Siddaramaiah: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ, ಹೈಕಮಾಂಡ್ ಸಮ್ಮತಿಸಲ್ಲ; ಸಿದ್ದರಾಮಯ್ಯ

|

Updated on: Apr 04, 2023 | 2:20 PM

ನಾನು ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ. ಡಿಕೆ ಶಿವಕುಮಾರ್ ಅವರೂ ಆಕಾಂಕ್ಷಿ. ಆದರೆ, ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡಲಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ, ಇದನ್ನು ಅವರು ನಿರಾಕರಿಸಿದ್ದಾರೆ.

Siddaramaiah: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ, ಹೈಕಮಾಂಡ್ ಸಮ್ಮತಿಸಲ್ಲ; ಸಿದ್ದರಾಮಯ್ಯ
ಸಿದ್ದರಾಮಯ್ಯ
Image Credit source: PTI
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಜೋರಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಣ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿ ಕಾಣಿಸಿಕೊಳ್ಳಲಾರಂಭವಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಕಾಂಗ್ರೆಸ್​​ನ ಆಂತರಿಕ ಭಿನ್ನಮತ ಸ್ಫೋಟಗೊಳ್ಳುವ ಸುಳಿವು ದೊರೆತಿದೆ. ‘ಎನ್​ಡಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ. ಡಿಕೆ ಶಿವಕುಮಾರ್ ಅವರೂ ಆಕಾಂಕ್ಷಿ. ಆದರೆ, ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡಲಾರದು ಎಂದು ಹೇಳಿದ್ದಾರೆ ಎಂಬುದಾಗಿ ‘ಎನ್​ಡಿ ಟಿವಿ’ ವೆಬ್​ಸೈಟ್ ವರದಿ ಉಲ್ಲೇಖಿಸಿದೆ. ಆದರೆ, ಇದನ್ನು ಅಲ್ಲಗಳೆದಿರುವ ಸಿದ್ದರಾಮಯ್ಯ, ನನ್ನ ಹೇಳಿಕೆಯನ್ನು ತಿರುಚಿ ವರದಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಡಿಕೆ ಶಿವಕುಮಾರ್ 2020ರಲ್ಲಿ ದಿನೇಶ್ ಗುಂಡೂರಾವ್ ಅವರ ನಂತರ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಕಿರಿಯ ವ್ಯಕ್ತಿಗೆ ಉನ್ನತ ಹುದ್ದೆಯ ಅವಕಾಶ ಯಾಕೆ ನೀಡಬಾರದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇದು ತಾನು ಸ್ಪರ್ಧಿಸುವ ಕೊನೆಯ ಚುನಾವಣೆ ಎಂದಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ದಶಕದಿಂದ ಇರುವ ಪೈಪೋಟಿಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ರಾಜ್ಯದ ಮೂಲಕ ಹಾದುಹೋದಾಗ ತುಸು ವಿರಾಮ ದೊರೆತಿತ್ತು. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಉಭಯ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದರು.

ಇದನ್ನೂ ಓದಿ: Siddaramaiah: ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘಿಸಿದರೇ ಸಿದ್ದರಾಮಯ್ಯ?

ಆದರೆ, ಫೆಬ್ರುವರಿಯಲ್ಲಿ ಉಭಯ ನಾಯಕರು ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರತ್ಯೇಕ ಬಸ್ ಯಾತ್ರೆಗಳನ್ನು ಕೈಗೊಂಡಿದ್ದರು. ಆದರೆ, ಇಬ್ಬರೂ ನಾಯಕರೂ ಒಗ್ಗಟ್ಟಾಗಿದ್ದಾರೆ. ಒಗ್ಗಟ್ಟಿನ ಹೋರಾಟದ ಅಗತ್ಯದ ಬಗ್ಗೆ ಅವರಿಬ್ಬರಿಗೆ ಅರಿವಿದೆ ಎಂದು ಪಕ್ಷದ ಇತರ ಹಿರಿಯ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಹೆಚ್ಚಿನ ವಿಷಯಗಳಲ್ಲಿ ಇಬ್ಬರಲ್ಲಿ ಒಮ್ಮತ ಮೂಡಿದ್ದರೂ, ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯ ವಿಚಾರದಲ್ಲಿ ಇಬ್ಬರಲ್ಲೂ ಬಲವಾದ ಭಿನ್ನಮತ ಇರುವುದು ಈ ಹಿಂದೆಯೂ ಹಲವು ಬಾರಿ ಪ್ರಕಟಗೊಂಡಿದೆ.

ರಾಜ್ಯದಲ್ಲಿ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 23ರ ಒಳಗಾಗಿ ನೂತನ ಸರ್ಕಾರ ರಚನೆಯಾಗಬೇಕಿದೆ.

ತಿರುಚಿದ ವರದಿ; ಸಿದ್ದರಾಮಯ್ಯ ಸ್ಪಷ್ಟನೆ

ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಾನು ಆಡದ ಮಾತುಗಳನ್ನು ಉಲ್ಲೇಖಿಸಿ ‘ಎನ್​ಡಿ ಟಿವಿ’ ವರದಿಯೊಂದನ್ನು ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದ್ದಾಗಿದೆ. ಎನ್​ಡಿ ಟಿವಿ ತಕ್ಷಣ ಈ ಬರಹವನ್ನು ಅಳಿಸಿಹಾಕಿ ತಿದ್ದುಪಡಿ ಪ್ರಕಟಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸ್ಪಷ್ಟನೆ : ಡಿಕೆ ಶಿವಕುಮಾರ್​ ಅವರನ್ನು ಹೈಕಮಾಂಡ್​ ಸಿಎಂ ಮಾಡಲ್ಲ ಎಂದು ನಾನು ಹೇಳಿಲ್ಲ


ಈ ಬಗ್ಗೆ ಎನ್​​ಡಿ ಟಿವಿ ವರದಿಯ ಸ್ಕ್ರೀನ್​ಶಾಟ್ ಲಗತ್ತಿಸಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ನಮ್ಮ ಪಕ್ಷದ ಮುಂದಿನ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ಕೂಡಿ ಆಯ್ಕೆ ಮಾಡಲಿದೆ ಎನ್ನುವುದನ್ನು ನೂರು ಸಲ ಹೇಳಿದ್ದೇನೆ. ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ವಿರೋಧ ಪಕ್ಷಗಳ ಹುನ್ನಾರಕ್ಕೆ ಮಾಧ್ಯಮಗಳು ಆಯುಧವಾಗಿ ಬಳಕೆಯಾಗಬಾರದು ಎಂದು ಉಲ್ಲೇಖಿಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:00 pm, Mon, 3 April 23