ದುಂಬಿಯನ್ನು ದೂರಿದರೆ ಯಾರಿಗೆ ರುಚಿಯ ನಷ್ಟ? ದುಂಬಿಗೋ ವ್ಯಕ್ತಿಗೋ? ಯಾರನ್ನಾದರೂ ಸರಿ ವಿರೋಧಿಸುವ ಮುನ್ನ ಒಂದು ಬಾರಿ ಯೋಚಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 22, 2023 | 10:18 AM

ಜಗತ್ತಿನಲ್ಲಿ ಅದೆಷ್ಟೋ ಜನ ಹಲವಾರು ಘಟನೆಗಳ ಕುರಿತು ಅಧ್ಯಯನ ಅಥವಾ ಅನುಸಂಧಾನ ಮಾಡದೆಯೇ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದರಿಂದ ಅವರು ವಿರೋಧಿಸುವ ಧರ್ಮಕ್ಕೋ ಆಚರಣೆಗೋ ಅಥವಾ ಇನ್ನೀತರ ವ್ಯವಸ್ಥೆಗೋ ಭಂಗವಾದಂತೆ ಕಂಡರೂ ತಾತ್ವಿಕವಾಗಿ ಅದೆಕ್ಕೆ ಏನೂ ಹಾನಿ ಆಗುವುದಿಲ್ಲ.

ದುಂಬಿಯನ್ನು ದೂರಿದರೆ ಯಾರಿಗೆ ರುಚಿಯ ನಷ್ಟ? ದುಂಬಿಗೋ ವ್ಯಕ್ತಿಗೋ? ಯಾರನ್ನಾದರೂ ಸರಿ ವಿರೋಧಿಸುವ ಮುನ್ನ ಒಂದು ಬಾರಿ ಯೋಚಿಸಿ
ಸಾಂದರ್ಭಿಕ ಚಿತ್ರ
Follow us on
ವರ್ತಮಾನದ ಜಗತ್ತಿನ ವ್ಯವಸ್ಥೆ ಹೇಗಿದೆ ಎಂದರೆ ಕೆಲವರು ಕಾರಣವಿಲ್ಲದೇ ವಿರೋಧಿಸುತ್ತಾರೆ. ವ್ಯವಸ್ಥೆಯ ನಿಯಮದ ಧರ್ಮದ ಅರಿವೇ ಇರುವುದಿಲ್ಲ ಅವರಿಗೆ ಆದರೂ ಏನೇನೋ ಅರ್ಥಹೀನ ಕಾರಣಗಳನ್ನು ಹೇಳುತ್ತಾ ಅಸಮಂಜಸವಾಗಿ ವರ್ತಿಸುತ್ತಾ ಪ್ರತಿಭಟಿಸುತ್ತಿರುತ್ತಾರೆ.  ದ್ವಾಪರದಲ್ಲಿ ಶಿಶುಪಾಲನಿಗೆ  ನಿಜವಾಗಿಯೂ ಕೃಷ್ಣನನ್ನು ವಿರೋಧಿಸುವ ಅನಿವಾರ್ಯತೆ ಇರಲಿಲ್ಲ. ಆದರೂ ವಿರೋಧಿಸಿದ. ಅದೆಷ್ಟರ ಮಟ್ಟಿಗೆ ವಿರೋಧಿಸಿದ ಅಂದರೆ ಕೃಷ್ಣನನ್ನು ಹೀಯಾಳಿಸುವುದೇ ಅವನ ನಿತ್ಯ ಜೀವನದ ಉದ್ದೇಶವೋ ಎಂಬಂತೆ ಮಾಡಿಬಿಟ್ಟ. ಅದರ ಫಲವಾಗಿ ತನ್ನ ಅವನತಿಯನ್ನು (ಮರಣವನ್ನು) ಅತ್ಯಂತ ಕಠಿಣವಾಗಿ ಅವಮಾನಭರಿತವಾಗಿ ಅನುಭವಿಸಬೇಕಾಯಿತು. ಕಾರಣವಿಷ್ಟೇ ಕೃಷ್ಣನನ್ನು ಅರ್ಥೈಸದೇ ಹೋದದ್ದು.
