Navratri 2024: ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದಮಾತಾ; ದೇವಿಯ ಪೌರಾಣಿಕ ಹಿನ್ನೆಲೆ, ಪೂಜಾಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

| Updated By: ಅಕ್ಷತಾ ವರ್ಕಾಡಿ

Updated on: Oct 02, 2024 | 12:06 PM

ಇನ್ನು ಮಕ್ಕಳು ಇಲ್ಲದ ದಂಪತಿ ಸಂತಾನವನ್ನು ಪಡೆಯುವ ಬಯಕೆ ಇರುವಂಥವರು ಈ ಶರನ್ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಬೇಕು. ಶುಭ್ರವಾದ ಬಟ್ಟೆ ಧರಿಸಿ, ಸ್ಕಂದಮಾತೆಗೆ ಬಾಳೆಹಣ್ಣು ಮತ್ತು ಅದರಿಂದ ಮಾಡಿದ ವಸ್ತುಗಳನ್ನು ಅರ್ಪಿಸಬೇಕು. ಇದರಿಂದ ಆ ತಾಯಿ ಸಂತುಷ್ಟಳಾಗುತ್ತಾಳೆ.

Navratri 2024: ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದಮಾತಾ; ದೇವಿಯ ಪೌರಾಣಿಕ ಹಿನ್ನೆಲೆ, ಪೂಜಾಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ
Skandamata
Follow us on

ನವರಾತ್ರಿಯ ಐದನೇ ದಿನ ‘ಸ್ಕಂದಮಾತಾ’ ದೇವಿಯನ್ನು ಪೂಜಿಸಲಾಗುತ್ತದೆ. ದೇವತೆಗಳ ಸೇನಾಧಿಪತಿ ಕುಮಾರ ಕಾರ್ತಿಕೇಯ ಅಥವಾ ಸ್ಕಂದ. ಅಂಥ ಸ್ಕಂದನ ತಾಯಿಯಾದ್ದರಿಂದ ‘ಸ್ಕಂದಮಾತಾ’ ಎಂದು ಕರೆಯಲಾಗುತ್ತದೆ. ಸ್ಕಂದನು ಬಾಲ ರೂಪದಲ್ಲಿ ತಾಯಿಯ ತೊಡೆಯ ಮೇಲೆ ಕುಳಿತಿರುತ್ತಾನೆ. ತಾಯಿಗೆ ಈ ರೂಪದಲ್ಲಿ ನಾಲ್ಕು ಭುಜಗಳು. ಬಲಗಡೆಯ ಮೇಲಿನ ಕೈಯಿಂದ ಸ್ಕಂದನನ್ನು ಹಿಡಿದಿದ್ದಾಳೆ. ಬಲಗಡೆಯ ಇನ್ನೊಂದು ಕೈಯಲ್ಲಿ ಕಮಲದ ಪುಷ್ಪವನ್ನು ಹಿಡಿದುಕೊಂಡಿದ್ದಾಳೆ. ಇನ್ನು ಎಡಗಡೆಯ ಮೇಲಿನ ಕೈಯಲ್ಲಿ ವರ ಮುದ್ರೆ ಇದ್ದು, ಎಡಗಡೆಯ ಮತ್ತೊಂದು ಕೈಯಲ್ಲಿ ಕಮಲವನ್ನೇ ಹಿಡಿದಿದ್ದಾಳೆ.

ಆಕೆಯ ಶರೀರ ಬಣ್ಣ ಸಂಪೂರ್ಣವಾಗಿ ಬಿಳುಪಾಗಿದ್ದು, ಕಮಲದ ಹೂವಿನ ಆಸನದ ಮೇಲೆ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕೆ ದೇವಿಯನ್ನು ಪದ್ಮಾಸನಾದೇವಿ ಅಂತಲೂ ಕರೆಯಲಾಗುತ್ತದೆ. ಆಕೆಯ ವಾಹನ ಸಿಂಹವಾಗಿದೆ. ಆರಾಧನೆ ಮಾಡುವಂಥವರಿಗೆ ಈ ದಿನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ.

ಸ್ಕಂದಮಾತಾ ಸ್ವರೂಪದಲ್ಲಿ ದೇವಿಯ ಆರಾಧನೆ ಮಾಡಿದಾಗ ಮನಸ್ಸಿನ ಕೋರಿಕೆಗಳು ನೆರವೇರುತ್ತವೆ. ಶಾಂತಿ, ನೆಮ್ಮದಿ ದೊರೆಯುತ್ತದೆ. ತಾಯಿಯ ಕೈಂಕರ್ಯದ ಜತೆಜತೆಗೆ ಬಾಲರೂಪಿಯಾದ ಸ್ಕಂದನ ಆರಾಧನೆ ಸಹ ಮಾಡಿದಂತಾಗುತ್ತದೆ. ಆ ದೇವಿಯ ಆರಾಧಿಸುವವರಲ್ಲಿ ಅಲೌಕಿಕವಾದ ತೇಜಸ್ಸು ಹಾಗೂ ಕಾಂತಿಯೊಂದು ಇರುತ್ತದೆ. ಇನ್ನು ತನ್ನ ಭಕ್ತರ ಯೋಗಕ್ಷೇಮವನ್ನು ಆ ತಾಯಿ ನೋಡಿಕೊಳ್ಳುತ್ತಾಳೆ.

