Navratri 2024 Day 2 :ನವರಾತ್ರಿಯ ಎರಡನೇ ದಿನ ‘ಬ್ರಹ್ಮಚಾರಿಣಿ’ ಆರಾಧನೆಯ ಮಹತ್ವ

| Updated By: ಅಕ್ಷತಾ ವರ್ಕಾಡಿ

Updated on: Sep 29, 2024 | 5:39 PM

ಬ್ರಹ್ಮಚಾರಿಣಿ ತಾಯಿ ಹಂಸವಾಹಿನಿಯಾಗಿ, ಬಿಳಿಯ ಬಣ್ಣದಲ್ಲಿ ಶೋಭಿಸುತ್ತಾ, ಬಿಳಿಯ ಬಣ್ಣದ ಹೂವಿನ ಮಾಲೆಗಳಿಂದ ಅಲಂಕೃತಳಾಗಿರುತ್ತಾಳೆ. ನಾಲ್ಕು ತೋಳುಗಳಲ್ಲಿ ಯಜ್ಞಕ್ಕೆ ಅವಶ್ಯವಾದ ಸೃಕ್ ಹಾಗೂ ಸೃವ, ಮತ್ತೊಂದರಲ್ಲಿ ಕಮಂಡಲ ಹಿಡಿದರೆ, ಇನ್ನೊಂದರಲ್ಲಿ ಜಪಮಾಲೆ ಇರುತ್ತದೆ.

Navratri 2024 Day 2 :ನವರಾತ್ರಿಯ ಎರಡನೇ ದಿನ ‘ಬ್ರಹ್ಮಚಾರಿಣಿ’ ಆರಾಧನೆಯ ಮಹತ್ವ
Brahmacharini
Follow us on

ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯಂದು ‘ಬ್ರಹ್ಮಚಾರಿಣಿ’ ಸ್ವರೂಪಳಾದ ದುರ್ಗಾ ಆರಾಧನೆ ಮಾಡಬೇಕು. ರಂಗೋಲಿಯಲ್ಲಿ ಅಷ್ಟ ದಳವನ್ನು ಬಿಡಿಸಿ, ಕಲಶ ಸ್ಥಾಪನೆಯನ್ನು ಮಾಡಿ. ಆ ಕಲಶದಲ್ಲಿ ಈ ಕೆಳಗಿನ ಶ್ಲೋಕದೊಂದಿಗೆ ಬ್ರಹ್ಮಚಾರಿಣಿ ದೇವಿಯನ್ನು ಧ್ಯಾನಿಸಬೇಕು.

ಹಂಸಾರೂಢಾಂ ಶುಕ್ಲ ವರ್ಣಾಂ ಶುಕ್ಲಮಾಲ್ಯಾದ್ಯಲಂಕೃತಾಂ
ಚತುರ್ಭುಜಾಂ ಸೃಕ್‌ಸ್ರುವೌ ಚ ಕಮಂಡಲ್ವಕ್ಷಮಾಲಿಕಾಂ
ಬಿಭ್ರಿತೀಂ ಪೂಜಯೇದ್ದೇವೀಂ ದ್ವಿತೀಯಾಯಾಂ ಸದಾನೃಪ

ಆ ತಾಯಿ ಹಂಸವಾಹಿನಿಯಾಗಿ, ಬಿಳಿಯ ಬಣ್ಣದಲ್ಲಿ ಶೋಭಿಸುತ್ತಾ, ಬಿಳಿಯ ಬಣ್ಣದ ಹೂವಿನ ಮಾಲೆಗಳಿಂದ ಅಲಂಕೃತಳಾಗಿರುತ್ತಾಳೆ. ನಾಲ್ಕು ತೋಳುಗಳಲ್ಲಿ ಯಜ್ಞಕ್ಕೆ ಅವಶ್ಯವಾದ ಸೃಕ್ ಹಾಗೂ ಸೃವ, ಮತ್ತೊಂದರಲ್ಲಿ ಕಮಂಡಲ ಹಿಡಿದರೆ, ಇನ್ನೊಂದರಲ್ಲಿ ಜಪಮಾಲೆ ಇರುತ್ತದೆ. ಆದ್ದರಿಂದ ಬ್ರಹ್ಮಚಾರಿಣಿ ಪೂಜೆಯನ್ನು ಮಾಡುವಾಗ ಬಿಳಿಯ ಬಣ್ಣದ ಹೂವುಗಳನ್ನು ಬಳಸುವುದು ಶ್ರೇಷ್ಠ.

