಲ್​ಸಿ ಮಾಡಿತು.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರ ಬಿಜೆಪಿ ಭದ್ರಕೋಟೆ. ಜಾತಿವಾರು ಲೆಕ್ಕಚಾರ ನೋಡುವವುದಾದರೆ ಲಿಂಗಾಯತರ ಸಂಖ್ಯೆ ಹೆಚ್ಚಾಗಿದೆ. ಜಾತಿಗಿಂತ ಮಿಗಿಲಾಗಿ ಇಲ್ಲಿ ಹಿಂದುತ್ವ ಸಿದ್ಧಾಂತ ಹೆಚ್ಚು ವರ್ಕೌಟ್​ ಆಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಬಿಜೆಪಿ ಸುಲಭ ಜಯ ಸಿಗುತ್ತದೆ. ಇನ್ನು ಜಗದೀಶ್​ ಶೆಟ್ಟರ್​ ಕಾಂಗ್ರೆಸ್​ ಸೇರಿದ ಬಳಿಕ ಸಾರ್ವಜನಿಕರ ನಡುವೆ ಕಾಣಿಸುವುದೇ ಅಪರೂಪವಾಯಿತು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಜಗದೀಶ್​ ಶೆಟ್ಟರ್​ ಗೇಮ್​ ಪ್ಲ್ಯಾನ್​: ಲಿಂಗಾಯತ ನಾಯಕರೇ ಟಾರ್ಗೆಟ್

ಶೆಟ್ಟರ್​ಗೆ ಗಾಳ ಹಾಕಿದ ಬಿಜೆಪಿ

ಜಗದೀಶ್​ ಶೆಟ್ಟರ್​​ ಮತ್ತು ಲಕ್ಷ್ಮಣ ಸವದಿ ಕಾಂಗ್ರೆಸ್​ ಸೇರಿದ ಮೇಲೆ ಲಿಂಗಯಾತ ಮತಗಳು ಚದುರಿದಂತಾಗಿದ್ದವು. ಇದರ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿತು. ಬಳಿಕ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಾಕ್ಷರಾಗಿ ಘೋಷಿಸಿದ ನಂತರ ಲಿಂಗಾಯತರ ಗಮನ ಬಿಜೆಪಿಯಡೆಗೆ ಸರಿತು. ಬಳಿಕ ಬಿವೈ ವಿಜಯೇಂದ್ರ ಮತ್ತು ಬಿಎಸ್​ ಯಡಿಯೂರಪ್ಪ ಅವರು ನಿರಂತರವಾಗಿ ಜಗದೀಶ ಶೆಟ್ಟರ್​ ಅವರನ್ನು ಸಂಪರ್ಕಿಸಿ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಹುಬ್ಬಳ್ಳಿ-ಧಾರವಾಡ ಸ್ಥಳೀಯ ನಾಯಕರಿಗೆ ಇದು ಇಷ್ಟವಿರಲಿಲ್ಲ ಎಂಬ ಮಾತುಗಳು ಕೇಳಿಬಂದವು.

ಮತ್ತೆ ಒಂದಾದ ಶೆಟ್ಟರ್, ಜೋಶಿ

ಬಿಜೆಪಿ ಸೇರಿದ ಬಳಿಕವೂ ಪ್ರಹ್ಲಾದ್​ ಜೋಶಿ ಮತ್ತು ಜಗದೀಶ ಶೆಟ್ಟರ್ ಬಣಗಳ ನಡುವೆ ಭಿನ್ನಾಭಿಪ್ರಾಯ ಇತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆ (ಫೆ.03) ರಂದು ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಗೆ ಜಗದೀಶ್​ ಶೆಟ್ಟರ್​ ಮತ್ತು ಮುನೇನಕೊಪ್ಪ ಗೈರಾಗಿದ್ದರು. ಆದರೆ ಹುಬ್ಬಳ್ಳಿ ಖಾಸಗಿ ಹೋಟೆಲ್​ನಲ್ಲಿ ತಡರಾತ್ರಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಜಗದೀಶ್ ಶೆಟ್ಟರ್ ಸಭೆ ಮಾಡಿದ್ದು, ವೈಮನಸ್ಸು ಮರೆತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಒಂದಾಗಿದ್ದಾರೆ. ಈ ಸಭೆಯಲ್ಲಿ ಮಾಜಿ ಸಚಿವ ಮುನೇನಕೊಪ್ಪ, ಶಾಸಕರಾದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಮ್​. ಆರ್​.ಪಾಟೀಲ್, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್, ಈರಣ್ಣ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:57 pm, Sun, 4 February 24