ಆಪರೇಷನ್ ಹಸ್ತ: 20 ಶಾಸಕರಿಗೆ ಕಾಂಗ್ರೆಸ್ ಹೈಕಮಾಂಡ್ ಗಾಳ, ಹೊಸ ಬಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ

| Updated By: Rakesh Nayak Manchi

Updated on: Aug 20, 2023 | 8:12 PM

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತ ಗಾಳಿ ಜೋರಾಗಿಯೇ ಬೀಸುತ್ತಿದೆ. ಸುಮಾರು 20 ಶಾಸಕರು ಕಾಂಗ್ರೆಸ್ ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳುವ ಮೂಲಕ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್​ ನಾಯಕರ ನಿದ್ದೆಗೆಡಿಸುವಂತೆ ಮಾಡಿದ್ದಾರೆ.

ಆಪರೇಷನ್ ಹಸ್ತ: 20 ಶಾಸಕರಿಗೆ ಕಾಂಗ್ರೆಸ್ ಹೈಕಮಾಂಡ್ ಗಾಳ, ಹೊಸ ಬಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Follow us on

ಚಾಮರಾಜನಗರ, ಆಗಸ್ಟ್ 20: ವಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಹರಸಾಹಸ ಪಡುತ್ತಿರುವ ಬಿಜೆಪಿಗೆ (BJP) ಆಪರೇಷನ್ ಹಸ್ತದ (Operation Hasta) ಚಿಂತೆ ಕಾಡಲಾರಂಭಿಸಿದೆ. ಸುಮಾರು 20 ಶಾಸಕರು ಕಾಂಗ್ರೆಸ್ (Congress) ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳುವ ಮೂಲಕ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ (JDS)​ ನಾಯಕರ ನಿದ್ದೆಗೆಡಿಸುವಂತೆ ಮಾಡಿದ್ದಾರೆ.

ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದು ರಾಜ್ಯಭಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಈಗ ಲೋಕಸಭಾ ಚುನಾವಣೆಗೂ ಮುನ್ನವೇ ಮತ್ತೊಂದು ಹೊಸ ಟಾಸ್ಕ್​​ಗೆ ಕೈ ಹಾಕಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದ ಶಾಸಕರ ಮೇಲೆ ಕಣ್ಣಿಟ್ಟಿದ್ದು, ಇವರೊಂದಿಗೆ ಜೆಡಿಎಸ್​​ನ 10 ಶಾಸಕರ ಮೇಲೆಯೂ ಕಣ್ಣಿಟ್ಟಿದೆ.

ಅಪರೇಷನ್ ಹಸ್ತ ಮಾಡುವ ಮೂಲಕ ರಾಜ್ಯ ಬಿಜೆಪಿ ಹಾಗೂ ದಳಪತಿಗಳಿಗೆ ಟಕ್ಕರ್ ಕೊಡಲು ಮುಂದಾಗಿದೆ. ಅದರ ಮುಂದುವರೆದ ಭಾಗವಾಗಿ ಇಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಗಡಿನಾಡು ಚಾಮರಾಜನಗರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಬರೋಬ್ಬರಿ 20 ಮಂದಿ ಶಾಸಕರು ಕೈ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆಂದು ಮಾರ್ಮಿಕವಾಗಿ ಹೇಳಿಕೆ ಕೊಟ್ಟು ಬಿಜೆಪಿ ಹಾಗೂ ಜೆಡಿಎಸ್ ಪಾಳಯದವರ ನಿದ್ದೆಗೆಡಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ಹಸ್ತ​ ಸದ್ದು-ಗದ್ದಲದ ಮಧ್ಯೆ ಸಿದ್ದರಾಮಯ್ಯ ಭೇಟಿಯಾದ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಜಾರಕಿಹೊಳಿ, ಬಿಜೆಪಿಯವರ ಬಗ್ಗೆ 24 ಗಂಟೆಗಳ ಕಾಲ ಅಲರ್ಟ್ ಆಗಿರಬೇಕು. ಇಲ್ಲದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ರಾಜ್ಯ ನಾಯಕರು ಅಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ ಹಾಗೂ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಕೋರಿದ್ದಾರೆ.

ಸಹೋದರ ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಪಕ್ಷ ಸೆರ್ಪಡೆಯಾಗುತ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳುವ ಮೂಲಕ ರಾಜಕಾರಣದಲ್ಲಿ ಯಾರು ಶಾಶ್ವತ ಮಿತ್ರರೂ ಅಲ್ಲ ಶತ್ರುಗಳು ಅಲ್ಲಾ ಎಂಬ ಸಂದೇಶ ನೀಡಿದರು.

ಒಟ್ಟಾರೆ, ಲೋಕಸಭಾ ಚುನಾವಣೆ ಬೆನ್ನಲ್ಲೇ ಫುಲ್ ಆಕ್ಟೀವ್ ಆಗಿರುವ ಕೈ ಪಡೆ, ಆಪರೇಷನ್ ಹಸ್ತದ ಮೂಲಕ ಕೇಸರಿ ಪಡೆ ಹಾಗೂ ದಳಪತಿಗಳಿಗೆ ಶಾಕ್ ಕೋಡಲು ತಯಾರಿ ನಡೆಸಿದೆ. ಈ ರಾಜಕೀಯ ವಿಪ್ಲವ ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ಮುಟ್ಟುತ್ತೊ ಕಾದು ನೋಡಬೇಕಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