ಬಜೆಟ್​​ ಮಂಡನೆ ವೇಳೆ ಭದ್ರತಾ ಲೋಪ: ಬಿಗಿ ಬಂದೋಬಸ್ತ್​ ಮಧ್ಯೆಯೂ ವಿಧಾನಸೌಧ ಹೊಕ್ಕ ವ್ಯಕ್ತಿ ಯಾರು?

ನಿನ್ನೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಮೊಳಕಾಲ್ಮೂರು ಎಂಎಲ್​ಎ ಅಂತ ಹೇಳಿ ಓವ್ ವ್ಯಕ್ತಿ ಸದನಕ್ಕೆ ಪ್ರವೇಶ ಮಾಡಿ ಅತಿದೊಡ್ಡ ಭದ್ರತಾಲೋಪ ಉಂಟಾಗಿತ್ತು. ಭದ್ರತಾಲೋಪ ಎಸಗಿದ ವ್ಯಕ್ತಿಯ ಹೆಸರು ತಿಪ್ಪೇರುದ್ರ ಸ್ವಾಮಿ. ಪೊಲೀಸ್ ಸರ್ಪಗಾವಲಿನ ಬಿಗಿ ಬಂದೋಬಸ್ತ್ ಇದ್ದಾಗಿಯೂ ವಿಧಾನಸೌಧ ಒಳಹೊಕ್ಕಿದ್ದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಜೆಟ್​​ ಮಂಡನೆ ವೇಳೆ ಭದ್ರತಾ ಲೋಪ: ಬಿಗಿ ಬಂದೋಬಸ್ತ್​ ಮಧ್ಯೆಯೂ ವಿಧಾನಸೌಧ ಹೊಕ್ಕ ವ್ಯಕ್ತಿ ಯಾರು?
ವಿಧಾನಸೌಧ ಒಳ ಪ್ರವೇಶ ಮಾಡಿದ ತಿಪ್ಪೇ ರುದ್ರ ಸ್ವಾಮಿ
Follow us
| Updated By: ಡಾ. ಭಾಸ್ಕರ ಹೆಗಡೆ

Updated on:Jul 08, 2023 | 5:31 PM

ಬೆಂಗಳೂರು: ನಿನ್ನೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಮೊಳಕಾಲ್ಮೂರು ಎಂಎಲ್​ಎ ಅಂತ ಹೇಳಿ ಓರ್ವ ವ್ಯಕ್ತಿ ಸದನಕ್ಕೆ ಪ್ರವೇಶ ಮಾಡಿ ಅತಿದೊಡ್ಡ ಭದ್ರತಾಲೋಪ (Security Lapse) ಉಂಟಾಗಿತ್ತು. ಭದ್ರತಾಲೋಪ ಎಸಗಿದ ವ್ಯಕ್ತಿಯ ಹೆಸರು ತಿಪ್ಪೇರುದ್ರ ಸ್ವಾಮಿ. ಇಷ್ಟಕ್ಕೂ ತಿಪ್ಪೇರುದ್ರ ಸ್ವಾಮಿ ಎಲ್ಲಿಂದ ಬಂದಿದ್ದರು, ಪೊಲೀಸ್ ಸರ್ಪಗಾವಲಿನ ಬಿಗಿ ಬಂದೋಬಸ್ತ್ ಇದ್ದಾಗಿಯೂ ವಿಧಾನಸೌಧ ಒಳಹೊಕ್ಕಿದ್ದು ಹೇಗೆ? ಯಾವ ಸಮಯದಲ್ಲಿ ವಿಧಾನಸೌಧಕ್ಕೆ ಯಾವ ಗೇಟ್ ಮೂಲಕ ಎಂಟ್ರಿ ಕೊಟ್ಟರು, ಇದಕ್ಕೂ ಮುನ್ನಾ ನಡೆದ ಘಟನೆಗಳೇನು ಅನ್ನೋದರ ಡಿಟೇಲ್ಸ್ ಇಲ್ಲಿದೆ.