ಇದೇ ತರಹ ಇಂದು ಅದೆಷ್ಟೋ ಜನ ತಮ್ಮ ಧರ್ಮದ ಆಚರಣೆಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳದೇ ಸ್ವಂತ ಧರ್ಮವನ್ನು ಪರ ಧರ್ಮದೊಂದಿಗೆ ತುಲನೆ ಮಾಡುತ್ತಿದ್ದಾರೆ ಮತ್ತು ತಾನು ಅನುಸರಿಸಬೇಕಾದ ಪದ್ಧತಿಯನ್ನು ಅನಿಷ್ಟದ ಪಿಡುಗೋ ಎಂಬಂತೆ ವ್ಯವಹರಿಸುತ್ತಿದ್ದಾರೆ.
ಎಲ್ಲಾ ಆಚರಣೆಗಳ ಕುರಿತಾಗಿ ತಿಳುವಳಿಕೆ ಇರುವುದು ಅಥವಾ ಪ್ರಶ್ನಿಸುವುದು ತಪ್ಪಲ್ಲ. ಅದರೆ ಅದರ ಬಗ್ಗೆ ತಿಳಿಯದೇ ಅವಹೇಳನಕಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಮೂಢತನವೇ ಸರಿ. ಶಾಸ್ತ್ರ ಹೇಳುವಂತೆ “ನ ಹಿ ವಂಧ್ಯಾ ವಿಜಾನಾತಿ ಗುರ್ವೀ ಪ್ರಸವ ವೇದನಾ” ಅಂದರೆ ಭಂಜೆಯು ಅತ್ಯಂತ ಕಠಿಣವಾದ ಪ್ರಸವ ವೇದನೆಯನ್ನು ಹೇಗೆ ತಾನೇ ತಿಳಿದಾಳು ಎಂದು.
ಇದನ್ನೂ ಓದಿ: Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?
ಧರ್ಮಗಳು ಸಾರುವ ಭಗವತ್ತತ್ವದ ಕುರಿತಾಗಿ ಒಂದಿನಿತೂ ಪರಿಕಲ್ಪನೆಯಾಗಲಿ ಅಥವಾ ವಿಚಾರ ವಿನಿಮಯವಾಗಲಿ ಅಥವಾ ತಾತ್ವಿಕ ವಿಮರ್ಶೆಯಾಗಲಿ ಇಲ್ಲದೇ ಇರುವ ವ್ಯಕ್ತಿಯೋರ್ವ ದೇವರಿಲ್ಲ ಅದು ಸುಳ್ಳು. ಅದು ಕೇವಲ ಕಟ್ಟುಕಥೆ. ಪೌರುಷ ಹೀನರು ದೇವರ ಹೆಸರಲ್ಲಿ ಮಾಡುವ ದಂದೆ ಎಂಬಿತ್ಯಾದಿ ಮಾತುಗಳನ್ನು ಆಡುತ್ತಾರಲ್ಲವೇ ಅದು ನಿಜವಾಗಿಯೂ ಅಸಂಬದ್ಧವೇ ಸರಿ.
