
ಸಾಮಾನ್ಯವಾಗಿ ಕುಂಕುಮಾರ್ಚನೆ ಎಂದರೆ ದೇವಾಲಯಗಳಲ್ಲಿ ಅರ್ಚಕರು ದೇವಿಯ ಪಾದಗಳಿಗೆ, ಮೇರು ಚಕ್ರಕ್ಕೆ ಅಥವಾ ವೀಳೆದೆಲೆಯ ಮೇಲೆ ಕುಂಕುಮವನ್ನು ಅರ್ಪಿಸುವುದನ್ನು ನಾವು ನೋಡುತ್ತೇವೆ. ಈ ಸಂದರ್ಭದಲ್ಲಿ, ಮನೆಯಲ್ಲಿ ಕುಂಕುಮಾರ್ಚನೆಯನ್ನು ಮಾಡಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಮನೆಯಲ್ಲಿ ಕುಂಕುಮಾರ್ಚನೆಯನ್ನು ಖಂಡಿತವಾಗಿಯೂ ಮಾಡಬಹುದು. ಇದಕ್ಕಾಗಿ ಅರಿಶಿನದಿಂದ ತಯಾರಿಸಿದ ಶುದ್ಧ ಕುಂಕುಮವನ್ನು ಬಳಸುವುದು ಉತ್ತಮ. ಕುಂಕುಮವು ಆಕರ್ಷಣ ಶಕ್ತಿಯನ್ನು ಬೇಗನೆ ಸೆಳೆಯುವ ಗುಣವನ್ನು ಹೊಂದಿದೆ. ಪುನುಗು, ಜವಾದ್, ಅರಗಜದಂತಹ ದ್ರವ್ಯಗಳಿಗೆ ಇರುವ ಶಕ್ತಿಯಂತೆ, ಕುಂಕುಮಕ್ಕೂ ಅಧ್ಬುತ ಶಕ್ತಿಯಿದೆ. ನಾವು ಹಣೆಗೆ ಇಟ್ಟುಕೊಳ್ಳುವ ಕುಂಕುಮ, ವಿಭೂತಿ, ಗಂಧ ಇವೆಲ್ಲವೂ ಆಯಾ ಬಲಕ್ಕೆ ತಕ್ಕ ಫಲವನ್ನು ನೀಡುತ್ತವೆ. ಅರ್ಚನೆಯಲ್ಲಿ ಬಳಸುವ ಕುಂಕುಮವು ವಿಶೇಷ ಶಕ್ತಿಯನ್ನು ಹೊಂದಿರುತ್ತದೆ.
ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತುಕೊಳ್ಳಬೇಕು. ದೇವಿಯ ಅಷ್ಟೋತ್ತರ ನಾಮಾವಳಿಗಳನ್ನು ಪಠಿಸಬೇಕು. ಕುಂಕುಮವನ್ನು ಹಿಡಿಯಲು ತೋರುಬೆರಳನ್ನು ಬಳಸಬಾರದು. ಉಳಿದ ಮೂರು ಬೆರಳುಗಳಿಂದ ಕುಂಕುಮವನ್ನು ತೆಗೆದುಕೊಂಡು, ಪ್ರತಿ ನಾಮಕ್ಕೂ ಒಂದೊಂದು ಬಾರಿ ವೀಳೆದೆಲೆಯ ಮೇಲೆ ಅಥವಾ ಶುದ್ಧವಾದ ಬೆಳ್ಳಿ ತಟ್ಟೆಯ ಮೇಲೆ ಇರುವ ದೇವಿಯ ಚಿತ್ರಕ್ಕೆ ಅರ್ಪಿಸಬೇಕು. ನಿಮ್ಮ ಶಕ್ತಿಗನುಸಾರವಾಗಿ ಈ ತಟ್ಟೆಯನ್ನು ಬಳಸಬಹುದು. ಅರ್ಚನೆ ಮಾಡಿದ ಈ ಕುಂಕುಮವನ್ನು ಪ್ರತಿನಿತ್ಯ ಹಣೆಗೆ ಹಚ್ಚಿಕೊಂಡು ಪ್ರಯಾಣ, ಉದ್ಯೋಗಕ್ಕೆ ಹೋಗುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಕುಂಕುಮಾರ್ಚನೆ ಮಾಡಲು ಮಂಗಳವಾರ ಮತ್ತು ಶುಕ್ರವಾರಗಳು ಅತಿ ಶ್ರೇಷ್ಠ. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವುದು ಇನ್ನೂ ಉತ್ತಮ. ಮದುವೆಗೆ ತಡೆಯಾಗುತ್ತಿದ್ದರೆ, ಒಂದು ಸಂಕಲ್ಪ ಮಾಡಿಕೊಂಡು ಕುಂಕುಮಾರ್ಚನೆ ಮಾಡಿಕೊಳ್ಳಬಹುದು. ದೇವಾಲಯಗಳಲ್ಲಿ ಅಮ್ಮನವರ ಸನ್ನಿಧಿಯಲ್ಲಿ ಕುಳಿತು ವೀಳೆದೆಲೆಯನ್ನಿಟ್ಟು ಅರ್ಚನೆ ಮಾಡಿಕೊಳ್ಳಬಹುದು. ವಿದ್ಯಾಭ್ಯಾಸ ಪ್ರಾರಂಭಿಸುವ ಮುನ್ನ, ಮನೆ ಕಟ್ಟುವ ಮುನ್ನ ಫೌಂಡೇಶನ್ನಲ್ಲಿ ಹಾಕಿಸಲು, ಮಕ್ಕಳು ಶಾಲೆಗೆ ಹೋಗುವ ಮುನ್ನ ಕುಂಕುಮ ಹಚ್ಚಿ ಕಳುಹಿಸುವುದು ಶುಭ. ಸಂತಾನ, ಉದ್ಯೋಗ, ಕಲ್ಯಾಣ ಹೀಗೆ ಸಕಲ ವಿಜಯಗಳಿಗೂ ಕುಂಕುಮಾರ್ಚನೆಯು ಒಂದು ಅಸ್ತ್ರವಿದ್ದಂತೆ.
ಮನೆಯಲ್ಲಿ ಕುಂಕುಮಾರ್ಚನೆ ಮಾಡುವುದರಿಂದ ದೇವಿಯ ಪ್ರಸನ್ನತೆ ಮತ್ತು ಸರ್ವಶಕ್ತಿಯ ಅನುಗ್ರಹ ಸಿಗುತ್ತದೆ. ಹುಣ್ಣಿಮೆಯ ಸಮಯದಲ್ಲಿ ಕುಂಕುಮಾರ್ಚನೆಗೆ ಹೆಚ್ಚಿನ ಫಲವಿರುತ್ತದೆ. ಈ ಶಕ್ತಿಶಾಲಿ ಕುಂಕುಮಾರ್ಚನೆಯನ್ನು ಮನೆಯಲ್ಲಿ ಮಾಡುವುದರಿಂದ ಜೀವನದಲ್ಲಿ ಬಹಳಷ್ಟು ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:08 am, Sun, 19 April 26