AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಕ್ರಮ ವಲಸಿಗರಿಗೆ ಮಣೆ, ಭದ್ರತೆಗೆ ಧಕ್ಕೆ’: ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣ ಪತ್ರಕ್ಕೆ ತಡೆನೀಡಲು ಅಮಿತ್ ಶಾಗೆ ಶೋಭಾ ಪತ್ರ

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಶಾಶ್ವತ ವಸತಿ ಪ್ರಮಾಣಪತ್ರ (PRC)’ ನಿಯಮಾವಳಿಗಳು ಸಂವಿಧಾನ ವಿರೋಧಿ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಿವೆ ಎಂದು ಆರೋಪಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಈ ನಿಯಮಾವಳಿಗಳ ಅನುಷ್ಠಾನ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ, ಇದಕ್ಕೆ ತಡೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಅಕ್ರಮ ವಲಸಿಗರಿಗೆ ಮಣೆ, ಭದ್ರತೆಗೆ ಧಕ್ಕೆ’: ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣ ಪತ್ರಕ್ಕೆ ತಡೆನೀಡಲು ಅಮಿತ್ ಶಾಗೆ ಶೋಭಾ ಪತ್ರ
ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಪತ್ರImage Credit source: tv9
ಗಣಪತಿ ಶರ್ಮಾ
|

Updated on: Jul 10, 2026 | 11:23 AM

Share

ಮುಖ್ಯಾಂಶಗಳು

  • ರಾಜ್ಯದ ಶಾಶ್ವತ ವಸತಿ ಪ್ರಮಾಣಪತ್ರ ನಿಯಮಕ್ಕೆ ಶೋಭಾ ಕರಂದ್ಲಾಜೆ ತೀವ್ರ ವಿರೋಧ
  • ಅಕ್ರಮ ವಲಸಿಗರಿಗೆ ಪ್ರಮಾಣಪತ್ರ ಸಿಗುವ ಆತಂಕ ವ್ಯಕ್ತಪಡಿಸಿದ ಸಚಿವೆ
  • ಆದೇಶಕ್ಕೆ ತಡೆ ನೀಡುವಂತೆ ಅಮಿತ್ ಶಾಗೆ ಪತ್ರ

ಬೆಂಗಳೂರು, ಜುಲೈ 10: ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ‘ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ (PRC) – 2026’ ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಈ ಆದೇಶವು ಭಾರತದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತದಲ್ಲದೆ, ದೇಶದ ಆಂತರಿಕ ಭದ್ರತೆಗೆ ದೊಡ್ಡ ಕಂಟಕವಾಗಲಿದೆ ಎಂದು ಆರೋಪಿಸಿರುವ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಸಂವಿಧಾನದ 14ನೇ ವಿಧಿಯ ಉಲ್ಲಂಘನೆ: ಶೋಭಾ

ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೂ ಒಂದೇ ಪೌರತ್ವವನ್ನು (ಏಕ ಪೌರತ್ವ) ಕಲ್ಪಿಸಿದೆ. ಆದರೆ ಕರ್ನಾಟಕ ಸರ್ಕಾರವು ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ ‘ಶಾಶ್ವತ ನಿವಾಸಿಗಳು’ ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಹೊರಟಿರುವುದು ಕಾನೂನುಬಾಹಿರವಾಗಿದೆ. ಇದು ಸಂವಿಧಾನದ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ 14ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ಅಮಿತ್ ಶಾಗೆ ಬರೆದಿರುವ ಪತ್ರದಲ್ಲಿ ಶೋಭಾ ಕರಂದ್ಲಾಜೆ ಉಲ್ಲೇಖಿಸಿದ್ದಾರೆ.

ರಾಷ್ಟ್ರೀಯ ಭದ್ರತೆಗೆ, ಅಕ್ರಮ ವಲಸಿಗರಿಗೆ ಮಣೆ ಆತಂಕ

ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇವಲ ಸ್ಥಳೀಯ ಕಂದಾಯ ಅಧಿಕಾರಿಗಳ ಪರಿಶೀಲನೆ ಮತ್ತು ಸ್ಥಳೀಯ ದಾಖಲೆಗಳ ಆಧಾರದ ಮೇಲೆ ಈ ಪ್ರಮಾಣಪತ್ರವನ್ನು ನೀಡಲು ಉದ್ದೇಶಿಸಲಾಗಿದೆ. ಇದರಲ್ಲಿ ಭಾರತೀಯ ಪೌರತ್ವವನ್ನು ಕೇಂದ್ರ ಏಜೆನ್ಸಿಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸುವ ಯಾವುದೇ ದೃಢವಾದ ವ್ಯವಸ್ಥೆ ಇಲ್ಲ. ಇದರಿಂದಾಗಿ ದೇಶದೊಳಗೆ ಅಕ್ರಮವಾಗಿ ನುಸುಳಿರುವ ವಿದೇಶಿ ಪ್ರಜೆಗಳು ಅಥವಾ ಅಕ್ರಮ ವಲಸಿಗರು ಸುಲಭವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ‘ಶಾಶ್ವತ ವಸತಿ ಪ್ರಮಾಣಪತ್ರ’ ಪಡೆಯುವ ಅಪಾಯವಿದೆ. ಒಮ್ಮೆ ಈ ಪ್ರಮಾಣಪತ್ರ ಕೈಸೇರಿದರೆ, ಅದನ್ನು ಬಳಸಿ ಅವರು ಸರ್ಕಾರದ ಸವಲತ್ತುಗಳು, ಶೈಕ್ಷಣಿಕ ಪ್ರವೇಶಾತಿ ಹಾಗೂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ. ಇದು ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಹೊರಹಾಕುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಹಿನ್ನಡೆ ಉಂಟುಮಾಡುತ್ತದೆ ಎಂದು ಶೋಭಾ ಕರಂದ್ಲಾಜೆ ಕಳವಳ ವ್ಯಕ್ತಪಡಿಸಿದ್ದಾರೆ.

