Maharashtra Political Crisis: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರ ಬಂಡಾಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 21, 2022 | 12:09 PM

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿದ್ದಾರೆ.

Maharashtra Political Crisis: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರ ಬಂಡಾಯ
ಉದ್ಧವ್ ಠಾಕ್ರೆ
Follow us on

ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ಮೈತ್ರಿಕೂಟದ ‘ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ’ ಸರ್ಕಾರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ (CM Uddhav Thackeray) ವಿರುದ್ಧ ಶಿವಸೇನೆ  (Shivsena) ಶಾಸಕರು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿದ್ದಾರೆ. ಸುಮಾರು 17ರಿಂದ 21 ಬಂಡಾಯ ಶಾಸಕರು ಸೂರತ್​​ ನಗರದ ಹೊಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಏಕನಾಥ ಶಿಂಧೆ ಮೂಲಕ ಬಿಜೆಪಿಯಿಂದ ಅಪರೇಷನ್ ಕಮಲಕ್ಕೆ ಬಿಜೆಪಿ ಯತ್ನಿಸಿದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ಮೈತ್ರಿ ಸರ್ಕಾರ‌ಕ್ಕೆ ಈ ಬಂಡಾಯದೊಂದಿಗೆ ಪತನದ ಭೀತಿ ಎದುರಾಗಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿದ್ದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಕೆಲ ಶಾಸಕರು ತಿರುಗಿಬಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಏಕನಾಥ್ ಶಿಂಧೆ ಸುದ್ದಿಗೋಷ್ಠಿ ಕರೆದಿದ್ದು ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಗುಜರಾತ್​ನಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೆ. ಹೀಗಾಗಿ ಬಿಜೆಪಿ ಪ್ರಯತ್ನದಿಂದಲೇ ಮಹಾರಾಷ್ಟ್ರದ ಶಿವಸೇನೆಯಲ್ಲಿ ತುಮುಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಶಿವಸೇನೆ ಶಾಸಕರು ವಾಸ್ತವ್ಯ ಹೂಡಿರುವ ಹೊಟೆಲ್​ ಸುತ್ತಮುತ್ತಲೂ ಭದ್ರತೆ ಹೆಚ್ಚಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳನ್ನು ಒಳಗೆ ಬಿಡುತ್ತಿಲ್ಲ. ಪಶ್ಚಿಮ ಮಹಾರಾಷ್ಟ್ರ, ಮರಾಠವಾಡ, ವಿದರ್ಭ ಪ್ರಾಂತ್ಯಗಳ ಶಾಸಕರು ಏಕನಾಥ್ ಶಿಂಧೆ ಪ್ರಭಾವದಲ್ಲಿದ್ದಾರೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಐದು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಶಿವಸೇನೆ ಮತ್ತು ಎನ್​ಸಿಪಿ ಪಕ್ಷಗಳು ತಲಾ 2 ಸ್ಥಾನಗಳಲ್ಲಿ ಜಯಗಳಿಸಿವೆ. 10 ಸ್ಥಾನಕ್ಕೆ ಬಿಜೆಪಿ ಐದು ಮತ್ತು ಮಹಾವಿಕಾಸ್ ಅಘಾಡಿ ಆರು ಉಮೇದುವಾರರನ್ನು ನಿಲ್ಲಿಸಿತ್ತು. ಶಾಸಕರ ಸಂಖ್ಯೆ ಕಡಿಮೆಯಿದ್ದರೂ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲು ಬಿಜೆಪಿ ಯಶಸ್ವಿಯಾಗಿತ್ತು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 106 ಶಾಸಕರನ್ನು ಹೊಂದಿದೆ. ವಿಧಾನ ಪರಿಷತ್​ಗೆ ಅಗತ್ಯವಿರುವ ಮತಗಳು ಮೈತ್ರಿಕೂಟದ ಭಾಗವಾಗಿರುವ ಶಾಸಕರಿಂದ ಅಥವಾ ಸನ್ಣ ಪಕ್ಷಗಳಿಂದ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಪ್ರತಿಕ್ರಿಯಿಸಿದ್ದ ಬಿಜೆಪಿ ಶಾಸಕ ಪ್ರವೀಣ್ ದಾರೇಕರ್, ‘ಮಹಾರಾಷ್ಟ್ರ ಬಿಜೆಪಿಯಲ್ಲಿ ವಿಶ್ವಾಸ ತೋರಿಸಿದೆ. ಶಿವಸೇನೆ ಮತ್ತು ಕಾಂಗ್ರೆಸ್​ನ ಶಾಸಕರಿಂದ ನಮಗೆ ಮತಗಳು ಬಂದಿವೆ’ ಎಂದು ಹೇಳಿದ್ದರು. 20 ಅಡ್ಡಮತಗಳು ಚಲಾವಣೆಯಾಗಿರುವುದು ಖಾತ್ರಿಯಾದ ನಂತರ ಶಿವಸೇನೆ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಮಧ್ಯಾಹ್ನ (ಜೂನ್ 21) ತುರ್ತು ಸಭೆ ಕರೆದಿದ್ದರು. ಪಕ್ಷದ ಎಲ್ಲ ಶಾಸಕರೂ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದ್ದರು. ಆದರೆ ಸಿಎಂ ಸಂಪರ್ಕಕ್ಕೆ ಸಿಗದ

ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರ ಬಂಡಾಯ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, 2019ರಲ್ಲಿ ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಜನಾದೇಶ ಕೇಳಿದ್ದವು. ಚುನಾವಣೆ ಆದ ಮೇಲೆ ಜನಾದೇಶದ ವಿರುದ್ಧ ಅಲ್ಲಿ ಸರ್ಕಾರ ರಚನೆ ಆಗಿತ್ತು. ಇದೀಗ 2019ರ ಜನಾದೇಶಕ್ಕೆ ಮಾನ್ಯತೆ ಸಿಗುತ್ತದೆ ಎಂಬ ಭಾವಿಸಿದ್ದೇನೆ. ಮೋದಿ ಬಂದಾಗ ಬೆಂಗಳೂರಿನಲ್ಲಿ ಶಾಲಾ‌ ಕಾಲೇಜುಗಳಿಗೆ ರಜೆ ಕೊಟ್ಟಿದ್ದಕ್ಕೆ ಡಿ‌.ಕೆ.ಶಿವಕುಮಾರ್ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಮೋದಿ ಜಗತ್ತಿನ ನಾಯಕ. ಅವರಿಗೆ ಎಲ್ಲಾ ರೀತಿಯ ಭದ್ರತೆ ಕೊಡುವುದು ಅವಶ್ಯಕ. ವಿದ್ಯಾರ್ಥಿಗಳು ಟೆರರಿಸ್ಟ್ ಎಂದು ನಾವು ಹೇಳಿಲ್ಲ. ಇಂಥ ಮಾತನ್ನು ಡಿ.ಕೆ.ಶಿವಕುಮಾರ್ ಮಾತ್ರ ಹೇಳಬಹುದು. ವಿದ್ಯಾರ್ಥಿಗಳ‌ ಓಡಾಟಕ್ಕೆ ತೊಂದರೆ ಆಗುತ್ತದೆ ಅಂತ ರಜೆ ಕೊಟ್ಟಿದ್ದಾರೆ’ ಎಂದು ಹೇಳಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Tue, 21 June 22