ಬಿಜೆಪಿ ನಿರ್ಧಾರಗಳಿಗೂ ನನಗೂ ಸಂಬಂಧವಿಲ್ಲ ಎಂದ ಮಂಡ್ಯ ಸಂಸದೆ ಸುಮಲತಾ; ಬೆಂಬಲದ ಬಗ್ಗೆ ಹೇಳಿದ್ದೇನು?

| Updated By: ಗಣಪತಿ ಶರ್ಮ

Updated on: Aug 19, 2023 | 1:40 PM

Mandya MP Sumalatha Ambareesh Reaction on BJP decisions; ಎಲ್ಲವನ್ನೂ ನನ್ನ ಬಳಿ ಕೇಳಿಯೇ ಬಿಜೆಪಿಯವರು ಮಾಡಬೇಕು ಎಂಬುದೇನೂ ಇಲ್ಲ. ಮೈತ್ರಿ ನೆಲೆಯಲ್ಲಿ ಏನು ಮಾತನಾಡಬೇಕೋ ಅಷ್ಟೇ ಹೇಳಬಹುದಲ್ಲದೆ ಪ್ರತಿಯೊಂದು ವಿಷಯದಲ್ಲಿಯೂ ನಾನು ಮಧ್ಯಪ್ರವೇಶಿಸಲಾಗದು ಎಂದು ಸುಮಲತಾ ಹೇಳಿದ್ದಾರೆ.

ಮಂಡ್ಯ, ಆಗಸ್ಟ್ 19: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh), ಬಿಜೆಪಿ (BJP) ನಿರ್ಧಾರಗಳಿಗೂ ನನಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ಬಿಜೆಪಿಗೆ ನೀಡಿರುವ ಬೆಂಬಲ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನಾಯಕರು ಮಾಡಿರುವ ಆರೋಪಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೂ ನನಗೂ ಸಂಬಂಧವಿಲ್ಲ. ಯಾರು ಆರೋಪ ಮಾಡಿದ್ದಾರೆಯೋ ಅವರೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಿರುವಾಗ ಆ ವಿಚಾರವಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಸುಮಲತಾ ಹೇಳಿದ್ದೇನು?

ನಾನು ಬಿಜೆಪಿ ಸಂಸದೆ ಅಲ್ಲ, ಸ್ವತಂತ್ರ ಅಭ್ಯರ್ಥಿಯಾಗಿ ಸಂಸದೆಯಾಗಿ ಆಯ್ಕೆಯಾದವಳು ಎಂಬುದನ್ನು ನೆನಪಿಟ್ಟುಕೊಳ್ಳಿ. ಬಿಜೆಪಿಗೆ ಬೆಂಬಲ ನೀಡಿರುವುದು. ನೀಡುತ್ತಿರುವುದು ನಿಜ. ಹಾಗೆಂದು ಅವರು ಕೈಗೊಂಡ ನಿರ್ಧಾರಗಳಿಗೂ ನನಗೂ ಸಂಬಂಧ ಇರುವುದಿಲ್ಲ. ಸ್ವತಂತ್ರವಾಗಿ ನನ್ನದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಲು ನನಗೂ ಸ್ವಾತಂತ್ರ್ಯವಿದೆ. ನನ್ನ ನಿಲುವು ಏನು ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ಪಕ್ಷದ ನಿಲುವಿನ ಬಗ್ಗೆ ಸಂಬಂಧಪಟ್ಟವರಲ್ಲಿ ಅಥವಾ ಪಕ್ಷದ ವಕ್ತಾರರ ಬಳಿ ಕೇಳಬಹುದು ಎಂದು ಸುಮಲತಾ ಹೇಳಿದ್ದಾರೆ.

ಎಲ್ಲವನ್ನೂ ನನ್ನ ಬಳಿ ಕೇಳಿಯೇ ಬಿಜೆಪಿಯವರು ಮಾಡಬೇಕು ಎಂಬುದೇನೂ ಇಲ್ಲ. ಮೈತ್ರಿ ನೆಲೆಯಲ್ಲಿ ಏನು ಮಾತನಾಡಬೇಕೋ ಅಷ್ಟೇ ಹೇಳಬಹುದಲ್ಲದೆ ಪ್ರತಿಯೊಂದು ವಿಷಯದಲ್ಲಿಯೂ ನಾನು ಮಧ್ಯಪ್ರವೇಶಿಸಲಾಗದು ಎಂದು ಸುಮಲತಾ ಹೇಳಿದ್ದಾರೆ.

ಇದನ್ನೂ ಓದಿ: Karnataka Politics: ಬಿಜೆಪಿಗೆ ಮತ್ತೆ ಅನಿವಾರ್ಯವಾದರೇ ಬಿಎಸ್ ಯಡಿಯೂರಪ್ಪ, ಇತ್ತೀಚಿನ ಬೆಳವಣಿಗೆಗಳು ಹೇಳುವುದೇನು?

ಬಿಜೆಪಿಯ ನಿರ್ಧಾರಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಲಾರೆ. ಹಾಗೆಂದು ನನ್ನ ಸ್ವಂತ ಅಭಿಪ್ರಾಯ ನನ್ನದು. ಪಕ್ಷದ ನಿಲುವನ್ನು ನನ್ನ ಬಳಿ ತಿಳಿಸಿ, ಅದರ ಬಗ್ಗೆ ನನಗೆ ಸಹಮತ ಮೂಡಿದರೆ ಖಂಡಿತಾ ಬೆಂಬಲಿಸುತ್ತೇನೆ. ಈ ವಿಚಾರದಲ್ಲಿ ಅಷ್ಟು ಬೆಳವಣಿಗೆ ಆಗಿಲ್ಲ. ಈಗ ಸಭೆ ನಡೆದ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಅವರು ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