ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಯುಟಿ ಖಾದರ್ ನೇಮಕ; ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ

| Updated By: shivaprasad.hs

Updated on: Jan 30, 2022 | 1:39 PM

UT Khader: ಶಾಸಕ ಯು.ಟಿ ಖಾದರ್ ವಿಧಾನಸಭೆ ವಿಪಕ್ಷ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ನೀಡಿದೆ.

ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಯುಟಿ ಖಾದರ್ ನೇಮಕ; ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ
ಶಾಸಕ ಯು.ಟಿ ಖಾದರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಯು.ಟಿ.ಖಾದರ್ (U.T.Khader) ಅವರನ್ನು ನೇಮಿಸಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.​ ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (K.C.Venugopal) ಅಧಿಕೃತ ಘೋಷಣೆ ಮಾಡಿದ್ದಾರೆ. ​ಅಲ್ಪ ಸಂಖ್ಯಾತ ಸಮುದಾಯದ ಮನ ತಣಿಸಲು ಯು.ಟಿ ಖಾದರ್​ಗೆ ಜವಾಬ್ದಾರಿ ನೀಡಲಾಗಿದ್ದು, ಸಿದ್ದರಾಮಯ್ಯ (Siddaramaiah) ತಂತ್ರಗಾರಿಕೆ ಭಾಗವಾಗಿ ಅವರಿಗೆ ಪಕ್ಷದ ಉಪ ನಾಯಕನ ಸ್ಥಾನ ನೀಡಲಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಯು.ಟಿ ಖಾದರ್ ಮಂಗಳೂರು ಕ್ಷೇತ್ರದ ಶಾಸಕರಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್ ಪ್ರತಿನಿಧಿ ಖಾದರ್. ಈ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ (2018-19) ಖಾದರ್ ಅವರು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಯುಟಿ ಖಾದರ್ ನೇಮಕದ ಕುರಿತು ಕಾಂಗ್ರೆಸ್ ಹೈಕಮಾಂಡ್ ಟ್ವೀಟ್:

ಸಿದ್ದರಾಮಯ್ಯ ನೇತೃತ್ವದ 2013-16 ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಚಿವರಾಗಿ ಮಹತ್ವದ ಜವಾಬ್ದಾರಿಯನ್ನು ಖಾದರ್ ನಿರ್ವಹಿಸಿದ್ದರು. ಇದೀಗ ಖಾದರ್ ಅವರಿಗೆ ಪಕ್ಷದ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಮುಂದಿನ ಚುನಾವಣೆಗೆ ಮುನ್ನ ಕಾಂಗ್ರೆಸ್ ಹೈಕಮಾಂಡ್ ಉನ್ನತ ಜವಾಬ್ದಾರಿಯನ್ನು ಖಾದರ್​ಗೆ ನೀಡಿದೆ. ಇದರಿಂದ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಶಕ್ತಿಯನ್ನು ಒಗ್ಗೂಡಿಸಲು ಸಹಾಯವಾಗಬಹುದು ಎನ್ನುವ ಲೆಕ್ಕಾಚಾರವೂ ಇದೆ.

ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷದ ಜವಾಬ್ದಾರಿ ಹೊತ್ತಿರುವವರು ಯಾರ್ಯಾರು?

ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯನವರಿದ್ದಾರೆ. ಯುಟಿ ಖಾದರ್ ಅವರನ್ನು ವಿಧಾನಸಭೆ ವಿಪಕ್ಷ ಉಪನಾಯಕನಾಗಿ ನೇಮಿಸಲಾಗಿದೆ. ಬಿಕೆ ಹರಿಪ್ರಸಾದ್ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಎಂ.ಬಿ ಪಾಟೀಲ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ:

ಪ್ರಾಂಶುಪಾಲರ ನಕಲು ಸಹಿ ಮಾಡಿ 68 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಗುಳಂ ಮಾಡಿದ ಗುಮಾಸ್ತ, ತಲೆ ಮರೆಸಿಕೊಂಡಿರುವ ಆರೋಪಿ

ಟೋಯಿಂಗ್ ವಿಚಾರಕ್ಕೆ ನಡುರಸ್ತೆಯಲ್ಲಿ ಅಂಗವಿಕಲೆಯ ಮೇಲೆ ಹಲ್ಲೆ ಮಾಡಿದ್ದ ASI ನಾರಾಯಣ್ ಅಮಾನತು

Published On - 1:14 pm, Sun, 30 January 22