ಈ ದೇವಿಯು ತನ್ನ ಪೂರ್ವ ಜನ್ಮದಲ್ಲಿ ಪರ್ವತ ರಾಜನ ಮನೆಯಲ್ಲಿ ಹುಟ್ಟಿರುತ್ತಾಳೆ. ನಾರದರು ಉಪದೇಶ ಮಾಡಿದಂತೆ ದೇವಿಯು ಶಿವನನ್ನು ಪತಿಯನ್ನಾಗಿ ಪಡೆಯುವುದಕ್ಕೆ ತಪಸ್ಸು ಮಾಡುತ್ತಾಳೆ. ಒಂದು ಸಾವಿರ ವರ್ಷಗಳ ಕಾಲ ದೇವಿಯು ಹಣ್ಣು- ಎಲೆಗಳನ್ನು ತಿಂದು ಜೀವಿಸುತ್ತಾಳೆ. ಆ ನಂತರ ಒಂದು ಸಾವಿರ ವರ್ಷ ಕೇವಲ ನೆಲದ ಮೇಲೆ ಬಿದ್ದ ಒಣಗಿದ ಬಿಲ್ವಪತ್ರೆಗಳನ್ನು ಮಾತ್ರ ಸೇವಿಸುತ್ತಾಳೆ. ಅದಾದ ಮೇಲೆ ಅವುಗಳನ್ನು ಸಹ ಸೇವಿಸುವುದನ್ನು ನಿಲ್ಲಿಸುತ್ತಾಳೆ. ಹೀಗೆ ಸಾವಿರಾರು ವರ್ಷ ಆಹಾರವನ್ನೂ ಸೇವಿಸದೆ ತಪಸ್ಸು ಮಾಡಿದ ದೇವಿಯು ಎಲೆಗಳನ್ನು ಸಹ ಸೇವಿಸುವುದನ್ನು ನಿಲ್ಲಿಸಿದ್ದರಿಂದ ಆ ತಾಯಿಗೆ ‘ಅಪರ್ಣಾ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಇದನ್ನೂ ಓದಿ: ಶರನ್ನವರಾತ್ರಿ ಮೊದಲ ದಿನ ‘ಶೈಲಪುತ್ರಿ’ಯ ಆರಾಧನೆ; ಈ ದೇವಿಯ ಹಿನ್ನೆಲೆ ಹಾಗೂ ಮಹತ್ವ

ತಾಯಿಯ ಆ ತಪಸ್ಸಿಗೆ ದೇವತೆಗಳ ಮೆಚ್ಚಿ, ಆ ಸಾಕ್ಷಾತ್ ಚಂದ್ರಮೌಳಿಯೇ ನಿನ್ನ ಪತಿಯಾಗುತ್ತಾನೆ, ಇನ್ನು ತಪಸ್ಸನ್ನು ನಿಲ್ಲಿಸಿ, ಮನೆಗೆ ಹೋಗುವಂತೆ ಹೇಳುತ್ತಾರೆ. ಅಂದ ಹಾಗೆ ಅಂಥ ಕಠಿಣ ತಪಸ್ಸು ಮಾಡಿದ್ದರಿಂದ ಕೃಶ ಕಾಯಳಾಗಿದ್ದ ತನ್ನ ಮಗಳನ್ನು ಆಕೆಯ ತಾಯಿಯಾದ ಮೇನಾ ದೇವಿ “ಉ ಮಾ” ಹೀಗೆ ಮಾಡಬೇಡ ಎಂದು ಕೇಳಿಕೊಳ್ಳುತ್ತಾರೆ. ಆದ್ದರಿಂದ ಬ್ರಹ್ಮಚಾರಿಣಿ ದೇವಿಯ ಇನ್ನೊಂದು ಹೆಸರು ಉಮಾ ಅಂತಲೂ ಇದೆ.

ದೇವಿಯನ್ನು ನಾವು ಕಲಶದಲ್ಲಿ ಆವಾಹನೆ ಮಾಡಿ, ಶ್ರದ್ಧೆಯಿಂದ ಪೂಜಿಸಬೇಕು. ಪೂಜೆಯಲ್ಲಿ ಸುಗಂಧಭರಿತ ಶ್ವೇತ ಪುಷ್ಪಗಳಿಗೆ ಆದ್ಯತೆ. ಈ ಸ್ವರೂಪದಲ್ಲಿ ಆ ಭಗವತಿಯ ಆರಾಧನೆಯಿಂದ ಸಿಗುವ ಪ್ರಮುಖವಾದ ಫಲ ಎಂದರೆ, ಅಶಕ್ತರು ಸಶಕ್ತರಾಗುತ್ತಾರೆ.

ಯಾರ ಸಹಾಯವೂ ದೊರೆಯದೆ ಜೀವನದಲ್ಲಿ ಕಷ್ಟ ಪಡುತ್ತಾ ಇರುವವರಿಗೆ ಈ ದೇವಜಾತಾ ಸ್ವರೂಪಿಣಿಯ ಆರಾಧನೆಯಿಂದ ಅನಿರೀಕ್ಷಿತ ಸಹಾಯಗಳು ಲಭಿಸುತ್ತವೆ. ಇನ್ನು ಬೆಳಗ್ಗೆ ಪೂಜೆಯ ನಂತರ ಸಂಧ್ಯಾ ಸಮಯದಲ್ಲಿ ಮುತ್ತೈದೆಯರಿಗೆ ಅರಿಶಿನ- ಕುಂಕುಮವನ್ನು ಅಥವಾ ಬಾಗಿನವನ್ನು ಕೊಡುವುದರಿಂದ ಪೂರ್ಣಫಲ ಸಿಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:38 pm, Sun, 29 September 24