Karnataka Assembly Poll 2023: ಕಾಂಗ್ರೆಸ್​ನಲ್ಲಿ ಜಾತಿವಾರು ಟಿಕೆಟ್​ ಲಾಬಿ ಶುರು, ಯಾವ ಸಮುದಾಯ ಎಷ್ಟು ಟಿಕೆಟ್​ಗೆ ಬೇಡಿಕೆ?

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಇದರ ಮಧ್ಯೆ ಕಾಂಗ್ರೆಸ್​ನಲ್ಲಿ ಟಿಕೆಟ್​ ಹಂಚಿಕೆಯಲ್ಲಿ ಜಾತಿ ಲೆಕ್ಕಾಚಾರ ಜೋರಾಗಿದೆ. ತಮ್ಮ ಸಮುದಾಯಕ್ಕೆ ಇಂತಿಷ್ಟು ಟಿಕೆಟ್​ ನೀಡಬೇಕೆಂದು ಬೇಡಿಕೆ ಇಟ್ಟಿವೆ.

Karnataka Assembly Poll 2023: ಕಾಂಗ್ರೆಸ್​ನಲ್ಲಿ ಜಾತಿವಾರು ಟಿಕೆಟ್​ ಲಾಬಿ ಶುರು, ಯಾವ ಸಮುದಾಯ ಎಷ್ಟು ಟಿಕೆಟ್​ಗೆ ಬೇಡಿಕೆ?
ಕಾಂಗ್ರೆಸ್​ ಪಕ್ಷದ ಧ್ವಜ (ಸಾಂದರ್ಭಿಕ ಚಿತ್ರ)
Follow us
|

Updated on:Mar 09, 2023 | 3:55 PM

ಬೆಂಗಳೂರು:  ವಿಧಾನಸಭೆ ಚುನಾವಣೆಗಾಗಿ (Kazrnataka Assembly Elections 2023) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ನಲ್ಲಿ (Congress)ಜಾತಿವಾರು ಟಿಕೆಟ್​ ಲಾಬಿ ಶುರುವಾಗಿದೆ. ತಮ್ಮ-ತಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್​ ನೀಡಬೇಕೆಂದು ನಾಯಕರುಗಳು ಒತ್ತಡ ಹೇರಲಾರಂಭಿಸಿದ್ದಾರೆ. ಜಾತಿವಾರು ಟಿಕೆಟ್ ಬೇಡಿಕೆ ಕಳೆದ ಬಾರಿಗಿಂತ ಈ ಸಲ ಹೆಚ್ಚಾಗಿದೆ. ಜಾತಿ ನಾಯಕರ ಸಂಖ್ಯಾ ಬಲದಿಂದ ಸಾಮಾಜಿಕ ನ್ಯಾಯದ ಹೆಸರಲ್ಲಿ ಹೆಚ್ಚುವರಿ ಟಿಕೆಟ್ ಬೇಡಿಕೆ ಹೆಚ್ಚುತ್ತಿದ್ದು, ಕಾಂಗ್ರೆಸ್​​ ಹೈಕಮಾಂಡ್​ಗೆ ದೊಡ್ಡ ತಲೆಬಿಸಿ ತಂದಿಟ್ಟಿದೆ. ಹಾಗಾದ್ರೆ, ಯಾವೆಲ್ಲ ಸಮುದಾಯಗಳು ಎಷ್ಟೆಷ್ಟು ಟಿಕೆಟ್​ಗೆ ಬೇಡಿಕೆ ಇಟ್ಟಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.​

ಇದನ್ನೂ ಓದಿ: Karnataka Assembly Poll 2023: ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ, ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 120 ಕ್ಷೇತ್ರಗಳ ಟಿಕೆಟ್​ ಅಂತಿಮ

ಕನಿಷ್ಠ 70 ಟಿಕೆಟ್​ಗೆ ಬೇಡಿಕೆ ಇಟ್ಟ ವೀರಶೈವ ಲಿಂಗಾಯತ

ವೀರಶೈವ ಲಿಂಗಾಯತ ಕರ್ನಾಟಕದಲ್ಲಿ ಪ್ರಬಲ ಸಮುದಾಯ ಎನಿಸಿಕೊಂಡಿದೆ. ಕೆಲ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳೇ ನಿರ್ಣಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ 70 ಟಿಕೆಟ್​ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮನವಿ ಮಾಡಿದೆ. ಕಳೆದ ಅಂದರೆ 2028ರ ವಿಧಾನಸಭೆ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ಟಿಕೆಟ್​​ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ನೀಡಲಾಗಿತ್ತು. ಇದೀಗ ಮಹಾಸಭೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾಗಿ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಲಿಂಗಾಯತ ಸಮುದಾಯದ ನಾಯಕರು ಬೆಂಗಳೂರಿನಲ್ಲಿ ಸಭೆ ಮಾಡಿದ್ದು, ಈ ಬಾರಿ ಕನಿಷ್ಠ 70 ಟಿಕೆಟ್​ ಲಿಂಗಾಯತರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಬಗ್ಗೆ ಲಿಂಗಾಯತ ನಾಯಕರು ರಾಜ್ಯ ಚುನಾವಣೆ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿದ್ದಾರೆ.

