
ಶ್ರಾವಣ ಮಾಸದ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಪವಿತ್ರತೆ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಇದೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಮಂಗಳವಾರದಂದು ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಶ್ರೇಯಸ್ಸು, ಅಭಿವೃದ್ಧಿ ಹಾಗೂ ಮುತ್ತೈದೆತನಕ್ಕಾಗಿ ‘ಮಂಗಳಗೌರಿ ವ್ರತ’ವನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಆಚರಿಸುತ್ತಾರೆ. ಶ್ರಾವಣದ ಮೊದಲ ಮಂಗಳವಾರದಿಂದ ಪ್ರಾರಂಭವಾಗುವ ಈ ವ್ರತವು ಅಖಂಡ ಸೌಭಾಗ್ಯ ಹಾಗೂ ಜೀವನದಲ್ಲಿ ಸಕಲ ಶುಭಗಳನ್ನು ತರುತ್ತದೆ ಎಂಬುದು ಭಕ್ತರ ದೃಢ ನಂಬಿಕೆ. ಈ ದಿನದಂದು ಉಪವಾಸ ವ್ರತ ಕೈಗೊಂಡು, ಗೌರಿ ದೇವಿಗೆ ಅಷ್ಟೋತ್ತರ ಶತನಾಮಾವಳಿಯಿಂದ ಪೂಜೆ ಸಲ್ಲಿಸುವುದರಿಂದ ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
ಆದರೆ, ಇಷ್ಟೊಂದು ಮಹತ್ವವಿರುವ ಈ ಪವಿತ್ರ ದಿನದಂದು ಆಕಸ್ಮಿಕವಾಗಿಯೂ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಶಾಸ್ತ್ರಗಳು ಮತ್ತು ಪಂಡಿತರು ಎಚ್ಚರಿಸುತ್ತಾರೆ. ಈ ದಿನ ತಪ್ಪಿಯೂ ಮಾಡಬಾರದ ಕೆಲಸಗಳ ವಿವರ ಇಲ್ಲಿದೆ:
ಶ್ರಾವಣ ಮಂಗಳವಾರದಂದು ಮನೆಯಲ್ಲಿ ಸಂಪೂರ್ಣ ಸಾತ್ವಿಕ ವಾತಾವರಣವಿರಬೇಕು. ಈ ದಿನ ಮಾಂಸ, ಮದ್ಯ, ಮೊಟ್ಟೆ, ಮೀನು ಮುಂತಾದ ಯಾವುದೇ ರೀತಿಯ ಆಹಾರಗಳನ್ನು ಸೇವಿಸಬಾರದು. ಈ ಪವಿತ್ರ ದಿನದಂದು ಮಾಂಸಾಹಾರ ಸೇವಿಸುವುದರಿಂದ ದೇವಿಯ ಕೋಪಕ್ಕೆ ಗುರಿಯಾಗಬೇಕಾಗಬಹುದು ಹಾಗೂ ಜೀವನದಲ್ಲಿ ಹಲವು ರೀತಿಯ ನಕಾರಾತ್ಮಕ ಪರಿಣಾಮಗಳು ಎದುರಾಗಬಹುದು.
ಮಂಗಳಗೌರಿ ವ್ರತವನ್ನು ಆಚರಿಸುವವರು ಹಾಗೂ ಉಪವಾಸವಿರುವವರು ತಮ್ಮ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇಷ್ಟೇ ಅಲ್ಲದೆ, ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಬದನೆಕಾಯಿ ಹಾಗೂ ಕೆಲವು ರೀತಿಯ ಸೊಪ್ಪುಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ
ಮಂಗಳವಾರದಂದು ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಉಗುರುಗಳನ್ನು ಕತ್ತರಿಸುವುದು (Nail cutting) ಮತ್ತು ಕೂದಲು ಕತ್ತರಿಸಿಕೊಳ್ಳುವುದನ್ನು (Haircut) ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ದಿನ ಇಂತಹ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಕಡಿಮೆಯಾಗಿ, ಆರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ ಎಂಬ ನಂಬಿಕೆಯಿದೆ.
ದೇವರ ಪೂಜೆಯಷ್ಟೇ ಮುಖ್ಯವಾದದ್ದು ಮನಸ್ಸಿನ ನೈರ್ಮಲ್ಯ. ಶ್ರಾವಣ ಮಂಗಳವಾರದಂದು ಯಾರನ್ನೂ ಅವಮಾನಿಸುವುದು, ಮನಸ್ಸಿಗೆ ನೋವುಂಟು ಮಾಡುವ ಕೆಟ್ಟ ಮಾತುಗಳನ್ನು ಆಡುವುದು ಅಥವಾ ಕೋಪಿಸಿಕೊಳ್ಳುವುದನ್ನು ಮಾಡಬಾರದು. ಸದಾ ಶಾಂತ ಮತ್ತು ಪವಿತ್ರ ಮನಸ್ಸಿನಿಂದ ಗೌರಿ ದೇವಿಯನ್ನು ಸ್ಮರಿಸುವುದರಿಂದ ವ್ರತದ ಪೂರ್ಣ ಫಲ ದೊರೆಯುತ್ತದೆ ಎಂದು ನಂಬಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