ನಿನ್ನೆ ಬೆಳಗ್ಗೆ 10:30 ರ ವೇಳೆಗೆ ಚಿತ್ರದುರ್ಗದಿಂದ ಮೆಜೆಸ್ಟಿಕ್ ಬಸ್ ನಿಲ್ದಾಣ ತಲುಪಿದ್ದ ವೃದ್ದ ತಿಪ್ಪೇರುದ್ರ, ಮೆಜೆಸ್ಟಿಕ್ ಬಸ್ ನಿಲ್ದಾಣದ ಸಮೀಪದ ಹೋಟೆಲ್​ಗೆ ತೆರಳಿ 10:30 ರ ವೇಳೆಗೆ ತಿಂಡಿ ಮಾಡಿದ್ದಾರೆ‌. 11:15 ಕ್ಕೆ ಮೆಜೆಸ್ಟಿಕ್​ನಿಂದ ಆಟೋದ ಮೂಲಕ ವಿಧಾನಸೌಧದಲ್ಲಿ ಬಜೆಟ್ ವೀಕ್ಷಣೆ ಮಾಡಲು ವೀಕ್ಷಕರ ಪಾಸ್ ಹಿಡಿದು 11:45 ರ ವೇಳೆಗೆ ವಿಧಾನಸೌಧ್​ದ ಬಳಿಗೆ ತಿಪ್ಪೇರುದ್ರ ಬಂದಿಳಿದಿದ್ದಾರೆ.

ವಿಧಾನ ಸೌಧದ ಪಶ್ಚಿಮ ದ್ವಾರದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ದ್ವಾರದಲ್ಲೇ ವೃದ್ದ ತಿಪ್ಪೇರುದ್ರ ನನ್ನ ತಡೆದಿದ್ದಾರೆ. ಪಾಸ್ ಪರಿಶೀಲನೆ ವೇಳೆ ಜೂನ್ 3 ರಂದು ವಿಧಾನ ಸೌಧ ವೀಕ್ಷಣಗೆ ವೀಕ್ಷಕರ ಗ್ಯಾಲರಿಗೆ ಪಾಸ್ ಪಡೆದಿದ್ದು, ಅವಧಿ ಮುಗಿದಿದೆ, ಇಂದಿನ ಬಜೆಟ್ ಅಧಿವೇಶಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಪೊಲೀಸ್ ಸಿಬ್ಬಂದಿ ನಿರಾಕರಸಿ ವಾಪಾಸ್ ಕಳುಹಿಸಿದ್ದಾರೆ.

ಇದನ್ನೂ ಓದಿ: ಬಜೆಟ್ ವೇಳೆ ಸದನಕ್ಕೆ ಪ್ರವೇಶಿಸಿದ ವ್ಯಕ್ತಿ ಬಗ್ಗೆ ವಕೀಲರು ಹೇಳಿದ್ದೇನು?

76 ವರ್ಷದ ವೃದ್ದ ತಿಪ್ಪೇರುದ್ರ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದು, ಹೇಗಾದ್ರೂ ಮಾಡಿ‌ ಒಳ ಪ್ರವೇಶಿಸಲೇಬೇಕೆಂದು ಮತ್ತೆ ಕೆಂಗಲ್ ಗೇಟ್ ಬಳಿಗೆ ಬಂದಿದ್ದಾರೆ. ಸಾಮಾನ್ಯವಾಗಿ ಕೆಂಗಲ್ ಗೇಟ್ ಜನಪ್ರತಿನಿಧಿಗಳು ವಿಧಾನಸೌಧ ಸದನಕ್ಕೆ ತೆರಳುವ ದ್ವಾರ, ನಿನ್ನೆ ಬಜೆಟ್ ಅಧಿವೇಶನ ಹಿನ್ನಲೆ ರಾಜ್ಯದ ಎಲ್ಲಾ ಶಾಸಕರು ಬಜೆಟ್ ಮಂಡನೆ ವೇಳೆ ಎಂಟ್ರಿ ಕೊಡಲು ಕೆಂಗಲ್ ಗೇಟ್ ಬಳಿ ವಿಧಾನಸೌಧಕ್ಕೆ ಒಳಬರುವ ಗೇಟ್ ನಲ್ಲಿ ಆಗಮಿಸುವ ವೇಳೆ ಅದೇ ಗೇಟ್​ನ ಮೂಲಕವೇ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ವಿಧಾನಸೌಧ ಒಳಭಾಗಕ್ಕೆ 12:10 ರ ವೇಳೆಗೆ ಸೀದಾ ವಿಧಾನಸೌಧ ಸದನದ ಬಾವಿಗೆ ಎಂಟ್ರಿಯಾಗಲು ಮುಂದಾಗಿದ್ದಾನೆ.