ಕುರುಬ ಸಮುದಾಯದಿಂದ 40 ಟಿಕೆಟ್​ಗೆ ಬೇಡಿಕೆ

ಇನ್ನು ಲಿಂಗಾಯತ ಟಿಕೆಟ್ ಬೇಡಿಕೆ ಬೆನ್ನಲ್ಲೇ ಕುರುಬ ಸಮುದಾಯ ಕೂಡಾ ತಮ್ಮ ಸಮುದಾಯಕ್ಕೆ 40 ಟಿಕೆಟ್​ ಬೇಡಿಕೆ ಇಟ್ಟಿದೆ. ಈ ಬಗ್ಗೆ ಕರ್ನಾಟಕ ಪ್ರದೇಶ ಕುರುಬರ ಸಂಘ ಪತ್ರಿಕಾಗೋಷ್ಠಿ ನಡೆಸಿ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 40 ಕ್ಷೇತ್ರಗಳಲ್ಲಿ ಕುರುಬ ಸಮುದಾಯದಕ್ಕೆ ಟಿಕೆಟ್ ನೀಡಬೇಕು ಮನವಿ ಮಾಡಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕುರುಬ ಸಮುದಾಯದ 20 ಜನರಿಗೆ ಟಿಕೆಟ್ ನೀಡಿತ್ತು. 2018 ರಲ್ಲಿ 8 ಮಂದಿ ಕುರುಬ ಸಮುದಾಯದ ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 150 ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದು, ಈ ನಿಟ್ಟಿನಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆನ್ನುವುದು ಕುರುಬ ಸಮುದಾಯದ ಬೇಡಿಕೆ ಆಗಿದೆ.

ಹೆಚ್ಚಿನ ಟಿಕೆಟ್​ಗಾಗಿ ಸಿದ್ದು ಭೇಟಿಯಾದ ಮುಸ್ಲಿಂ ಸಮುದಾಯ

ಇನ್ನು ಮುಸ್ಲಿಮ್ ನಾಯಕರು ಸಹ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್​ ನೀಡಬೇಕೆಂದು ಮನವಿ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಈ ಬಾರಿ ಕನಿಷ್ಠ 25 ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ನಿನ್ನೆ(ಮಾ.08) ರಾತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮುಸ್ಲಿಂ ಮೌಲ್ವಿಗಳು ಸಹ ಭೇಟಿ ಮಾಡಿ ತಮ್ಮ ಸಮುದಾಯಕ್ಕೆ ಹೆಚ್ಚು ಟಿಕೆಟ್​​ ನೀಡುವಂತೆ ಮನವಿ ಮಾಡಿದ್ದಾರೆ. ಶಾಸಕರಾದ ಜಮೀರ್ ಅಹಮ್ಮದ್, ರಿಜ್ವಾನ್ ಅರ್ಷದ್, ಅಬ್ದುಲ್ ಜಬ್ಬಾರ್ ಖಾನ್ ಮತ್ತು ಮೌಲ್ವಿಗಳು ನಿನ್ನೆ(ಮಾ.08) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆ ಸಭೆ ಮಾಡಿದ್ದು, ಟಿಕೆಟ್ ಬೇಡಿಕೆ ಸಂಬಂಧ ಚರ್ಚೆ ಮಾಡಿದ್ದಾರೆ.

 ಯಾವ ಸಮುದಾಯ ಎಷ್ಟು ಟಿಕೆಟ್​ಗೆ​ ಬೇಡಿಕೆ?

  • ವೀರಶೈವ ಲಿಂಗಾಯತ – 70
  • ಪರಿಶಿಷ್ಟ ಜಾತಿ (ಬಲ-ಎಡ)-30
  • ಪರಿಶಿಷ್ಟ ಪಂಗಡ- 20
  • ಒಕ್ಕಲಿಗ-48
  • ಒಬಿಸಿ-52
  • ಮುಸ್ಲಿಂ-25

ಕಳೆದ ಚುನಾವಣೆಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್​?

  • ಲಿಂಗಾಯತ-47
  • ಒಕ್ಕಲಿಗ 46
  • ಒಬಿಸಿ 50
  • ಮುಸ್ಲಿಂ 17
  • ಕ್ರಿಶ್ಚಿಯನ್ 2
  • ಜೈನ್​ 2
  • ಬ್ರಾಹ್ಮಣ 6
  • ಪರಿಶಿಷ್ಟ ಜಾತಿ (ಬಲ-ಎಡ) 14, 9
  • ಪರಿಶಿಷ್ಟ ಪಂಗಡ 17

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:51 pm, Thu, 9 March 23