ಇನ್ನು ಮಕ್ಕಳು ಇಲ್ಲದ ದಂಪತಿ ಸಂತಾನವನ್ನು ಪಡೆಯುವ ಬಯಕೆ ಇರುವಂಥವರು ಈ ಶರನ್ನವರಾತ್ರಿಯ ಐದನೇ ದಿನದಂದು ಈ ವ್ರತ ಆಚರಿಸಬೇಕು. ಶುಭ್ರವಾದ ಬಟ್ಟೆ ಧರಿಸಿ, ಸ್ಕಂದಮಾತೆಗೆ ಬಾಳೆಹಣ್ಣು ಮತ್ತು ಅದರಿಂದ ಮಾಡಿದ ವಸ್ತುಗಳನ್ನು ಅರ್ಪಿಸಬೇಕು. ಇದರಿಂದ ಆ ತಾಯಿ ಸಂತುಷ್ಟಳಾಗುತ್ತಾಳೆ.

ಸ್ಕಂದಮಾತಾ ಪೌರಾಣಿಕ ಹಿನ್ನೆಲೆ:

ಪುರಾಣದ ಹಿನ್ನೆಲೆಯಂತೆ, ತಾರಕಾಸುರನೆಂಬ ರಾಕ್ಷಸನು ಬ್ರಹ್ಮ ದೇವರನ್ನು ಕುರಿತು ತೀವ್ರ ತಪಸ್ಸು ಮಾಡಿದ. ಆತನ ತಪಸ್ಸಿಗೆ ಒಲಿದ ಬ್ರಹ್ಮನು ತಾರಕಾಸುರನಿಗೆ ಅಮರತ್ವದ ವರ ನೀಡಿದ. ಆದರೂ ಬ್ರಹ್ಮನು ತಾರಕಾಸುರನಿಗೆ, ಜನ್ಮ ಪಡೆದವರು ಮರಣವನ್ನು ಅಪ್ಪಲೇಬೇಕು ಎಂದು ವಿವರಿಸಿದ. ಆಗ ತಾರಕಾಸುರನು, ಶಿವನ ಮಗನಿಂದ ತನಗೆ ಸಾವಾಗಲಿ ಎಂದು ಕೇಳಿಕೊಂಡ. ಏಕೆಂದರೆ ಶಿವನು ಎಂದಿಗೂ ಮದುವೆ ಆಗುವುದಿಲ್ಲ, ಮತ್ತು ಮದುವೆಯಾದರೂ ಮಗನು ಜನಿಸುವುದಿಲ್ಲ ಎಂದು ರಾಕ್ಷಸನು ಭಾವಿಸಿದ್ದ.

ಇದನ್ನೂ ಓದಿ: Navratri 2024 Day 4: ನವರಾತ್ರಿ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ; ಪುರಾಣ ಕಥೆಯ ವಿವರ ಇಲ್ಲಿದೆ

ಬ್ರಹ್ಮನಿಂದ ವರವನ್ನು ಪಡೆದುಕೊಂಡ ನಂತರದಲ್ಲಿ ತಾರಕಾಸುರನು ಅಮಾಯಕ ಜನರಿಗೆ ಹಿಂಸೆ ಮಾಡುವುದಕ್ಕೆ ಆರಂಭಿಸಿದ. ಆ ಜನರು ಶಿವನ ಬಳಿಗೆ ಹೋಗಿ, ತಾರಕಾಸುರನ ವಧೆಗಾಗಿ ಪ್ರಾರ್ಥಿಸಿದರು. ಆ ನಂತರದಲ್ಲಿ ಶಿವನು ಪಾರ್ವತಿಯನ್ನು ವಿವಾಹವಾದ ಹಾಗೂ ಕಾರ್ತಿಕೇಯ ಜನಿಸಿದ. ಕಾರ್ತಿಕೇಯನು ರಾಕ್ಷಸನಾದ ತಾರಕಾಸುರನನ್ನು ಕೊಂದ. ಅಂಥ ಸ್ಕಂದನಿಗೆ ತಾಯಿಯಾದ್ದರಿಂದ ಕಾರ್ತಿಕೇಯನು ಅವಳನ್ನು ಸ್ಕಂದಮಾತಾ ಎಂದು ಕರೆದ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