
ಸಮಾಜದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವಿವಾಹ ವಿಚ್ಛೇದನಕ್ಕೆ ಜ್ಯೋತಿಷ್ಯ ಪ್ರಕಾರ ಕಾರಣಗಳೇನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಹಿಂದಿನ ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿದ್ದಂತೆ ಇಂದಿಗೂ ವಿವಾಹವು ಪವಿತ್ರ ಹಾಗೂ ಶಕ್ತಿಶಾಲಿ ಸಂಬಂಧವೆಂದು ಪರಿಗಣಿಸಲಾಗಿದೆ. ವಿವಾಹವು ಸಮಾಜದ ಆಧಾರ ಸ್ತಂಭವಾಗಿದ್ದು, ಸದೃಢ ಸಂತಾನದ ಮೂಲಕ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಆದರೂ, ಇಂದು ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕರಣಗಳು ಸಾಮಾನ್ಯವಾಗಿವೆ.
ವಿವಾಹ ವಿಚ್ಛೇದನಕ್ಕೆ ಹಣಕಾಸಿನ ಸಮಸ್ಯೆಗಳು, ಅಹಂಕಾರ, ಭಿನ್ನಾಭಿಪ್ರಾಯಗಳು, ಮಾತು ತಪ್ಪುವುದು, ಮೋಸ, ಅನಾರೋಗ್ಯ, ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನ ಸೇರಿದಂತೆ ಹಲವು ಕಾರಣಗಳಿವೆ. ಆದರೆ ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದಾಗ, ಗ್ರಹಗಳ ಅಶುಭ ಸ್ಥಾನಗಳು ಮತ್ತು ದೋಷಗಳು ದಾಂಪತ್ಯದಲ್ಲಿ ಬಿರುಕು ಮೂಡಿಸಲು ಪ್ರಮುಖ ಕಾರಣಗಳಾಗಿವೆ ಎಂದು ಗುರೂಜಿ ಎಚ್ಚರಿಸಿದ್ದಾರೆ.
ಜ್ಯೋತಿಷ್ಯದಲ್ಲಿ ರವಿ, ಕುಜ, ರಾಹು, ಶನಿ ಮತ್ತು ಕೇತು ಗ್ರಹಗಳು ವಿವಾಹ ವಿಚ್ಛೇದನಕ್ಕೆ ಕಾರಣವಾಗಬಲ್ಲವು. ಕೆಲವು ಜಾತಕಗಳಲ್ಲಿ ದ್ವಿಕಳತ್ರ ಯೋಗ ಇರುವುದರಿಂದ ಎರಡನೇ ವಿವಾಹದ ಸಾಧ್ಯತೆಗಳೂ ಇರುತ್ತವೆ.
ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಆದರೆ, ಇಷ್ಟೆಲ್ಲಾ ಗ್ರಹ ದೋಷಗಳಿದ್ದರೂ ಸಹ, ದಂಪತಿಗಳ ಮನಸ್ಸಿನ ಗಟ್ಟಿತನ, ಪರಸ್ಪರ ತಿಳುವಳಿಕೆ ಮತ್ತು ಹೊಂದಾಣಿಕೆ ಇದ್ದರೆ ವಿಚ್ಛೇದನವನ್ನು ತಡೆಯಬಹುದು. ವಿಚ್ಛೇದನವು ಶುಭಕರವಾದ ಸಂಗತಿಯಲ್ಲ. ಯಾರಾದರೂ ಒಬ್ಬರು ಹೊಂದಿಕೊಂಡು ಸಾಗಿದರೆ ಜೀವನ ಸುಂದರವಾಗಿರುತ್ತದೆ. ಈ ಗ್ರಹ ದೋಷಗಳಿಂದ ಉಂಟಾಗುವ ವಿವಾಹ ವಿಚ್ಛೇದನದ ಸಮಸ್ಯೆಗಳಿಗೆ ಪರಿಹಾರವಾಗಿ, ಸಾಕ್ಷಾತ್ ಪಾರ್ವತಿ ದೇವಿಗೆ ಪ್ರತಿ ಮಂಗಳವಾರ ಐದು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ಎಲ್ಲಾ ದೋಷಗಳನ್ನು ನಿವಾರಿಸಿಕೊಳ್ಳಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