ಇವನ್ಯಾವನು ನನ್ನನ್ನು ಸಿದ್ರಾಮುಲ್ಲಾ ಖಾನ್ ಅನ್ನೋಕೆ?: ಸಿ.ಟಿ.ರವಿ ಕ್ಷೇತ್ರದಲ್ಲಿ ನಿಂತು ಅಬ್ಬರಿಸಿದ ಸಿದ್ದರಾಮಯ್ಯ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಹಿಂದೆ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಾ ಸಿದ್ರಾಮುಲ್ಲಾ ಖಾನ್ ಎಂದು ಹೆಸರಿಟ್ಟಿದ್ದರು. ಈ ಬಗ್ಗೆ ಅಂದು ಸೈಲೆಂಟ್ ಆಗಿದ್ದ ಸಿದ್ದರಾಮಯ್ಯ ಇದೀಗ ಅವರ ಕ್ಷೇತ್ರದಲ್ಲಿ ನಿಂತು ಸಿ.ಟಿ.ರವಿ ವಿರುದ್ಧ ವಗ್ದಾಳಿ ನಡೆಸಿದ್ದಾರೆ.

ಇವನ್ಯಾವನು ನನ್ನನ್ನು ಸಿದ್ರಾಮುಲ್ಲಾ ಖಾನ್ ಅನ್ನೋಕೆ?: ಸಿ.ಟಿ.ರವಿ ಕ್ಷೇತ್ರದಲ್ಲಿ ನಿಂತು ಅಬ್ಬರಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಮತ್ತು ಸಿ.ಟಿ.ರವಿ
Edited By: Rakesh Nayak Manchi

Updated on: Jan 21, 2023 | 9:12 PM

ಚಿಕ್ಕಮಗಳೂರು: ತನ್ನನ್ನು ಸಿದ್ರಾಮುಲ್ಲಾ ಖಾನ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಅವರು ಹೇಳಿದ್ದರೂ ಅಂದು ಸೈಲೆಂಟ್ ಆಗಿದ್ದ ಸಿದ್ದರಾಮಯ್ಯ (Siddaramaiah) ಇಂದು ಸಿ.ಟಿ.ರವಿ ಕ್ಷೇತ್ರಕ್ಕೆ ಕಾಲಿಟ್ಟು ಅವರ ವಿರುದ್ಧವೇ ಅಬ್ಬರಿಸಿದ್ದಾರೆ. ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ ನಡೆದ ಕಾಂಗ್ರೆಸ್​ನ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಮ್ಮಪ್ಪ ಹೆಸರಿಟ್ಟಿಲ್ವಾ? ನಾನು ಹಿಂದೂ ಅಲ್ವಾ? ಇವನ್ಯಾವನು ನನ್ನನ್ನು ಸಿದ್ರಾಮುಲ್ಲಾ ಖಾನ್ ಅನ್ನೋಕೆ ಎಂದು ಏಕವಚನದಲ್ಲೇ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಮ್ ಸಮುದಾಯಕ್ಕೆ ನಾನು ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ ಎಂದು ಸಿ.ಟಿ.ರವಿ ಸಿದ್ರಾಮುಲ್ಲಾ ಖಾನ್ ಹೇಳಿಕೆಗೆ ನಯವಾಗಿ ತಿರುಗೇಟು ನೀಡಿದ್ದರು. ಆದರೀಗ ಇವನ್ಯಾರು ಸಿದ್ರಾಮುಲ್ಲಾ ಖಾನ್ ಅನ್ನೋಕೆ ಎಂದು ಪ್ರಶ್ನಿಸಿದ್ದಾರೆ.