ಈ ವೇಳೆ ಮಾರ್ಷಲ್​ಗಳು ಎಂದಿನಂತೆ ಭದ್ರತೆಗಾಗಿ ನಿಂತಿದ್ದವರು, ತಿಪ್ಪೇರುದ್ರನನ್ನ ತಡೆದು ವಿಚಾರಿಸಿದ್ದಾರೆ. ಮಾರ್ಷಲ್ ವಿಚಾರಿಸಿದಾಗ ತಾನು ಮೊಳಕಾಲ್ಮೂರು MLA ಎಂದಿದ್ದಾನೆ. ಎಂಎಲ್​ಎ ಎಂದು ಹೇಳುತ್ತಲೇ ಸಿಬ್ಬಂದಿ ಸುಮ್ಮನಾಗಿದ್ದಾರೆ.

12:10 ರ ವೇಳೆಗೆ ವಿಧಾನ ಸೌಧದ ಸದನದ ಬಾವಿಗೆ ಎಂಟ್ರಿ ಕೊಟ್ಟ ತಿಪ್ಪೇ ರುದ್ರ ಸೀದಾ ಹೋಗಿದ್ದು ಡಿಸಿಎಂ  ಡಿಕೆ ಶಿವಕುಮಾರ್ ಬಳಿಗೆ ಹೋಗಿ ಹ್ಯಾಂಡ್ ಶೇಕ್ ಮಾಡಿದ್ದಾನೆ. ಬಜೆಟ್ ಕೇಳಿಸಿಕೊಳ್ಳುವ ಬ್ಯುಸಿಯಲ್ಲಿದ್ದ ಅವರು ಹ್ಯಾಂಡ್ ಶೇಕ್ ಮಾಡಿದ್ದಾರೆ. ಅಲ್ಲಿಂದ ಜೆಡಿಎಸ್ ಶಾಸಕರಿಗೆ ಮೀಸಲಾಗಿದ್ದ ಸೆಷನ್​ನ ಆಸನಗಳ ಬಳಿಗೆ ಬಂದು, ದೇವದುರ್ಗದ ಶಾಸಕಿ ಕರಿಯಮ್ಮ ಮೀಸಲಾಗಿದ್ದ ಆಸನದಲ್ಲಿ ಕುಳಿತಿದ್ದಾನೆ.

ಅಷ್ಟರಲ್ಲಾಗಲೇ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಮಂಡಿಸಲು ಆರಂಭಿಸಿದ್ದರು. ಸದಸನದ ಸಿಬ್ಬಂದಿ ಸದನದಲ್ಲಿದ್ದ ಶಾಸಕರಿಗೆ ಬಜೆಟ್ ಪುಸ್ತಕಗಳನ್ನು ಹಂಚುತ್ತಿರುತ್ತಾರೆ. ಶಾಸಕಿ ಆಸನದಲ್ಲಿ ಕುಳಿತು ಸಿಬ್ಬಂದಿಯಿಂದ ಬಜೆಟ್ ಪುಸ್ತಕ ಸ್ವೀಕರಿಸಿದ ತಿಪ್ಪೇರುದ್ರ ಬಜೆಟ್ ಪುಸ್ತಕ ಓದಲು ಶುರುಮಾಡಿದ್ದಾರೆ‌.

ತಿಪ್ಪೇರುದ್ರ ಕುಳಿತಿದ್ದ ಆಸನದ ಸಮೀಪವೇ ಕುಳಿತಿದ್ದ ಗುರುಮಿಟಕಲ್ ಕ್ಷೇತ್ರದ ಶಾಸಕ ಶರಣ್ ಗೌಡ ಕುಂದಗೂರಿಗೆ ಈತನ ಕಂಡು ಅನುಮಾನಗೊಂಡಿದ್ದಾರೆ. ಕೂಡಲೇ ತಿಪ್ಪೇರುದ್ರ ನನ್ನ ತಾವು ಯಾರೆಂದು ಪ್ರಶ್ನಿಸುತ್ತಾರೆ‌. ತನ್ನನ್ನು ಮೊಳಕಾಲ್ಮೂರು MLA ಎಂದು ತಿಪ್ಪೇ ರುದ್ರ ಪರಿಚಯಿಸಿಕೊಂಡಿದ್ದಾನೆ.