ಯಾಕೇ ಅಂತ ಕೇಳಿದರೆ ಅದಕ್ಕುತ್ತರ ಇದೇ ನೋಡಿ ಕಾರು ಅಂದರೆ ಏನೆಂದು ತಿಳಿಯದ ವ್ಯಕ್ತಿಯೊಬ್ಬ ಕಾರು ಚಲಾಯಿಸುವ ಕುರಿತಾಗಿ ಉಪನ್ಯಾಸ ಮಾಡಿದಂತೆ. ಕೆಲವರಿದ್ದಾರೆ ಕೆಲವು ವಿಚಾರಗಳ ಬಗ್ಗೆ ಒಂದಿನಿತೂ ಪರಿಕಲ್ಪನೆಯೇ ಇರುವುದಿಲ್ಲ. ಆದರೂ ಆ ಕುರಿತಾಗಿ ಹಾಗೇ ಹೀಗೇ ಎಂದು ಊಹೆಗಳನ್ನು ಆರೋಪದ ರೂಪದಲ್ಲಿ ಹೇಳುತ್ತಾರೆ. ಇವುಗಳು ನಿಜವಾಗಿಯೂ ಅಸಮಂಜಸವಲ್ಲವೇ? ಹಾಗೆಯೇ ನಾವು ಸ್ತ್ರೀ ಲೋಲುಪನಾದ ವ್ಯಕ್ತಿಯೊಬ್ಬನ ಬಗ್ಗೆ ಹೇಳುವಾಗ ಅವನ ಕೃಷ್ಣಲೀಲೆ ಅದ್ಭುತ ಎನ್ನುತ್ತೇವೆ.  ಅದೂ ಮೇಲೆ ಹೇಳಿದಂತಾಗುತ್ತದೆ. ಏಕೆಂದರೆ ಉತ್ತರೆಯ ಗರ್ಭದ ಮೇಲೆ ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಾಗ ಕೃಷ್ಣ ಹೇಳುವ ಮಾತು ಹೀಗಿದೆ ನಾನು ಏಕ ಪತ್ನಿ ವ್ರತಸ್ಥನಾಗಿದ್ದಲ್ಲಿ ಉತ್ತರೆಯ ಗರ್ಭ ಉಳಿಯಲಿ ಎಂದು. ಆಗ ಅಭೇಧ್ಯವಾದ ಬ್ರಹ್ಮಾಸ್ತ್ರ ತಕ್ಷಣ ಶಾಂತವಾಗುತ್ತದೆ. ಹಾಗಾದರೆ ಕೃಷ್ಣಲೀಲೆ ಎಂಬ ನಾವು ಬಳಸುವ ಪದಕ್ಕೇನು ಅರ್ಥ ಅಂತ ಯೋಚಿಸಿ.
ಹಾಗೆಯೇ ಜಗತ್ತಿನಲ್ಲಿ ಅದೆಷ್ಟೋ ಜನ ಹಲವಾರು ಘಟನೆಗಳ ಕುರಿತು ಅಧ್ಯಯನ ಅಥವಾ ಅನುಸಂಧಾನ ಮಾಡದೆಯೇ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದರಿಂದ ಅವರು ವಿರೋಧಿಸುವ ಧರ್ಮಕ್ಕೋ ಆಚರಣೆಗೋ ಅಥವಾ ಇನ್ನೀತರ ವ್ಯವಸ್ಥೆಗೋ ಭಂಗವಾದಂತೆ ಕಂಡರೂ ತಾತ್ವಿಕವಾಗಿ ಅದೆಕ್ಕೆ ಏನೂ ಹಾನಿ ಆಗುವುದಿಲ್ಲ. ಆಗುವುದು ವಿರೋಧಿಸಿದ ವ್ಯಕ್ತಿಗೇ. ರುಚಿಯಾದ ಜೇನನ್ನು ದುಂಬಿಯಿಂದ ಬಿಡಿಸಿ ಆಸ್ವಾದಿಸಲು ಬಾರದ ವ್ಯಕ್ತಿ. ದುಂಬಿಯನ್ನು ದೂರಿದರೆ ಯಾರಿಗೆ ರುಚಿಯ ನಷ್ಟ? ದುಂಬಿಗೋ ವ್ಯಕ್ತಿಗೋ? ವಿರೋಧಿಸುವ ಮೊದಲು ಒಮ್ಮೆ ಯೋಚಿಸಿ.
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು 

Published On - 10:16 am, Thu, 22 June 23