ಟಿಪ್ಪು ಜಯಂತಿ ಆರಂಭಿಸಿದ್ದು, ಅಲ್ಪಸಂಖ್ಯಾತರ ಓಲೈಕೆ, ಒಂದು ಸಮುದಾಯದ ಓಲೈಕೆಗಾಗಿ ಶಾದಿ ಭಾಗ್ಯ ಜಾರಿ ಮಾಡಿರುವುದು, ಪಿಎಫ್​ಐ ಗೂಂಡಾಗಳ ಮೇಲಿನ ಪ್ರಕರಣ ವಾಪಸ್ ಪಡೆದಿದ್ದು, ಇಸ್ಲಾಮಿಕ್ ಭಯೋತ್ಪಾದನೆಯನ್ನು ಒಪ್ಪದಿರುವುದಕ್ಕೆ, ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್‌ ಉನ್ನಿಕೃಷ್ಣನ್‌‌ರವರ ವೀರಗಾಥೆಯುಳ್ಳ ಕರಾಳ ರಾತ್ರಿ ಪಾಠ ಕೈಬಿಟ್ಟಿರುವುದು ಸೇರಿದಂತೆ ಅನೇಕ ಕಾರಣಗಳನ್ನು ನೀಡಿ ನಾವು ಸಿದ್ರಾಮುಲ್ಲಾ ಖಾನ್ ಎಂದು ಕರೆಯುವುದು ಇದಕ್ಕೇ ಎಂದು ಬಿಜೆಪಿ ಹೇಳಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ಅಖಾಡಕ್ಕಿಳಿದ ಸಂಘಟನಾ ಚತುರ, ಕೋಲಾರದಲ್ಲಿ ಬಿಜೆಪಿ ಗೆಲುವಿಗೆ ಸಂತೋಷ್ ‘ಸೂತ್ರ’

ಸಿ.ಟಿ.ರವಿಯಿಂದ ನಾವು ಪ್ರಾಮಾಣಿಕತೆಯ ಪಾಠ ಕಲಿಯಬೇಕಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮಿಸ್ಟರ್ ಸಿ.ಟಿ.ರವಿ, 40 ಪರ್ಸೆಂಟ್ ಸರ್ಕಾರ ಎಂದು ಹಿಂದೆಂದು ಯಾವ ಪಕ್ಷಕ್ಕೂ ಹೇಳಿಲ್ಲ. ಏನು ಹೇಳ್ತೀಯಪ್ಪಾ… ಮಿಸ್ಟರ್ ಸಿ.ಟಿ.ರವಿ.. ನನ್ನ ಮೇಲೆ ಈ ರೀತಿ ಒಬ್ಬನೇ ಒಬ್ಬ ಆರೋಪ ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ಈ ಸರ್ಕಾರ (ಬಿಜೆಪಿ) ಎಲ್ಲದಕ್ಕೂ ಹಣ, ಹಣ ಅಂತಿದೆ, ಈ ಸರ್ಕಾರ ಬೇಕಾ ನಿಮಗೆ ಎಂದು ಪ್ರಶ್ನಿಸಿ ಆರ್​ಎಸ್​ಎಸ್​ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಗಾಂಧೀಜಿಯನ್ನು ಕೊಂದ ಪರಿವಾರಕ್ಕೆ ಸಿ.ಟಿ.ರವಿ ಸೇರಿದವರು ಎಂದು ಟೀಕಿಸಿದ ಸಿದ್ದರಾಮಯ್ಯ, ದತ್ತಮಾಲೆ ಬಗ್ಗೆಯೂ ಮಾತನಾಡಿದರು. ಯಾರು ಕೂಡ ಮಾಲೆಗೆ ಮಾರು ಹೋಗಬೇಡಿ, ದಾರಿ ತಪ್ಪುಸುತ್ತಾರೆ ಎಂದರು. ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾ ವಿಚಾರವಾಗಿ ಹಲವು ವರ್ಷಗಳಿಂದ ಹಿಂದೂ-ಮುಸ್ಲಿಂ ನಡುವೆ ವಿವಾದ ಇದೆ.

ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Sat, 21 January 23

Web contact

TV9 Kannada

Read More
Follow Us