ಮೊಳಕಾಲ್ಮೂರು ಶಾಸಕ ಗೋಪಾಲಕೃಷ್ಣ ಬಗ್ಗೆ ತಿಳಿದಿದ್ದ ಶಾಸಕ ಶರಣ ಗೌಡ ಕುಂದಗೂರ ಕಾಂಗ್ರೆಸ್ ಶಾಸಕ ಜೆಡಿಎಸ್ ವಿಧಾನ ಸಭಾ ಕ್ಷೇತ್ರದ MLA ಗಳಿಗೆ ಮೀಸಲಾಗಿರುವ ಆಸನದಲ್ಲಿ ಅಪರಿಚಿತ ವ್ಯಕ್ತಿ, ಮಹಿಳಾ ಶಾಸಕಿಗೆ ಮೀಸಲಾಗಿರುವ ಆಸನದಲ್ಲಿ ಕುಳಿತಿರುವುದು ಕಂಡು ಆಶ್ಚರ್ಯಗೊಂಡಿದ್ದಾರೆ. ಕೂಡಲೇ ಬಜೆಟ್ ಮಂಡನೆ ನಡುವೆಯೇ ಸ್ವೀಕರ್ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ‌.

ಇದನ್ನೂ ಓದಿ: ವಿಧಾನಸಭೆಯಲ್ಲಿ ಭದ್ರತಾ ಲೋಪ: ಬಜೆಟ್ ಮಂಡನೆ ವೇಳೆ ಸದನದಲ್ಲಿ ಬಂದು ಕುಳಿತ ಅನಾಮಿಕ ವ್ಯಕ್ತಿ

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಸ್ವೀಕರ್ ಗಮನ ಸೆಳೆಯಲಾಗದೇ, ಸೆಕ್ರೆಟರಿ ಗಮನಕ್ಕೆ ತಂದಿದ್ದಾರೆ. ಸೆಕ್ರೆಟರಿ ತಕ್ಷಣ ಅಲ್ಲಿದ್ದ ಮಾರ್ಷಲ್ ಒಟ್ಟಿಗೆ ತಿಪ್ಪೇ ರುದ್ರ ಕುಳಿತಿದ್ದ ಆಸನದ ಬಳಗೆ ಬಂದು ಸದನದಿಂದ ಹೊರ ಕರೆತಂದಿದ್ದಾರೆ.

ವಿಧಾನಸೌಧ ಪೊಲೀಸರಿಗೆ ತಿಪ್ಪೇ ರುದ್ರ ನನ್ನ ಒಪ್ಪಿಸಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ವಿಧಾನಸೌಧ ಪೊಲೀಸರು ತಿಪ್ಪೇರುದ್ರ ನನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ.

ವಿಧಾನ ಸೌಧ ಪೊಲೀಸರ ವಿಚಾರಣೆ ವೇಳೆ ತಿಪ್ಪೇ ರುದ್ರ (76) ಮೂಲತಃ ತಾನು ಚಿತ್ರದುರ್ಗ ನಿವಾಸಿಯಾಗಿದ್ದು, ವೃತ್ತಿಯಲ್ಲಿ ವಕೀಲನಾಗಿದ್ದೇನೆ ಎಂದಿದ್ದಾನೆ. ವಿಧಾನಸೌಧಕ್ಕೆ ಸೆಷನ್ ನೋಡಲು ಬಂದಿದ್ದಾಗಿ ಹೇಳಿದ್ದಾನೆ. ವಿಧಾನ ಸೌಧ ಪೊಲೀಸರು ವೃದ್ದ ತಿಪ್ಪೇ ರುದ್ರ MLA ಹೆಸರೇಳಿಕೊಂಡು, ವಿಧಾನ ಸೌಧಕ್ಕೆ ಅಕ್ರಮ ಪ್ರವೇಶ ಪಡೆದ ಹಿನ್ನಲೆ ಐಪಿಸಿ ಸೆಕ್ಷನ್ 448 ಮತ್ತು 419 ಅಡಿ FIR ದಾಖಲಿಸಿದ್ದಾರೆ.

ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿ ತಿಪ್ಪೇ ರುದ್ರ 76 ವರ್ಷದ ವೃದ್ದನಾದ ಕಾರಣ ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ವಿಧಾನ ಸೌಧ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:21 pm, Sat, 8 July 23