ಸಿದ್ದರಾಮಯ್ಯ ಏನು ದೆವ್ವನಾ, ನಾನು ಹೆದರೋಕೆ: ಹೆಚ್​ ಡಿ ಕುಮಾರಸ್ವಾಮಿ

| Updated By: ವಿವೇಕ ಬಿರಾದಾರ

Updated on: Oct 05, 2024 | 1:24 PM

ಹೆಚ್​ಡಿ ಕುಮಾರಸ್ವಾಮಿ ಅವರಿಗೆ ನನ್ನ ಕಂಡರೆ ಭಯ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಇದಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಟಾಂಗ್​ ಕೊಟ್ಟಿದ್ದು, ಕುಮಾರಸ್ವಾಮಿಯನ್ನು ಯಾವುದೇ ಕಾರಣಕ್ಕೂ ಹೆದರಿಸಲು ಆಗಲ್ಲ. ನಾನು ಯಾರಿಗೂ ಹೆದರಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಏನು ದೆವ್ವನಾ, ನಾನು ಹೆದರೋಕೆ: ಹೆಚ್​ ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ, ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಅಕ್ಟೋಬರ್ 05: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ದೆವ್ವ ಆಗಿದ್ದರೆ ಭಯ ಪಡಬೇಕು. ದೆವ್ವ ಅಲ್ಲ ಅಲ್ವಾ? ಹಾಗಿದ್ದರೆ ನಾನು ಯಾಕೆ ಭಯಪಡಲಿ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಟಾಂಗ್​ ಕೊಟ್ಟರು. (ಹೆಚ್​ಡಿ ಕುಮಾರಸ್ವಾಮಿ ಅವರಿಗೆ ನನ್ನ ಕಂಡರೆ ಭಯ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು.) ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯನ್ನು ಯಾವುದೇ ಕಾರಣಕ್ಕೂ ಹೆದರಿಸಲು ಆಗಲ್ಲ. ನಾನು ಯಾರಿಗೂ ಹೆದರಲ್ಲ ಎಂದರು.

ಸಿದ್ದರಾಮಯ್ಯ ನನ್ನ ಪಕ್ಷದ ಕಾರ್ಯಕರ್ತ

ಸಿದ್ದರಾಮಯ್ಯನಂತಹ ಲಕ್ಷ ಜನ ಬರಲಿ ಹೆದರಲ್ಲ. ಜನರಿಗೆ ಮಾತ್ರ ಹೆದರುತ್ತೇನೆ, ಸಿದ್ದರಾಮಯ್ಯ ಅವರಿಗೆ ಹೆದರುತ್ತೀನಾ? ನಾನು ರಾಜಕೀಯಕ್ಕೆ ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೀನಾ? ಸ್ವಂತ ದುಡಿಮೆ, ಕಾರ್ಯಕರ್ತರ ದುಡಿಮೆ‌ ಮೇಲೆ‌ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ನಾನು ರಾಜಕೀಯ ಮಾಡಿಲ್ಲ. ಹಾಗೆ ನೋಡಿದರೆ ಸಿದ್ದರಾಮಯ್ಯ ನನ್ನ ಪಕ್ಷದ ಕಾರ್ಯಕರ್ತ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನೆರಳಲ್ಲಿ ಸಿದ್ದರಾಮಯ್ಯ ಬಂದಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಮುಡಾ‌ ವಿಚಾರ ಡೈವರ್ಟ್ ಮಾಡಲು ನಿಮ್ಮ ವಿರುದ್ಧ ಎಫ್ಐಆರ್ ಹಾಕಲಾಗಿದೀಯಾ ಎಂಬ ವಿಚಾರವಾಗಿ ಮಾತಾನಡಿದ ಹೆಚ್​ಡಿ ಕುಮಾರಸ್ವಾಮಿ, ಪ್ರತಿಯೊಂದು ವಿಷಯ ಡೈವರ್ಟ್ ಮಾಡಲಿಕ್ಕೆ ನೋಡುತ್ತಿದ್ದಾರೆ. ಈ ಸರ್ಕಾರ ಎಲ್ಲವನ್ನು ಬಿಟ್ಟಿರುವ ಸರ್ಕಾರ. ಯಾವ ಭಯ ಭಕ್ತಿಯೂ ಇಲ್ಲ, ಗೌರವವೂ ಇಲ್ಲ. ಇದು ಬಂಡ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ 5 ಸಾವಿರ ಕೋಟಿ ರೂ. ಬೇನಾಮಿ ಆಸ್ತಿ ಮಾಡಿದ್ದಾರೆ: ಹೊಸ ಬಾಂಬ್ ಸಿಡಿಸಿದ ರೆಡ್ಡಿ

ಇವತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ಕಾಲ‌ ಉತ್ತರ‌ ನೀಡುತ್ತೆ. ಐದು ವರ್ಷಗಳ ಕಾಲ ಸಿಎಂ ಆಗಿ‌ ಸಿದ್ದರಾಮಯ್ಯ ಇರುತ್ತಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಅಲ್ಲಿಗೆ ಯಾವ ತರ ರಾಜಕಾರಣ ಇದೆ ನೋಡಿ. ಆ ಹೇಳಿಕೆ ಮೇಲೆ ನೀವು ತೀರ್ಮಾನಕ್ಕೆ ಬನ್ನಿ ಎಂದರು.

ಕುಮಾರಸ್ವಾಮಿ ಹತ್ರ ಇವರದ್ದು, ಯಾರದ್ದು ಏನು ನಡೆಯಲ್ಲ. ಎಫ್ಐಆರ್ ಹಾಕಿ ಬೆದರಿಸುವ ತಂತ್ರ ರೂಪಿಸಿದ್ದಾರೆ. ಬೆದರಿಕೆ ಅಲ್ದೆ ಇನ್ನೇನು ಇದೆ ಎಫ್ಐಆರ್​​​ನಲ್ಲಿ? ಅದರ ಬಗ್ಗೆ ನಾನು ಚರ್ಚೆ ಮಾಡೋದು ಅನವಶ್ಯಕ. ಕಾಲವೇ ನಿರ್ಧಾರ ಮಾಡುತ್ತದೆ. ಕಾಲ ಪ್ರತಿಯೊಂದಕ್ಕೂ ಉತ್ತರ ನೀಡುತ್ತೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