ಕೇವಲ ಮುಸ್ಲಿಮರಿಗೆ ಮಾತ್ರ ಮೀಸಲಾತಿ ಎಂದು ಹೇಳಿದವರು ಯಾರು? ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ
ಡಿಸಿಎಂ ಡಿಕೆ ಶಿವಕುಮಾರ್ ಅವರು ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರ ಮೀಸಲಾತಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದು ಕೇವಲ ಮುಸ್ಲಿಮರಿಗೆ ಅಲ್ಲ, ಎಲ್ಲಾ ಅಲ್ಪಸಂಖ್ಯಾತರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ಧವಾಗಿದೆ ಮತ್ತು ತಮಿಳುನಾಡಿನಲ್ಲಿ ನಡೆಯುವ ಕ್ಷೇತ್ರ ಪುನರ್ವಿಂಗಡಣೆ ವಿರೋಧಿ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಮಾರ್ಚ್ 15: ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ (reservation) ಎಂದು ಹೇಳಿದವರು ಯಾರು? ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಅಲ್ಪಸಂಖ್ಯಾತರು ಎಂದರೆ ಕ್ರಿಶ್ಚಿಯನ್, ಜೈನ, ಪಾರ್ಸಿ, ಸಿಖ್ ಹೀಗೆ ಎಲ್ಲರೂ ಸೇರುತ್ತಾರೆ. ಈ ಹಿಂದೆ ಪರಿಶಿಷ್ಟ ಜಾತಿ, ಪಂಗಡವರಿಗೆ ಗುತ್ತಿಗೆ ಮೀಸಲಾತಿ ನೀಡುವಂತೆ ತಿದ್ದುಪಡಿ ಮಾಡಿದ್ದೆವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಗರದ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4 ರಷ್ಟು ಮೀಸಲಾತಿ ನೀಡಲು ಮಾಡಿರುವ ತೀರ್ಮಾನದ ಬಗ್ಗೆ ಕೇಳಿದಾಗ, ಕೇವಲ 2 ಕೋಟಿ ಮೊತ್ತಕ್ಕೆ ಮಾತ್ರ ಒಪ್ಪಿಗೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ನಾವು ಬೇರೆ ಯಾರ ಹಕ್ಕನ್ನು ಇಲ್ಲಿ ಕಸಿದುಕೊಳ್ಳುತ್ತಿಲ್ಲ. ಅವರಿಗೂ ನಾವು ಬದುಕು ಕೊಡಬೇಕಲ್ಲವೇ? ಎಂದಿದ್ದಾರೆ.
ಇದನ್ನೂ ಓದಿ: ಅನಿವಾರ್ಯ ಕಾರಣಗಳಿಂದಾಗಿ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಹಿಳಾ ದಿನಾಚರಣೆ ಆಚರಿಸಲಾಗಿದೆ: ಶಿವಕುಮಾರ್
ಗುತ್ತಿಗೆ ಮೀಸಲಾತಿಯನ್ನು ಮತ ಬ್ಯಾಂಕ್ ರಾಜಕಾರಣ ಎಂಬ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ್ದು, ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಾ ಇರಬೇಕು. ಆಗಲೇ ನಾವು ಗಟ್ಟಿಯಾಗವುದು. ಕಸ ವಿಲೇವಾರಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಎಲ್ಲಿ ಕಸ ನಿಂತಿದೆಯೋ ಅಲ್ಲಿಗೆ ಹೋಗಿ ನೀವೆ (ಮಾಧ್ಯಮದವರು) ನೋಡಿ ಗೊತ್ತಾಗುತ್ತದೆ ಎಂದರು.
ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ತಯಾರಿದೆ
ಬಿಬಿಎಂಪಿ ಚುನಾವಣೆಗೆ ಸರ್ಕಾರ ಖಂಡಿತವಾಗಿ ತಯಾರಿದೆ. ಎಷ್ಟು ದಿನ ನಾವು ತಪ್ಪಿಸಿಕೊಂಡು ಇರಲು ಸಾಧ್ಯ. ಇಂದು ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಸಭೆಯನ್ನು ಕರೆಯಲಾಗಿದೆ. ನಂತರ ಎಲ್ಲಾ ಪಕ್ಷದವರನ್ನು ಸಭೆಗೆ ಕರೆಯಲಾಗುವುದು. ಅವರಲ್ಲಿಯೂ ಕೆಲವೊಬ್ಬರು ಅನಧಿಕೃತವಾಗಿ ಬಿಬಿಎಂಪಿ ಚುನಾವಣೆ ಕುರಿತಾಗಿ ಸಲಹೆ ನೀಡಿದ್ದಾರೆ. ಈಗ ಅಧಿಕೃತವಾಗಿ ಸಲಹೆಗಳನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಕ್ಷೇತ್ರ ಪುನರ್ ವಿಂಗಡಣೆ ವಿರೋಧಿ ಸಭೆ: ಮಾ.22 ರಂದು ತಮಿಳುನಾಡಿಗೆ ಪ್ರಯಾಣ
ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ತಮಿಳುನಾಡಿನ ಸಿಎಂ ಆಹ್ವಾನ ನೀಡಿದ್ದರು. ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಮಾ.22 ರಂದು ತಮಿಳುನಾಡಿನಲ್ಲಿ ನಡೆಯುವ ಸಭೆಗೆ ಭಾಗವಹಿಸಿ ಎಂದು ನಿರ್ದೇಶನ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಮೊಣಕಾಲಿನ ನೋವು ಇರುವ ಕಾರಣಕ್ಕೆ ವೈದ್ಯರ ಸಲಹೆಯ ಮೇರೆಗೆ ಅವರು ಬರುತ್ತಿಲ್ಲ. ಪಕ್ಷ ಹಾಗೂ ಸರ್ಕಾರದ ವತಿಯಿಂದ ನಾನು ಸಭೆಯಲ್ಲಿ ಭಾಗವಹಿಸುವೆ. ಪಕ್ಷದ ನಿಲುವನ್ನು ಹೈಕಮಾಂಡ್ ಜೊತೆ ಚರ್ಚಿಸಿ ತಿಳಿಸುವೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತೇನೆ ಅಂದರೆ ಬೇರೆಯವರು ಏನು ಹೇಳಲು ಸಾಧ್ಯ? ಸತೀಶ್ ಜಾರಕಿಹೊಳಿ
ದೇಶದಲ್ಲಿ ದೊಡ್ಡ ಪ್ರಮಾಣದ ಚರ್ಚೆ ನಡೆಯುತ್ತಿದೆ. ನಾವುಗಳು ನಮ್ಮ ಹಕ್ಕುಗಳನ್ನು ಹಾಗೂ ಸಂಖ್ಯೆಗಳನ್ನು ಬಿಟ್ಟುಕೊಡಲು ತಯಾರಿಲ್ಲ. ಪಕ್ಷದ ನಿಲುವಿನ ಬಗ್ಗೆ ಬರುವ 18 ರಂದು ಚರ್ಚೆ ನಡೆಸಿ ನಿಲುವನ್ನು ತಿಳಿಸುತ್ತೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.