ರಾಜ್ಯಸಭೆ ಚುನಾವಣೆ ನಾಮಪತ್ರಕ್ಕೆ ನಾಳೆ ಕೊನೆ ದಿನ: ಅಭ್ಯರ್ಥಿಯನ್ನ ಅಂತಿಮಗೊಳಿಸದ ಬಿಜೆಪಿ, ಜೆಡಿಎಸ್; ಇಂದು ಘೋಷಣೆ ಸಾಧ್ಯತೆ

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಹೆಚ್.ಡಿ. ದೇವೇಗೌಡ ಸ್ಪರ್ಧೆ ಮೇಲೆ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ನಿಲ್ಲಿಸಬೇಕೇ ಎಂಬುದು ನಿರ್ಧಾರವಾಗಲಿದೆ. ಸದ್ಯ ಸದಾನಂದ ಗೌಡ, ಸುಮಲತಾ, ಶ್ರುತಿ, ಮಂಜುಳಾ ಸೇರಿದಂತೆ ಹಲವು ನಾಯಕರ ಹೆಸರು ರೇಸ್‌ನಲ್ಲಿವೆ. ಇಂದು ಮಧ್ಯಾಹ್ನದ ಬಳಿಕ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ.

ರಾಜ್ಯಸಭೆ ಚುನಾವಣೆ ನಾಮಪತ್ರಕ್ಕೆ ನಾಳೆ ಕೊನೆ ದಿನ: ಅಭ್ಯರ್ಥಿಯನ್ನ ಅಂತಿಮಗೊಳಿಸದ ಬಿಜೆಪಿ, ಜೆಡಿಎಸ್; ಇಂದು ಘೋಷಣೆ ಸಾಧ್ಯತೆ
ಬಿಜೆಪಿ, ಜೆಡಿಎಸ್​
Image Credit source: google
Edited By:

Updated on: Jun 07, 2026 | 11:21 AM

ಬೆಂಗಳೂರು, ಜೂನ್​ 07: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನ. ಇತ್ತ ಬಿಜೆಪಿ (BJP) ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು (HD Deve Gowda) ಎನ್‌ಡಿಎ ಅಭ್ಯರ್ಥಿಯಾಗಿ ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಬಿಜೆಪಿ ಹೈಕಮಾಂಡ್ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇಂದು ಮಧ್ಯಾಹ್ನದ ಬಳಿಕ ಬಿಜೆಪಿ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ಒಂದು ವೇಳೆ ದೇವೇಗೌಡರು ಸ್ಪರ್ಧಿಸಲು ಒಪ್ಪದಿದ್ದರೆ, ಉಭಯ ಪಕ್ಷಗಳಿಗೂ ಸಮ್ಮತಿಯಾಗುವ ಹೋಟೆಲ್ ಉದ್ಯಮಿಯೊಬ್ಬರಿಗೆ ಟಿಕೆಟ್ ನೀಡುವ ಬಗ್ಗೆಯೂ ತೆರೆಮರೆಯ ಗಂಭೀರ ಚರ್ಚೆಗಳು ನಡೆಯುತ್ತಿವೆ.

ಮುಖ್ಯಾಂಶಗಳು

  • ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು
  • ರಾಜ್ಯಸಭೆಯ 1 ಸ್ಥಾನಕ್ಕೆ ರೇಸ್​ನಲ್ಲಿ ಮೂವರು
  • ಇಂದು ಮಧ್ಯಾಹ್ನದ ಬಳಿಕ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಸಾಧ್ಯತೆ

ಯಾರೆಲ್ಲಾ ರೇಸ್​ನಲ್ಲಿ? 

ಇನ್ನು ರಾಜ್ಯಸಭೆಯ ಆ ಒಂದು ಸ್ಥಾನಕ್ಕೆ ದೇವೇಗೌಡರು ಕಣಕ್ಕಿಳಿಯದಿದ್ದರೆ ಮಾತ್ರ ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಸದ್ಯ ಈ 1 ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ರೇಸ್​ನಲ್ಲಿ ಮೂವರು ಇದ್ದಾರೆ. ಮಾಜಿ ಸಿಎಂ ಡಿವಿ ಸದಾನಂದಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಹಿರಿಯ ನಾಯಕ ನಿರ್ಮಲ್ ಕುಮಾರ್ ಸುರಾನಾ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಆದರೆ ದೇವೇಗೌಡರು ಸ್ಪರ್ಧಿಸುವುದು ಖಚಿತವಾದರೆ, ಬಿಜೆಪಿ ಕೇವಲ ವಿಧಾನಪರಿಷತ್​​ನ ಎರಡು ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಲಿದೆ. ಹೀಗಾಗಿ ಹೈಕಮಾಂಡ್‌ನ ಮುಂದಿನ ನಿರ್ಧಾರದ ಮೇಲೆ ಇದೀಗ ಮೈತ್ರಿಕೂಟದ ಎಲ್ಲಾ ನಾಯಕರ ಕಣ್ಣು ನೆಟ್ಟಿದೆ.

ಮಹಿಳಾ ಮಣಿಗಳ ಮಧ್ಯೆ ತೀವ್ರ ಪೈಪೋಟಿ

ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲೂ ಬಿಜೆಪಿಯಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಆಕಾಂಕ್ಷಿಗಳ ರೇಸ್‌ನಲ್ಲಿ ನಟಿ ಶ್ರುತಿ, ಸಿ. ಮಂಜುಳಾ, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್, ಎನ್. ಮಹೇಶ್, ನಳೀನ್ ಕುಮಾರ್ ಕಟೀಲ್ ಹಾಗೂ ವೇಣುಗೋಪಾಲ್ ಇದ್ದಾರೆ. ಇವರಲ್ಲಿ ಮಹಿಳಾ ಕೋಟಾದಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ನಟಿ ಶ್ರುತಿ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ

ಪರಿಷತ್ ಟಿಕೆಟ್ ಹಂಚಿಕೆಯಲ್ಲಿ ‘ಒಬ್ಬ ಮಹಿಳೆ ಮತ್ತು ಒಬ್ಬ ಲಿಂಗಾಯತ’ ಅಥವಾ ‘ಒಬ್ಬ ಮಹಿಳೆ ಮತ್ತು ಒಬ್ಬ ಒಬಿಸಿ’ ಸೂತ್ರಕ್ಕೆ ಚಿಂತನೆ ನಡೆಸಲಾಗುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿರುವ ಪಟ್ಟಿಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟು ಹೊಸ ಮುಖಗಳಿಗೆ ಹೈಕಮಾಂಡ್​ ಮಣೆ ಹಾಕುವ ಸಾಧ್ಯತೆ ಕೂಡ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Kiran Haniyadka
Follow Us