ಅನುಷ್ಠಾನಕ್ಕೆ ತಡೆ ನೀಡಲು ಕೇಂದ್ರಕ್ಕೆ ಮನವಿ

ಪೌರತ್ವ, ವಲಸೆ ಮತ್ತು ದೇಶದ ಆಂತರಿಕ ಭದ್ರತೆಯ ವಿಷಯಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ರಾಜ್ಯ ಸರ್ಕಾರಗಳು ಇಂತಹ ಕಾಯ್ದೆ ತರುವುದರಿಂದ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬರುತ್ತದೆ ಎಂದು ಪ್ರತಿಪಾದಿಸಿರುವ ಶೋಭಾ ಕರಂದ್ಲಾಜೆ, ಕೇಂದ್ರ ಗೃಹ ಸಚಿವಾಲಯಕ್ಕೆ ಕೆಲವು ಪ್ರಮುಖವಾಗಿ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳು ಹೀಗಿವೆ;

  • ಕರ್ನಾಟಕದ ಪರ್ಮನೆಂಟ್ ರೆಸಿಡೆನ್ಶಿಯಲ್ ಸರ್ಟಿಫಿಕೇಟ್ (PRC) ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಬೇಕು.
  • ಈ ಪರಿಶೀಲನೆ ಮುಗಿಯುವವರೆಗೆ ಅಧಿಸೂಚನೆಯ ಅನುಷ್ಠಾನಕ್ಕೆ ತಕ್ಷಣವೇ ತಡೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.
  • ಯಾವ ಅಧಿಕಾರದ ಅಡಿಯಲ್ಲಿ ಈ ನಿಯಮ ತರಲಾಗಿದೆ ಎಂದು ರಾಜ್ಯ ಸರ್ಕಾರದಿಂದ ವರದಿ ಕೇಳಬೇಕು.
  • ಕೇಂದ್ರ ಏಜೆನ್ಸಿಗಳಿಂದ ಪೌರತ್ವ ಪರಿಶೀಲನೆ ಆಗದ ಹೊರತು ಯಾವುದೇ ಪ್ರಮಾಣಪತ್ರ ವಿತರಿಸದಂತೆ ಕ್ರಮ ಕೈಗೊಳ್ಳಬೇಕು.

ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ, ಸಾಮಾನ್ಯ ಪ್ರಶ್ನೋತ್ತರಗಳು (FAQs)

ಪ್ರಶ್ನೆ: ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ ಪಡೆಯಲು ಅರ್ಹತೆ ಏನು?

ಉತ್ತರ: ಕರ್ನಾಟಕದಲ್ಲಿ ಜನನ-ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಜನಿಸಿರಬೇಕು. ಅರ್ಜಿದಾರರು ಅಥವಾ ಅವರ ತಂದೆ, ತಾಯಿ ಅಥವಾ ಕಾನೂನು ಬದ್ಧ ಪಾಲಕರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಿರಬೇಕು. ಮತ್ತಷ್ಟು ಅರ್ಹತೆಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪ್ರಶ್ನೆ: ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಏನೆಲ್ಲ ದಾಖಲೆ ಬೇಕು?

ಉತ್ತರ: ಆಧಾರ್‌, ಪಡಿತರ ಚೀಟಿ, ಕಂದಾಯ ದಾಖಲೆಗಳು ಅಥವಾ ಇತರೆ ಸರ್ಕಾರಿ ದಾಖಲೆಗಳಲ್ಲಿ ಅರ್ಜಿದಾರರು ಅಥವಾ ಅವರ ಪೋಷಕರ ಹೆಸರು ಸಾಮಾನ್ಯ ನಿವಾಸಿಯಾಗಿ ದಾಖಲಾಗಿರಬೇಕು. ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುವ ವ್ಯಕ್ತಿಯನ್ನು ವಿವಾಹವಾಗಿದ್ದು, ರಾಜ್ಯದಲ್ಲಿ ವಾಸವಿದ್ದರೆ ಸಂಬಂಧಪಟ್ಟ ದಾಖಲೆ ನೀಡಬೇಕು.

ಪ್ರಶ್ನೆ: ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದೇ?

ಉತ್ತರ: ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌, ಅಟಲ್‌ ಜನಸ್ನೇಹಿ ಕೆಂದ್ರ (ಎಜೆಎಸ್‌ಕೆ) ಪೋರ್ಟಲ್‌ ಅಥವಾ ಸರ್ಕಾರ ಕಾಲಕಾಲಕ್ಕೆ ಅಧಿಸೂಚಿಸುವ ಇತರೆ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Follow Us